ಜೀವ ಬೆದರಿಕೆ ಕರೆ: ರಾಮದಾಸ್ ಲೇಟೆಸ್ಟ್

ಮುಖ್ಯಮಂತ್ರಿ ಸೇರಿದಂತೆ ಹಿರಿಯ ಸಚಿವರುಗಳಿಗೆ ಬೆದರಿಕೆ ಕರೆ ಇದೆ. ಈ ಬಗ್ಗೆ ಗೃಹ ಇಲಾಖೆ ಏನು ಕ್ರಮ ಕೈಗೊಂಡಿದೆ ಎಂದು ವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಆರ್ ಅಶೋಕ್, ರಾಜ್ಯದಲ್ಲಿ ಶೇ.90ರಷ್ಟು ಶಾಸಕರು ನಮಗೆ ಜೀವ ಬೆದರಿಕೆ ಇದೆ. ನಮಗೆ ರಕ್ಷಣೆ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ ಎಂದಿದ್ದಾರೆ.
ರೋಗಿಗಳ ವಿವರ ಕನ್ನಡದಲ್ಲಿರಲಿ, ರೋಗಿ ಹಾಗೂ ವೈದ್ಯರ ಸಂವಹನ ಭಾಷೆ ಕನ್ನಡದಲಿರಲಿ, ಸ್ವಚ್ಛತೆ ಬಗ್ಗೆ ಗಮನವಿರಲಿ, ಹಾಜರಾತಿ ಕಡ್ಡಾಯವಾಗಿರಲಿ, ಅದು ಇರಲಿ ಇದು ಇದು ಇರಲಿ ಎಂದು ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಗೆ ಅನಿರೀಕ್ಷಿತ ಭೇಟಿ ನೀಡಿ ವೈದ್ಯರು ಹಾಗೂ ನರ್ಸ್ ಸಿಬ್ಬಂದಿಗಳಿಗೆ ಸಚಿವ ರಾಮದಾಸ್ ಸೋಮವಾರ ಪಾಠ ಮಾಡಿದ್ದರು. ನಂತರ ಅವರಿಗೆ ಅನಾಮಿಕ ವ್ಯಕ್ತಿಯಿಂದ ಬೆದರಿಕೆ ಕರೆ ಬಂದಿದ್ದು, ಮಾಧ್ಯಮಗಳ ಮುಂದೆ ಈ ವಿಷಯವನ್ನು ಸ್ವತಃ ಸಚಿವರೇ ಇಂದು ಹೇಳಿದರು. ನಂತರ ಈ ಬಗ್ಗೆ ಅಶೋಕ್ ಅವರು ಪ್ರತಿಕ್ರಿಯಿಸಿ, ಬೆದರಿಕೆ ಕರೆ ಬಂದಿರುವ ಶಾಸಕರಿಗೆ ಸೂಕ್ತ ಭದ್ರತೆ ಒದಗಿಸಲಾಗುವುದು ಎಂದರು.
ನರ್ಸಿಂಗ್ ಮಾಫಿಯಾದಿಂದ ಬೆದರಿಕೆ ಕರೆಗಳು ಬಂದಿದ್ದು ಇದರಿಂದ ನನಗೇನು ಭಯವಾಗಿಲ್ಲ ಎಂದಿರುವ ರಾಮದಾಸ್ ಇಂದು ಕೂಡಾ ದಾಳಿ ಮುಂದುವರೆಸಿದರು. ಹುಣಸೂರಿನ ಬಿಳಿಕೆರೆ ಆಸ್ಪತ್ರೆಗೆ ಭೇಟಿ ನೀಡಿದ ಸಚಿವರು, ಹಾಜರಾತಿಯಲ್ಲಿ ವ್ಯತ್ಯಯ ಕಂಡು ಬಂದಾಗ ಕೆಂಡಮಂಡಾಲವಾಗಿ ವೈದ್ಯಾಧಿಕಾರಿಯ ಅಮಾನತಿಗೆ ಆದೇಶ ನೀಡಿದರು.












Click it and Unblock the Notifications