ಸಚಿನ್ ಗೆ ವಿಶ್ವಕಪ್ ಅರ್ಪಣೆ: ಧೋನಿ ಮೇಲೆ ಟೀಕಾಸ್ತ್ರ
'ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸಿದರಂತೆ" ಎಂಬ ನಾಣ್ಣುಡಿ ನಮ್ಮ ಕ್ರಿಕೆಟ್ ಕಪ್ತಾನ ಧೋನಿಯ ನುಡಿಗೆ ಸರಿಯಾಗಿ ಒಪ್ಪುತ್ತದೆ ! ವಿಶ್ವಕಪ್ ಟೂರ್ನಿಗೆ ಕ್ಷಣ ಗಣನೆಯಾಗುತ್ತಿರುವ ಈ ಸಂದರ್ಭದಲ್ಲಿ ಧೋನಿ ಅತಿಯಾದ ಆತವಿಶ್ವಾಸದಿಂದ ನೀಡಿರುವ ಹೇಳಿಕೆಗೆ ಹಿರಿಯ ಕ್ರಿಕೆಟ್ಟಿಗರಿಂದ ಆಕ್ಷೇಪಗಳು ಕೇಳಿ ಬಂದಿವೆ. ಕ್ರಿಕೆಟ್ ಅಭಿಮಾನಿಗಳಿಗೂ ಇರುಸು ಮುರುಸು ಉಂಟಾಗಿದೆ. ಸಚಿನ್ ಬಗ್ಗೆ ಎಲ್ಲರಿಗೂ ಗೌರವವಿದೆ. ಸಚಿನ್ ಕ್ರಿಕೆಟ್ ಜಗತ್ತಿನ ಅಪ್ರತಿಮ ಆಟಗಾರ ನಿಜ. ಅಂದ ಮಾತ್ರಕ್ಕೆ “ಈ ಬಾರಿ ವಿಶ್ವಕಪ್ 'ಗೆದ್ದು" ಅದನ್ನು ಸಚಿನ್ಗೆ ಅರ್ಪಿಸುವೆ" ಎನ್ನುವ ಧೋನಿ ನುಡಿ ಅಪ್ರಿಯವೂ ಅಪಥ್ಯವೂ ಆಗಿದೆ.
ಏಕೆಂದರೆ ಮೊದಲಾಗಿ ನೀವು ದೇಶಕ್ಕಾಗಿ ಆಡಬೇಕು ತಾನೇ ? ಇಷ್ಟೇ ಯಾಕೆ ಸಚಿನ್ ಕೂಡಾ ಈ ಬಾರಿ ಸ್ವಯಂ ದಾಖಲೆಯ ಬದಲಾಗಿ ದೇಶಕ್ಕಾಡುವ ಮನಸ್ಸು ಮಾಡಬೇಕು. ಆಗ ಮಾತ್ರ ಆತನ ಕ್ರಿಕೆಟ್ ಜೀವನದಲ್ಲಿ ಇದುವರೆಗೂ ಕಾಡುತ್ತಿರುವ ಕೊರತೆಯೊಂದು ನೀಗಲಿದೆ. ಇಲ್ಲದಿದ್ದರೆ ಆತ ವಿಶ್ವಕಪ್ ಗೆಲ್ಲುವಲ್ಲಿ ವಿಫಲನಾದ ಭಾರತೀಯ ಕ್ರಿಕೆಟಿಗ ಎಂಬ ಹೊಸತೊಂದು ದಾಖಲೆ ಬರೆಯಬೇಕಾಗುತ್ತದೆ. ಅಂತಹದೊಂದು ದಾಖಲೆ ಸಚಿನ್ ಸಾಧನೆ, ದಾಖಲೆಗಳ ಪಟ್ಟಿಯನ್ನೇ ಉಲ್ಟಾಪಲ್ಟಿ ಮಾಡಲಿದೆ. ಅಂದರೆ, 'ಎಲ್ಲ ಬಣ್ಣ ಮಸಿ ನುಂಗಿತು" ಬಂತಾಗಲಿದೆ.
