ಗೌಡರಿಂದ ಮಹಾಭ್ರಷ್ಟ ಹಗರಣಗಳ ಕುರಿತು ಪುಸ್ತಕ
ಶನಿವಾರ ಬೆಂಗಳೂರಿನಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಪುಸ್ತಕ ಬಿಡುಗಡೆ ಮಾಡಿ ಯಡಿಯೂರಪ್ಪ, ಬಿಜೆಪಿ ಸರಕಾರ ಮತ್ತು ಬಿಜೆಪಿ ಹಿರಿಯ ನಾಯಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. 'ನೀವು ಮಹಾಭ್ರಷ್ಟರು ಮತ್ತು ಪಕ್ಷಪಾತಿಗಳು' ಎಂಬ ಶೀರ್ಷಿಕೆಯಿರುವ ಪುಸ್ತಕವನ್ನು ಮಹಾಭ್ರಷ್ಟರ ವಿರುದ್ಧದ ಮಹಾಭಾರತ ಯುದ್ಧ ಎಂದು ದೇವೇಗೌಡರು ಬಣ್ಣಿಸಿದರು. 'Karnataka Land and Mine scandals put 2G scandal to shame' ಎಂದು ಆಂಗ್ಲ ಆವೃತ್ತಿಗೆ ಶೀರ್ಷಿಕೆ ನೀಡಲಾಗಿದೆ. ಈ ಪುಸ್ತಕವನ್ನು ಎಲ್ಲ ಬಿಜೆಪಿ ಹಿರಿಯ ನಾಯಕರಿಗೆ ಮತ್ತು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರಿಗೆ ಕಳಿಸುವುದಾಗಿ ದೇವೇಗೌಡರು ಹೇಳಿದರು.
ಸುಮಾರು 20 ಸಾವಿರ ಕೋಟಿ ರು.ಗೂ ಹೆಚ್ಚಿನ ಹಗರಣಗಳು ಕರ್ನಾಟಕದಲ್ಲಿ ನಡೆದಿದ್ದರೂ ಬಿಜೆಪಿಯ ಹಿರಿಯ ನಾಯಕರು ಕಣ್ಮುಚ್ಚಿ ಕುಳಿತಿದ್ದಾರೆ. ಪಕ್ಷ ಯಾವುದೇ ಇರಲಿ ಈ ಎಲ್ಲ ಹಗರಣಗಳ ವಿರುದ್ಧ ಸಿಬಿಐ ಅಥವಾ ಜಾರಿ ನಿರ್ದೇಶನಾಲಯದಿಂದ ತನಿಖೆಯಾಗಬೇಕು ಎಂದು ಆಗ್ರಹಿಸಿದರು. ಯಡಿಯೂರಪ್ಪ ಮಾತ್ರವಲ್ಲ ಅವರ ಹಿತೈಷಿಗಳ ವಿರುದ್ಧವೂ ತನಿಖೆಯಾಗಬೇಕು ಎಂದು ಅವರು ಹೇಳಿದರು.
ಅಡ್ವಾಣಿ ಭೀಷ್ಮ ಪಿತಾಮಹ : 84ರ ಹರೆಯದ ಬಿಜೆಪಿಯ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರನ್ನು ಮಹಾಭಾರತದ ಭೀಷ್ಮ ಪಿತಾಮಹ ಎಂದು ದೇವೇಗೌಡರು ಬಣ್ಣಿಸಿದರು. ದೇಶದಲ್ಲಿ ಕರ್ನಾಟಕದ ಮಾನ ಹರಾಜಾಗುತ್ತಿದ್ದರೂ, ಮಹಾಭಾರತದಲ್ಲಿ ದ್ರೌಪದಿ ಪಸ್ತ್ರಾಪಹರಣವಾಗುತ್ತಿದ್ದಾಗ ಮೌನವಾಗಿ ಕುಳಿತ ಭೀಷ್ಮ ಪಿತಾಮಹನಂತೆ ಅಡ್ವಾಣಿ ಮೌನವಾಗಿ ಕುಳಿತಿದ್ದಾರೆ ಎಂದು ಗೌಡರು ಲೇವಡಿ ಮಾಡಿದರು.
ಇಡೀ ರಾಷ್ಟ್ರದ ಜನತೆಯ ಮುಂದೆ ಯಡಿಯೂರಪ್ಪ ಮತ್ತು ಅವರ ಸಹೋದ್ಯೋಗಿಗಳು ಇಷ್ಟು ದೊಡ್ಡ ಪ್ರಮಾಣದ ಆಸ್ತಿ ಲೂಟಿ ಮಾಡಿದ್ದಾರೆ. ಇನ್ನು ಮುಂದೆ ಈ ಶತಮಾನದಲ್ಲಿ ಇಂಥ ಮಖ್ಯಮಂತ್ರಿಯನ್ನು ನೋಡುತ್ತೇವೆಯೋ ಇಲ್ಲವೋ ಎಂದು ಗೌಡರು ವ್ಯಂಗ್ಯವಾಡಿದರು. ಬಿಜೆಪಿಯ ರಾಷ್ಟ್ರಾಧ್ಯಕ್ಷ ನಿತೀನ್ ಗಡ್ಕರಿ ಅವರ ವಿರುದ್ಧವೂ ಗೌಡರು ಹರಿಹಾಯ್ದರು.
ಯಡಿಯೂರಪ್ಪ ಪ್ರತಿಕ್ರಿಯೆ : ಸಂಸದರಾಗಿರುವ ದೇವೇಗೌಡರು ರಾಜ್ಯ ರಾಜಕಾರಣದ ಬಗ್ಗೆ ಚಿಂತಿಸುವುದನ್ನು ಬಿಟ್ಟು ರಾಷ್ಟ್ರ ರಾಜಕಾರಣದ ಬಗ್ಗೆ ಚಿಂತಿಸಲಿ ಎಂದು ಭ್ರಷ್ಟರ ಪಟ್ಟಿಯನ್ನು ಒಳಗೊಂಡಿರುವ ದೇವೇಗೌಡರ ಪುಸ್ತಕ ಬಿಡುಗಡೆ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. 60 ಸಾವಿರ ಕೋಟಿ ರು.ಯ ಕಾಮನ್ ವೆಲ್ತ್ ಹಗರಣ, ಇಡೀ ದೇಶವನ್ನು ತಲೆತಗ್ಗಿಸುವಂತೆ ಮಾಡಿರುವ 2ಜಿ ಸ್ಪೆಕ್ಟ್ರಂ ಹಗರಣದ ಬಗ್ಗೆ ಅವರು ಚಿಂತಿಸಲಿ ಎಂದು ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಿಡಿ : 84ರ ಬಿಜೆಪಿ ನಾಯಕ ಎಲ್ ಕೆ ಅಡ್ವಾಣಿ ಮಹಾಭಾರತದ ಭೀಷ್ಮ ಪಿತಾಮಹರಾದರೆ, 78ರ ಹರೆಯದ ದೇವೇಗೌಡ ಮಹಾಭಾರತದ ಯಾವ ಪಾತ್ರಧಾರಿ? [ಭೂಹಗರಣ]