ಮೈಸೂರಿನಲ್ಲಿ ತೀವ್ರಗೊಂಡ ’ಆಪರೇಷನ್ ಚಾಮುಂಡಿ’

ನಡುರಾತ್ರಿಯಲ್ಲಿ ನಡೆದ ಶೂಟೌಟ್ ಪ್ರಕರಣ ನಗರದಲ್ಲಿ ಆತಂಕವನ್ನು ಸೃಷ್ಟಿಸಿದೆ. ಆದರೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಎಲ್ಲೆಡೆ ನಾಕಾಬಂಧಿ ರಚಿಸಿದ್ದರು. ಈ ಹಿನ್ನಲೆಯಲ್ಲಿ ಹೊರ ಹೋಗಲಾಗದೆ ದುಷ್ಕರ್ಮಿಗಳು ಅಪಹರಿಸಿದ್ದ ಹ್ಯುಂಡೈ ಅಸೆಂಟ್ ಕಾರನ್ನು(ಕೆಎ 09-ಎನ್4988) ಹೆಬ್ಬಾಳು ಕೈಗಾರಿಕಾ ಬಡಾವಣೆಯಲ್ಲಿ ನಿಲ್ಲಿಸಿದ್ದರೆ, ತಾವು ಕೃತ್ಯಕ್ಕೆ ಬಳಸಿದ್ದ ಕೆಂಪು ಬಣ್ಣದ ಮಾರುತಿ ವ್ಯಾನ್(ಕೆಎ 02-ಎನ್ 0212)ನ್ನು ನಗರದಿಂದ ಹೊರ ಕೊಂಡೊಯ್ಯಲಾಗದೆ ಹೂಟಗಳ್ಳಿ ಬಳಿ ನಿಲ್ಲಿಸಿ ಪರಾರಿಯಾಗಿದ್ದಾರೆ.
ಘಟನೆಯ ವಿವರ: ಭಾನುವಾರ ಮಧ್ಯ ರಾತ್ರಿ ನಗರದ ಜಯಲಕ್ಷ್ಮಿಪುರಂ 3ನೇ ಬ್ಲಾಕ್ನ 4ನೇ ಮುಖ್ಯರಸ್ತೆಯಲ್ಲಿ ವಾಸವಿರುವ ಹೋಟೆಲ್ ಉದ್ಯಮಿ ರೋಹನ್ ಅವರ ಕಾರನ್ನು ಮನೆಗೆ ಸಮೀಪವೇ ಅಡ್ಡಗಟ್ಟಿದ ದುಷ್ಕರ್ಮಿಗಳ ತಂಡ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ, ಅವರನ್ನು ಬೆದರಿಸಿ ಕಾರಿನಿಂದ ಕೆಳಗಿಳಿಸಿ ಕಾರನ್ನು ಅಪಹರಿಸಿತ್ತು.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಡಿಸಿಪಿಗಳಾದ ಬಸವರಾಜ ಮಾಲಗತ್ತಿ, ರಾಜೇಂದ್ರಪ್ರಸಾದ್, ಎಸಿಪಿ ಪೂಜಾರ್, ಇನ್ಸ್ಪೆಕ್ಟರ್ ನೇಮಿರಾಜ್ ಇನ್ನಿತರ ಪೊಲೀಸ್ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದಾಗ ಸ್ಥಳದಲ್ಲಿ ಸಿಕ್ಕಿದ ಪಿಸ್ತೂಲ್ ಮ್ಯಾಗಜಿನ್ ಸಮೇತ ಮೂರು ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಇದೀಗ ಅಪಹರಿಸಿದ್ದ ಕಾರು ಹಾಗೂ ಕೃತ್ಯಕ್ಕೆ ಬಳಸಿದ ಮಾರುತಿ ವ್ಯಾನ್ ಪತ್ತೆಯಾಗಿದ್ದು, ಈ ಘಟನೆಯ ಹಿಂದಿನ ರಹಸ್ಯ ಪೊಲೀಸರ ತನಿಖೆಯಿಂದಷ್ಟೆ ಹೊರಬರಬೇಕಿದೆ.
ಈ ಘಟನೆಯ ಬಳಿಕ ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆ "ಆಪರೇಷನ್ ಚಾಮುಂಡಿ" ಎಂಬ ಕಾರ್ಯಾಚರಣೆ ಕೈಗೊಂಡಿದೆ. ಚಾಮುಂಡಿಬೆಟ್ಟದ ರಸ್ತೆ ಸೇರಿದಂತೆ ನಗರದ ವಿವಿಧೆಡೆ ಸಂಜೆ ಏಳರಿಂದ ಮಧ್ಯೆ ರಾತ್ರಿಯವರೆಗೂ ದ್ವಿಚಕ್ರವಾಹನಗಳಿಂದ ಹಿಡಿದು ಭಾರೀ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ದಾಖಲಾತಿ, ಪಾನಮತ್ತರಾಗಿ ವಾಹನ ಚಾಲನೆ ಮಾಡುವವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತಿದೆ. [ಚಾಮುಂಡಿ ಬೆಟ್ಟ]











Click it and Unblock the Notifications