ರಾಹುಲ್ ಗೆ ಅಂಟಿದ್ದ ಅಪ ’ಕೀರ್ತಿ’ ದೂರ

ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿಯ ವಿರುದ್ಧ ಹೇಬಿಯಸ್ ಕಾರ್ಪಸ್ ಅರ್ಜಿ ಹಾಕಿದ್ದ ಮಧ್ಯಪ್ರದೇಶದ ಮಾಜಿ ಶಾಸಕ ಕಿಶೋರ್ ಸಮ್ರಿತೆ ವಿರುದ್ಧ ಸಿಬಿಐ ತನಿಖೆ ನಡೆಸುವಂತೆ ಅಲಹಾಬಾದ್ನ ಲಕ್ನೋ ಪೀಠ ಆದೇಶಿಸಿದೆ. ರಾಹುಲ್ ರಿಂದ ಅಪಹರಣಕ್ಕೊಳಗಾದಿದ್ದಾಳೆ ಎನ್ನಲಾದ 'ಸುಕನ್ಯಾ" ಎಂಬ ಯುವತಿ, ಸ್ವತಃ ನ್ಯಾಯಾಲಯಕ್ಕೆ ಹಾಜರಾಗಿ 'ಇಂತಹ ಯಾವುದೇ ಘಟನೆಗಳು ನಡೆದಿಲ್ಲ" ಎಂದು ಸ್ಪಷ್ಟಪಡಿಸಿದ ನಂತರ ನ್ಯಾಯಮೂರ್ತಿಗಳಾದ ಉಮಾನಾಥ್ ಸಿಂಗ್ ಮತ್ತು ಸತೀಶ್ ಚಂದ್ರರನ್ನೊಳಗೊಂಡ ಪೀಠ ಈ ಆದೇಶ ನೀಡಿದೆ.
ರಾಹುಲ್ ಗಾಂಧಿಯಿಂದ ಸುಕನ್ಯಾ ಅಪಹರಣ ಎಂದು ಸುದ್ದಿ ಪ್ರಕಟಿಸಿದ್ದ ವೆಬ್ಸೈಟ್ನ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಪೀಠವು ಆದೇಶಿಸಿದೆ. ಸುಕನ್ಯಾ ಮತ್ತು ಆಕೆಯ ಹೆತ್ತವರನ್ನು ರಾಹುಲ್ ಗಾಂಧಿ ಅಪಹರಿಸಿ ಬಂಧನದಲ್ಲಿಟ್ಟಿದ್ದಾರೆ. ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕೆಂದು ಕಿಶೋರ್ ಹಾಗೂ ಸುಕನ್ಯಾಳ ಸಂಬಂಧಿ ಗಜೇಂದ್ರ ಪಾಲ್ ಸಿಂಗ್ ಎಂಬುವರು ಅರ್ಜಿ ಸಲ್ಲಿಸಿದ್ದರು.. ನ್ಯಾಯಾಲಯದ ಆದೇಶದಂತೆ ಸುಕನ್ಯಾ ಹಾಗೂ ಆಕೆಯ ಹೆತ್ತವರನ್ನು ನ್ಯಾಯಾಲಯಕ್ಕೆ ಡಿಜಿಪಿ ಕರ್ಮವೀರ್ ಸಿಂಗ್ ಹಾಜರುಪಡಿಸಿದ್ದರು.
ಸುಕನ್ಯಾ ಅದಳು ಕೀರ್ತಿ: ನನ್ನ ನಿಜವಾದ ಹೆಸರು ಕೀರ್ತಿ ಸಿಂಗ್ ಎಂದಾಗಿದೆ. ಬಲರಾಮ್ ಸಿಂಗ್ ಹಾಗೂ ಸುಶೀಲಾ ಸಿಂಗ್ ತನ್ನ ಹೆತ್ತವರಾಗಿದ್ದಾರೆ. ತನ್ನನ್ನಾಗಲೀ ತನ್ನ ಹೆತ್ತವರನ್ನಾಗಲೀ ಯಾರೂ ಅಪಹರಿಸಿಲ್ಲ. ಈ ಬಗ್ಗೆ ವೆಬ್ಸೈಟ್ವೊಂದರಲ್ಲಿ ಪ್ರಕಟವಾದ ಸುದ್ದಿ ಸತ್ಯದಿಂದ ಕೂಡಿಲ್ಲ ಎಂದು ನ್ಯಾಯಾಲಯಕ್ಕೆ ಸುಕನ್ಯಾ ತಿಳಿಸಿದಳು. ಕೀರ್ತಿ ನೀಡಿದ ಹೇಳಿಕೆಯ ಆಧಾರದ ಮೇಲೆ ನ್ಯಾಯಪೀಠ ಮೇಲ್ಕಂಡ ಆದೇಶ ನೀಡಿ ಅರ್ಜಿದಾರರಿಗೆ ಛೀಮಾರಿ ಹಾಕಿದೆ.












Click it and Unblock the Notifications