ಮಹಾಲಕ್ಷ್ಮಿಪುರಂ : ಟಿಸಿಎಸ್ ಟೆಕ್ಕಿ ನೇಣಿ ಶರಣು
ಟಾಟಾ ಕನ್ಸ್ ಲ್ಟೆನ್ಸಿ ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಶ್ವೇತಾ ಕೋಟಿ(25) ನೇಣು ಹಾಕಿಕೊಂಡ ನತದೃಷ್ಟೆ. ಪತಿ ವಿನಯ್ ಮೊರಬದ ನೀಡುತ್ತಿದ್ದ ಕಿರುಕುಳ ತಾಳಲಾರದೆ ಶ್ವೇತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಶ್ವೇತಾ ಸಂಬಂಧಿಕರು ದೂರಿದ್ದಾರೆ. ಧಾರವಾಡದ ಮುರುಗೆಪ್ಪ ಕೋಟಿ ಮತ್ತು ವಿಜಯಾ ದಂಪತಿಗಳ ಪುತ್ರಿಯಾದ ಶ್ವೇತಾ ಬಳ್ಳಾರಿಯಲ್ಲಿ ಇಂಜಿನಿಯರಿಂಗ್ ಮುಗಿಸಿದ್ದರು. ಎರಡು ವರ್ಷಗಳಿಂದ ಟಿಸಿಎಸ್ ನಲ್ಲಿ ಕೆಲಸ ಮಾಡುತ್ತಿದ್ದರು.
ಫರೇಶಿಯಾ ಎಂಬ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವಿನಯ್ ಅವರನ್ನು ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದರು. ಮಹಾಲಕ್ಷ್ಮಿಪುರದ ಎರಡನೇ ಹಂತದಲ್ಲಿ ಈ ದಂಪತಿಗಳು ವಾಸವಾಗಿದ್ದರು. ಈ ದಂಪತಿಗಳಿಗೆ ಒಂಬತ್ತು ತಿಂಗಳ ಗಂಡು ಮಗುವಿದೆ. ಪತಿ ಧಾರವಾಡಕ್ಕೆ ಹೋಗಿದ್ದಾಗ ಶ್ವೇತಾ ನೇಣು ಹಾಕಿಕೊಂಡಿದ್ದಾರೆ.
ಶ್ವೇತಾ ಸಾಯುವ ಮುನ್ನ ಯಾವುದೇ ಪತ್ರ ಬರೆದಿಟ್ಟಿಲ್ಲ. ಶ್ವೇತಾ ಪೋಷಕರು ನೀಡುವ ದೂರಿನ ಅನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ತಿಳಿಯುತ್ತಿದ್ದಂತೆಯೇ ವಿನಯ್ ಸ್ನೇಹಿತರು ಅವರ ಮನೆಗೆ ದೌಡಾಯಿಸಿದರು. ವಿನಯ್ ಒಳ್ಳೆಯ ಹುಡುಗ, ಆದರೆ, ಏಕೆ ಹೀಗಾಯಿತೋ ಎಂಬುದು ತಿಳಿಯುತ್ತಿಲ್ಲ ಎಂದು ಅಶ್ಚರ್ಯ ವ್ಯಕ್ತಪಡಿಸಿದ್ದಾರೆ.