ಊಟಕ್ಕೆ ಮೊಟ್ಟೆ : ಭಾರತೀಯ ಸೇನೆಗೆ ಗೆಲುವು

ಸೇನೆಯಲ್ಲಿ ದುಡಿಯುವವರಿಗೆ ಮೊಟ್ಟೆ ಕೊಡಬೇಕೆ ಬೇಡವೇ ಎಂಬ ಚರ್ಚೆಗೆ ಈ ಮೂಲಕ ಮಂಗಳ ಹಾಡಲಾಗಿದೆ. ಈ ಕುರಿತಂತೆ ಭಾರತದ ರಕ್ಷಣಾ ಸಚಿವಾಲಯ ತನ್ನ ಅನುಮೋದನೆ ನೀಡಿದೆ. ಆ ಪ್ರಕಾರ, ಊಟದಲ್ಲಿ ಇರಲೊಂದು ಮೊಟ್ಟೆ ಸಿದ್ಧಾಂತಕ್ಕೆ ರಕ್ಷಣಾ ಸಚಿವಾಲಯ ತಲೆಬಾಗಿದೆ ಎಂದು ಬೆಂಗಳೂರು ಎ ಎಸ್ ಸಿ ಸೆಂಟರ್ ನ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಜಿಎಸ್ ಧಿಲ್ಲೋನ್ ಬುಧವಾರ ಬೆಂಗಳೂರಿನಲ್ಲಿ ಪ್ರಕಟಿಸಿದರು.
ಸಚಿವಾಲಟದ ಅಪ್ಪಣೆ ಪ್ರಕಾರ ಭೂಸೇನೆ, ನೌಕಾಸೇನೆ ಮತ್ತು ವಾಯುಸೇನೆಯಲ್ಲಿ ಕೆಲಸಮಾಡುತ್ತಿರುವ ನಮ್ಮೆಲ್ಲ ಯೋಧ ಬಂಧುಗಳು ಪ್ರತಿನಿತ್ಯದ ಊಟದಲ್ಲಿ ಚಪಾತಿ ಪಲ್ಯದ ಜತೆಗೆ ಒಂದು ಮೊಟ್ಟೆಯನ್ನು ಹೊಟ್ಟೆಯೊಳಗೆ ಇಳಿಬಿಡಬಹುದು. ಮೊಟ್ಟೆ ಎಂದರೆ ಬರೀ ಬೇಯಿಸಿದ ಮೊಟ್ಟೆಯೋ, ಎಗ್ ಬುರ್ಜಿಯೋ, ಎಗ್ ಬಿರಿಯಾನಿಯೋ, ಎಗ್ ಆಮ್ಲೇಟ್ ಅಥವಾ ಎಗ್ ಪುಡ್ಡಿಂಗೋ ವಿವರಗಳನ್ನು ಅವರು ಹೊರಗೆಡವಲಿಲ್ಲ.
ಮೊಟ್ಟೆ ಅಷ್ಟೇ ಅಲ್ಲ, ವಾರದ ಏಳೂ ದಿನದ ಊಟದ ಜತೆಗೆ ಹಣ್ಣು ಹಂಪಲುಗಳನ್ನು ಜವಾನರಿಗೆ ನೀಡುವುದಕ್ಕೂ ಸಚಿವಾಲಯ ಒಪ್ಪಿಗೆ ಸೂಚಿಸಿದೆ ಎಂದು ಧಿಲ್ಲೋನ್ ನುಡಿದರು. ಬೆಳಗ್ಗೆ ಮಧ್ಯಾನ್ಹ ಸಾಯಂಕಾಲ ಬರೀ ಅನ್ನ ಸಾರು, ಚಪಾತಿ ಪಲ್ಯ ತಿನ್ನುತ್ತಿದ್ದರೆ ಗಡಿಯಲ್ಲಿ, ಚಳಿಯಲ್ಲಿ, ಮಳೆಯಲ್ಲಿ ಮದ್ದು ಗುಂಡಿನ ಅಬ್ಬರದಲ್ಲಿ ನಮ್ಮ ಸೈನಿಕರು ಪಾಕಿಸ್ತಾನದ ಯೋಧರೊಂದಿಗೆ ಹೊಡೆದಾಡುವುದು ಹೇಗೆ ಸಾಧ್ಯ. ಕಾಶ್ಮೀರ ಉಳಿಸಿಕೊಳ್ಳುವುದು ಹೇಗೆ ಸಾಧ್ಯ?
ಸಫಾರಿ ಸೂಟ್ ಧರಿಸಿ ದರ್ಬಾರ್ ಮಾಡುವ ಅಧಿಕಾರಿಗಳ ಜತೆ ಸೆಣಸಾಡಿ ತಮ್ಮ ಊಟಕ್ಕೆ ಮೊಟ್ಟೆ ಮತ್ತು ಹಣ್ಣುಗಳನ್ನು ಗೆದ್ದು ತಂದ ನಮ್ಮ ಎಲ್ಲಾ ಸೈನಿಕ ಬಂಧುಗಳಿಗೆ ಕ್ರಿಸ್ ಮಸ್ ಶುಭಾಶಯಗಳು.












Click it and Unblock the Notifications