ಕ್ರಿಕೆಟ್ ವಿಶ್ವಕಪ್ 2011 ವೇಳಾಪಟ್ಟಿ
ವಿಶ್ವಕಪ್ ಕ್ರಿಕೆಟ್ 2011: ಸಮಗ್ರ ಸುದ್ದಿ ಸಂಗ್ರಹ
ವಿಶ್ವಕಪ್ ರಿಯಲ್ ಸ್ಟಾರ್ ಗಳ ಟೀಕೆ: ಏನೇ ಇರಲಿ, ಧೋನಿ ಮಾತು ಸ್ವಲ್ಪ ಉದ್ದಟತನ ಹಾಗೂ ಅತಿಯಾದ ಆತ್ಮವಿಶ್ವಾಸದಿಂದ ಕೂಡಿದ ಹಾಗಿದೆ. ವಿಶ್ವದ ಶ್ರೇಷ್ಠ ಆಟಗಾರರಾದ ವಿವಿಯನ್ ರಿಚರ್ಡ್ಸ್ ಮತ್ತು ಇಮ್ರಾನ್ ಖಾನ್ ಅವರು, "ಈ ಹಂತದಲ್ಲಿ ಧೋನಿ ಅವರಾಡಿರುವ ಮಾತು ಸರಿಯಲ್ಲ. ಮೊದಲು ಭಾರತಕ್ಕೆ ವಿಶ್ವಕಪ್ ಗೆಲ್ಲಲು ಸಚಿನ್ ಸಹಿತ ನೀವೆಲ್ಲರೂ ಪ್ರಯತ್ನಿಸಬೇಕು. ಆನಂತರ ಉಳಿದುದೆಲ್ಲ. ಭಾರತ ನಾಯಕ ಮೊದಲು ಅದನ್ನು ಗೆದ್ದು ನಂತರ ಸಮರ್ಪಿಸಲಿ" ಎಂದಿರುವುದು ಸೂಕ್ತವಾಗಿದೆ. ಈ ಇಬ್ಬರು ಆಟಗಾರರು ತಮ್ಮ ದೇಶಕ್ಕಾಗಿ ವಿಶ್ವಕಪ್ ಗೆಲ್ಲಿಸಿಕೊಡುವಲ್ಲಿ ಮಹತ್ವದ ಪಾತ್ರವಹಿಸಿದ್ದರು ಎಂಬುದನ್ನು ಮರೆಯುವಂತಿಲ್ಲ.
"ವಿಶ್ವಕಪ್ ಮುಗಿದ ಬಳಿಕ ನಮಗೆ ಐಪಿಎಲ್ ಟೂರ್ನಿ ಇದೆ" ಎಂದು ಧೋನಿ ಹೇಳಿದ್ದೂ ಆಕ್ಷೇಪಾರ್ಹ ! ಏಕೆಂದರೆ ಅವರ ದೃಷ್ಟಿ ವಿಶ್ವಕಪ್ ಗೆ ಕೇಂದ್ರೀಕೃತವಾಗಿಲ್ಲ ಎಂಬುದನ್ನು ಈ ಮಾತಿನ ಸೂಚ್ಯಾರ್ಥ. ಅಂದರೆ, ವಿಶ್ವಕಪ್ ಗೆಲ್ಲದಿದ್ದರೂ ಅದಕ್ಕಿಂತ ಹೆಚ್ಚು ಹಣ ಐಪಿಎಲ್ನಿಂದ ಸಿಗುತ್ತದಲ್ಲಾ ಎಂಬ ಇರಾದೆಯಿಂದ ಅವರು ಹೀಗೆ ಹೇಳಿಕೆ ನೀಡಿರಲೂಬಹುದು.
