ಸಂಕ್ರಾಂತಿ ಜತೆ ಬೆಂಗಳೂರು ಹಬ್ಬ 2011 ಶುರು

ಸ್ಥಳೀಯ ಕಲಾವಿದರಿಗೆ ಮನ್ನಣೆ: ಸ್ಥಳೀಯ ಜಾನಪದ ಮತ್ತು ಬುಡಕಟ್ಟು ನೃತ್ಯ ಈ ಬಾರಿಯ ಹಬ್ಬದ ಪ್ರಮುಖ ಆಕರ್ಷಣೆ. ಹೆಸರಾಂತ ಕಲಾವಿದರ ಕುಂಚದಿಂದ ಹೊರಹೊಮ್ಮಿದ ಚಿತ್ರಕಲಾ ಕೃತಿಗಳ ವೀಕ್ಷಣೆಗೆ, ಕಲಾವಿದರ ಮತ್ತು ಕಲಾಪ್ರೇಮಿಗಳ ಸಂವಾದಕ್ಕೂ ಅವಕಾಶವಿದೆ. ಅಪ್ಪರಾವ್ ಗ್ಯಾಲರಿ, ಟ್ಯಾಂಗ್ರಿನ್ ಗ್ಯಾಲರಿ, ಚೌಡಯ್ಯ ಸ್ಮಾರಕ ಭವನ, ಚಿತ್ರಕಲಾಪರಿಷತ್ ಮುಂತಾದೆಡೆ ಹಬ್ಬ ನಡೆಯಲಿದೆ.
ಕಲಾವಿದರ ದಂಡು: ದೇಶ, ವಿದೇಶದ ಖ್ಯಾತ ಕಲಾವಿದರು ಸೇರಿದಂತೆ ಸುಮಾರು 1000ಕ್ಕೂ ಅಧಿಕ ಕಲಾವಿದರಿಗೆ ಬೆಂಗಳೂರು ಹಬ್ಬ ವೇದಿಕೆ ಒದಗಿಸಲಿದೆ. ಪಂಡಿತ್ ಶಿವಕುಮಾರ್ ಶರ್ಮಾ, ಗುರುಕಿರಣ್, ಕದ್ರಿ ಗೋಪಿನಾಥ್, ಡಾ. ಪದ್ಮಾ ಸುಬ್ರಮಣ್ಯಂ ಮುಂತಾದ ಕಲಾವಿದರು ಭಾಗವಹಿಸಲಿದ್ದಾರೆ.
ನಾಟಕ ಪ್ರೇಮಿಗಳಿಗೂ ಸಂತಸದ ಸುದ್ದಿ. ಸಾಮಾಜಿಕ ಸಂದೇಶ ಸಾರುವ ಬೀದಿ ನಾಟಕಗಳು ಸೇರಿದಂತೆ ಜ.18 ರಿಂದ ಜ.21 ರವರೆಗೆ ಸಂಜೆ 7 ಕ್ಕೆ ಮಲ್ಲೇಶ್ವರದ ಸೇವಾಸದನದಲ್ಲಿ ನಾಟಕ ಪ್ರದರ್ಶನವಿರುತ್ತದೆ. ಜ.28ರಂದು ಐಟಿ ಪಾರ್ಕ್ ಗಳಲ್ಲಿ ಸಂಗೀತ ಕಾರ್ಯಕ್ರಮವಿರುತ್ತದೆ. ಜ. 29ರಂದು ಅರಮನೆ ಮೈದಾನದಲ್ಲಿ ಸಮಾರೋಪ ಕಾರ್ಯಕ್ರಮದಲ್ಲಿ ಬಾಲಿವುಡ್ ಗಾಯಕ ಕೈಲಾಶ್ ಖೇರ್ ಪಾಲ್ಗೊಳ್ಳಲಿದ್ದಾರೆ.
ಸದಭಿರುಚಿ ಚಿತ್ರ ಪ್ರದರ್ಶನ: ಕರ್ನಾಟಕ ರಾಜ್ಯ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಟಿ.ಎಸ್. ನಾಗಾಭರಣ ಮಾತನಾಡಿ, ಈ ಹಬ್ಬದ ಅಂಗವಾಗಿ ಅಕಾಡೆಮಿಯು ಜ.14ರಿಂದ 16 ಹಾಗೂ 21ರಿಂದ 23 ರವರೆಗೆ ಜಯನಗರದ ಎಲ್ಐಟಿ ಉದ್ಯಾನ, ದೇವಯ್ಯಪಾರ್ಕ್ ಮತ್ತು ನೆಟ್ಟಕಲ್ಲಪ್ಪ ಸರ್ಕಲ್ ಸಮೀಪದ ಶಾಮಣ್ಣ ಪಾರ್ಕ್ನಲ್ಲಿ ಆಯ್ದ 12 ಸದಭಿರುಚಿಯ ಚಿತ್ರಗಳನ್ನು ಪ್ರದರ್ಶಿಸಲಾಗುವುದು ಎಂದರು.
ಹಬ್ಬದ ಪ್ರಚಾರಕ್ಕಾಗಿ ಹಬ್ಬದ ಬಗ್ಗೆ ಸಂದೇಶಗಳು, ದೃಶ್ಯ ತುಣುಕುಗಳು ಇತ್ಯಾದಿಗಳನ್ನು ತನ್ನ ಗ್ರಾಹಕರಿಗೆ ಏರ್ಟೆಲ್ ಸಂಸ್ಥೆ ನೀಡುತ್ತಿದೆ ಎಂದು ಏರ್ ಟೆಲ್ ನ ಸ್ಥಳೀಯ ಸಿಇಒ ವೆಂಕಟೇಶ್ ವಿವರಿಸಿದರು. [ಬೆಂಗಳೂರು]












Click it and Unblock the Notifications