ಮತ್ತೊಂದು ಸ್ಪೆಕ್ಟ್ರಂ ಹಗರಣ: ಇಸ್ರೊ ಮೇಲೆ ಕರಿನೆರಳು
ಇಸ್ರೊ, ನೇರವಾಗಿ ಪ್ರಧಾನಿ ನೇತೃತ್ವದಲ್ಲಿ ಕಾರ್ಯನಿರ್ವಹಿಸುವ ಬಾಹ್ಯಾಕಾಶ ಇಲಾಖೆಯ ಸುಪರ್ದಿಯಲ್ಲಿದೆ. ಅಂದಹಾಗೆ, ದೇವಾಸ್ ಮಲ್ಟಿಮೀಡಿಯಾ ಕಂಪನಿಯ ಅಧ್ಯಕ್ಷ ಡಾ. ಎಂ.ಜಿ. ಚಂದ್ರಶೇಖರ್ ಅವರು ಈ ಹಿಂದೆ ಇಸ್ರೋ ಸಂಸ್ಥೆಯ ವೈಜ್ಞಾನಿಕ ಕಾರ್ಯದರ್ಶಿಯಾಗಿದ್ದರು.
ಒಪ್ಪಂದದ ಅನುಸಾರ ದೇವಾಸ್ ಕಂಪನಿಗಾಗಿ ಎರಡು ಉಪಗ್ರಹಗಳನ್ನು ಉಡಾವಣೆ ಮಾಡುವ ಜವಾಬನ್ದಾರಿಯನ್ನು ಇಸ್ರೊ ಹೊತ್ತಿತ್ತು. ಆದರೆ ಇದರ ಒಳಸುಳಿ ಏನೆಂದರೆ 20 ವರ್ಷಗಳ ಕಾಲ ದುಬಾರಿ ಎಸ್-ಬ್ಯಾಂಡ್ನ 70 ಮೆಗಾಹರ್ಟ್ಸ್ ಸ್ಪೆಕ್ಟ್ರಂಅನ್ನು ಅಭಾದಿತವಾಗಿ ಬಳಸಿಕೊಳ್ಳಲು ದೇವಾಸ್ಗೆ ಅನುವು ಮಾಡಿಕೊಡಲಾಗಿದೆ. ಇದರಿಂದ ಖಜಾನೆಗೆ 2 ಲಕ್ಷ ಕೋಟಿ ರೂ. ನಷ್ಟವುಂಟಾಗಿದೆ ಎಂದು ಸಿಎಜಿಯ ಪ್ರಾಥಮಿಕ ಅಂದಾಜಿನಿಂದ ತಿಳಿದುಬಂದಿದೆ.
ಸ್ಪರ್ಧಾತ್ಮಕ ಬಿಡ್ಡಿಂಗ್ ನಡೆಸದೆ ನೇರವಾಗಿ ದೇವಾಸ್ಗೆ ದುಬಾರಿ ಎಸ್-ಬ್ಯಾಂಡ್ ಸ್ಪೆಕ್ಟ್ರಂಅನ್ನು ಹಂಚಿದ್ದಾದರೂ ಹೇಗೆ? ಸಾರ್ವಜನಿಕ ಹಣದಲ್ಲಿ ದೇವಾಸ್ಗೆ ಉಪಗ್ರಹಗಳನ್ನು ನಿರ್ಮಿಸಿಕೊಟ್ಟಿದ್ದಾದರೂ ಏಕೆ? ಇಂತಹ ಬೃಹತ್ ಯೋಜನೆಯ ಲೆಕ್ಕವನ್ನು ಮರೆ ಮಾಚಿದ್ದಾದರೂ ಏಕೆ? ಎಂದು ಸಿಎಜಿ ಬಾಹ್ಯಾಕಾಶ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡಿದೆ.
ದಾಖಲಾರ್ಹವೆಂದರೆ, 2010ರಲ್ಲಿ ಇದೇ ತರಂಗಗುಚ್ಛದ ಕೇವಲ 15 ಮೆಗಾಹರ್ಟ್ಸ್ಅನ್ನು ಹರಾಜು ಹಾಕಿದಾಗ ಸರಕಾರಕ್ಕೆ 67,719 ಕೋಟಿ ರೂ. ಹರಿದುಬಂದಿತ್ತು. 2010ರ ಜುಲೈನಲ್ಲಿ ಬಾಹ್ಯಾಕಾಶ ಆಯೋಗ ಒಪ್ಪಂದದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಒಪ್ಪಂದವನ್ನು ಕೈಬಿಡುವಂತೆಯೂ ಸೂಚಿಸಿತ್ತು.