ಐಸಿಸಿಯಿಂದಲೂ ಧೋನಿಗೆ ಎಚ್ಚರಿಕೆ: ಆರನೆ ಬಾರಿಗೆ ವಿಶ್ವಕಪ್ ಆಡಲಿರುವ ಸಚಿನ್ ಬಗ್ಗೆ ಧೋನಿಗೆ ಯಾವುದೇ ಗೌರವ ಭಾವನೆಗಳಿದ್ದರೂ, ಅದನ್ನು ಬಹಿರಂಗವಾಗಿ ವ್ಯಕ್ತಪಡಿಸುವ ಮುನ್ನ ಆಲೋಚಿಸುವುದು ಒಳ್ಳೆಯದು ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. ಒಟ್ಟಿನಲ್ಲಿ ಈಗಾಗಲೇ 'ಆಂಬುಶ್ ಮಾರ್ಕೆಟಿಂಗ್' ನಿಯಮಾವಳಿಯನ್ನು ಉಲ್ಲಂಘಿಸಿ, 'ಸೋನಿ' ಮತ್ತು 'ಏರ್ಸೆಲ್' ಪರ ಧೋನಿ ಜಾಹೀರಾತು ಪ್ರಚಾರದಲ್ಲಿ ತೊಡಗಿದ್ದ ಧೋನಿಗೆ ಐಸಿಸಿ ಎಚ್ಚರಿಕೆ ನೀಡಿದೆ.
ಏನಿದು ಐಸಿಸಿ 'ಆಂಬುಶ್ ಮಾರ್ಕೆಟಿಂಗ್' ನಿಯಮಾವಳಿ: ವಿಶ್ವಕಪ್ನ ಅಧಿಕೃತ ಪ್ರಾಯೋಜಕನಾಗಿರುವ ಕಂಪೆನಿಯ ಎದುರಾಳಿಯ ಸಂಸ್ಥೆಯ ಪರ ಕೂಟದ 7 ದಿನ ಮೊದಲಿನಿಂದ ಪ್ರಚಾರ ನಡೆಸುವುದು ಅಥವಾ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದು ನಿಯಮದ ಉಲ್ಲಂಘನೆಯಾಗಿದೆ. ಆದರೆ ಆಟಗಾರನು ತನ್ನ ಬಿಳಿ ಕ್ರಿಕೆಟ್ ಧಿರಿಸು ಅಥವಾ ಬೇರೆ ಯಾವುದೇ ಸಾಮಾನ್ಯ ಧಿರಿಸಿನೊಂದಿಗೆ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲು ಅವಕಾಶವಿದೆ. ತನ್ನ ತಂಡದ ರಾಷ್ಟ್ರೀಯ ಸಮವಸ್ತ್ರ ಅಥವಾ ವಿಶ್ವಕಪ್ ಸಂಬಂಧಿಸಿದ ಯಾವುದೇ ಲಾಂಛನ ಬಳಸುವಂತಿಲ್ಲ.
ಧೋನಿ ತಂಡದ ನಾಯಕನಾಗಿ ವಿಶ್ವಕಪ್ ಕ್ರಿಕೆಟ್ ನಲ್ಲಿ ಟೀಂ ಇಂಡಿಯಾವನ್ನು ಸಮರ್ಧವಾಗಿ ಮುನ್ನಡೆಸಿ, ಆರಂಭ ಶೂರತ್ವವನ್ನು ಮುಂದುವರೆಸಲಿ, ವಿಶ್ವಕಪ್ ಗೆದ್ದು ಕ್ರಿಕೆಟ್ ದೇವರಿಗೆ ಅರ್ಪಿಸಲಿ ಅಲ್ಲಿ ತನಕ ಮಾತಿಗಿಂತ ಕೃತಿ ಮೇಲು ಎಂಬ ಗಾದೆ ಮಾತು ತಲೆಯಲ್ಲಿರಿಸಿಕೊಳ್ಳಲಿ.












Click it and Unblock the Notifications