ಭೂಹಗರಣ: ಯಡಿಯೂರಪ್ಪಗೆ ಪಕ್ಷದ ಕ್ಲೀನ್ ಚಿಟ್

ಬಿಜೆಪಿ ಪಕ್ಷದ ಹಿರಿಯ ನಾಯಕ ಅರುಣ್ ಜೇಟ್ಲಿ ಅವರು ಮುಖ್ಯಮಂತ್ರಿ ವಿರುದ್ಧ ಕೇಳಿ ಬಂದಿದ್ದ ಭೂಹಗರಣದ ಸಾಧಕ-ಬಾಧಕಗಳ ಬಗ್ಗೆ ಸಮಗ್ರ ಅಧ್ಯಯನ ನಡೆಸಿದ್ದು, ಯಡಿಯೂರಪ್ಪ ಅವರಿಗೆ ಯಾವುದೇ ತೊಂದರೆ ಇಲ್ಲ ಎಂದು ವರದಿ ಸಲ್ಲಿಸಿರುವುದೇ ಇದಕ್ಕೆ ಕಾರಣವಾಗಿದೆ. ಯಡಿಯೂರಪ್ಪ ವಿರುದ್ಧದ ಭೂಹಗರಣ ಎಂಬುದು ಈಗ ನ್ಯಾಯಾಲಯದಲ್ಲಿ ತೀರ್ಮಾನವಾಗಬೇಕಿದೆ. ಪಕ್ಷದ ವತಿಯಿಂದ ಇದು ಮುಗಿದ ಅಧ್ಯಾಯವಾಗಿದೆ.
ಗುರುವಾರ ಬೆಳಗ್ಗೆ ಸುದ್ದಿಗಾರರ ಜತೆ ಮಾತನಾಡಿದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಇದರ ವಿವರ ನೀಡಿದ್ದಾರೆ. ಜೇಟ್ಲಿ ಅವರ ವರದಿಯನ್ನಾಧರಿಸಿ ಯಡಿಯೂರಪ್ಪ ಅವರಿಗೆ ಭೂಹಗರಣದ ಸಂಬಂಧ ಕ್ಲೀನ್ ಚಿಟ್ ನೀಡಲಾಗಿದೆ. ಆದ್ದರಿಂದ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಇತ್ತೀಚೆಗೆ ನಡೆದ ಎಲ್ಲ ಚುನಾವಣೆಗಳಲ್ಲಿಯೂ ಪಕ್ಷ ಜಯಭೇರಿ ಬಾರಿಸಿದೆ. ಇದರಿಂದ ಮತದಾರ ಯಡಿಯೂರಪ್ಪ ಅವರ ಆಡಳಿತದ ಬಗ್ಗೆ ಒಲುವು ತೋರಿದಂತಾಗಿದೆ. ಜನತಾ ನ್ಯಾಯಾಲಯದಲ್ಲಿ ಸಿಕ್ಕಿರುವ ಈ ತೀರ್ಪಿಗೆ ತಲೆಬಾಗುತ್ತೇವೆ. ಆದ್ದರಿಂದ ಪಕ್ಷ ಇದರಲ್ಲಿ ಮೂಗು ತೂರಿಸುವ ಅಗತ್ಯವಿಲ್ಲ ಎಂದು ಜೇಟ್ಲಿ ಕ್ಲೀನ್ ಚಿಟ್ ನೀಡಿರುವುದಾಗಿ ಗಡ್ಕರಿ ಹೇಳಿದ್ದಾರೆ.
ಈ ಅನಿರೀಕ್ಷಿತ ಬೆಳವಣಿಗೆಯಿಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೊಸ ಹುರುಪಿನೊಂದಿಗೆ ತಮ್ಮ ಚೊಚ್ಚಲ ಕೃಷಿ ಬಜೆಟ್ ಮಂಡಿಸಲು ರೈತರ ಮೆರವಣಿಗೆಯ ಮೂಲಕ ವಿಧಾನಸೌಧಕ್ಕೆ ತೆರಳಿದ್ದಾರೆ.












Click it and Unblock the Notifications