ಏಡ್ಸ್ ಜಾಗೃತಿ ಕುರಿತು ಬಳ್ಳಾರಿಯಲ್ಲಿ ಜಾಥಾ

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ಜಿಲ್ಲೆಯಲ್ಲಿ ವಿಮ್ಸ್ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ ಒಟ್ಟು 28 ಕೇಂದ್ರಗಳಲ್ಲಿ ಉಚಿತ ಆಪ್ತ ಸಮಾಲೋಚನಾ ಕೇಂದ್ರಗಳನ್ನು ನಡೆಸಲಾಗುತ್ತಿದೆ. ಎಚ್ಐವಿ ಸೋಂಕು ಪೀಡಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು.
ಎಚ್ಐವಿ ಸೋಂಕಿತರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಸಿಡಿ-4 ಕಣಗಳ ಪರೀಕ್ಷೆ ನಡೆಸಲು ಬಳ್ಳಾರಿಯ ವಿಮ್ಸ್ ಹಾಗೂ ಹೊಸಪೇಟೆಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಎಆರ್ಟಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದೆ. ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮವನ್ನು ಡಿ. 1ರಂದು ವಿಭಿನ್ನ ರೀತಿಯಲ್ಲಿ ಆಚರಿಸಲಾಗುವುದು. ಕೆಎಂಎಫ್ ಅಧ್ಯಕ್ಷ, ಶಾಸಕ ಜಿ. ಸೋಮಶೇಖರ ರೆಡ್ಡಿ ಅವರು ಡಿ. 1ರ ಬುಧವಾರ ಬೆಳಗ್ಗೆ 9-30ಕ್ಕೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಜಾಗೃತಿ ಜಾಥಾಕ್ಕೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.
5 ವಿವಿಧ ತಂಡಗಳಿಂದ ರೈಲ್ವೆ ನಿಲ್ದಾಣ, ಗಡಿಗೆ ಚೆನ್ನಪ್ಪ ವೃತ್ತ, ಕೋಟೆ ಪ್ರದೇಶ, ಶ್ರೀರಾಂಪುರ ಕಾಲೋನಿ, ಗ್ಲಾಸ್ ಬಜಾರ್ ಮತ್ತಿತರ ಪ್ರಮುಖ ಬೀದಿಗಳಲ್ಲಿ ಜಾಥಾ ಸಂಚರಿಸಲಿದೆ. ಮೈರಾಡ ಸಂಸ್ಥೆ ಏಡ್ಸ್ ನಿಯಂತ್ರಣ ಕುರಿತು ಬೀದಿ ನಾಟಕ, ವಿದ್ಯಾರ್ಥಿಗಳಿಗೆ ಜಾಗೃತಿ ಸಪ್ತಾಹ, ಭಾಷಣ ಸ್ಪರ್ಧೆ, ಬೆಳಿಗ್ಗೆ 11 ಗಂಟೆಗೆ ಜೋಳದರಾಡಿ ದೊಡ್ಡಗೌಡ ರಂಗಮಂದಿರದಲ್ಲಿ ತಜ್ಞರಿಂದ ಗೋಷ್ಠಿ ಏರ್ಪಡಿಸಿದೆ. ಸಂಜೆ ಮೊಂಬತ್ತಿ ದೀಪಗಳನ್ನು ಹಚ್ಚಿ ಆರೋಗ್ಯ, ಸುರಕ್ಷತಾ ಲೈಂಗಿಕತೆಯ ಪ್ರಮಾಣ ವಚನವನ್ನು ಬೋಧಿಸಲಾಗುತ್ತದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬಕಲ್ಯಾಣಾಧಿಕಾರಿ ಡಾ. ಶ್ರೀಕಾಂತ ಬಾಸೂರು, ಡಾ|| ನರಸಿಂಹಮೂರ್ತಿ, ಮತ್ತಿತರ ಸ್ವಯಂ ಸೇವಾ ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.












Click it and Unblock the Notifications