ದಿಢೀರ್ ಸಚಿವ ಸಂಪುಟ ವಿಸ್ತರಣೆ ರದ್ದು

ಸಂಪುಟದಲ್ಲಿ ಖಾಲಿ ಇರುವ ಆರು ಸ್ಥಾನಗಳ ಪೈಕಿ ನಾಲ್ಕನ್ನು ಭರ್ತಿ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ನಿರ್ಧರಿಸಿದ್ದರು. ಅದರಂತೆ ಬುಧವಾರ ಪ್ರಮಾಣ ವಚನ ಸಮಾರಂಭ ನಿಗದಿಯಾಗಿತ್ತು. ಆದರೆ, ಪಕ್ಷದಲ್ಲಿ ಭಿನ್ನಮತೀಯ ಚಟುವಟಿಕೆ ತೀವ್ರಗೊಂಡಿದ್ದರಿಂದ ಕಾರ್ಯಕ್ರಮವನ್ನೇ ರದ್ದುಪಡಿಸಲಾಯಿತು. ಸಂಪುಟಕ್ಕೆ ತಮ್ಮನ್ನು ಸೇರಿಸಿಕೊಳ್ಳಬೇಕೆಂದು 8ಕ್ಕೂ ಹೆಚ್ಚು ಶಾಸಕರು ಬೇಡಿಕೆ ಇಟ್ಟಿದ್ದಲ್ಲದೆ, ಅಸಮಾಧಾನ ಹೊರಹಾಕಿದ್ದರು.
ಭಿನ್ನರ ನಾಡಿಮಿಡಿತ ಅರಿತ ಯಡಿಯೂರಪ್ಪ ಮತ್ತು ಈಶ್ವರಪ್ಪ ಸಂಪುಟ ವಿಸ್ತರಣೆಯನ್ನು ಮುಂದೂಡಲು ತೀರ್ಮಾನಿಸಿದರು. ವಿಸ್ವಾಸಮತ ಯಾಚನೆಯಲ್ಲಿ ಗೆದ್ದ ನಂತರ ಹಾಗೂ 11ಮಂದಿ ಅನರ್ಹ ಶಾಸಕರ ಪ್ರಕರಣದಲ್ಲಿ ಸರಕಾರದ ಪರ ತೀರ್ಪು ಬಂದ ಬಳಿಕ ಬಿಜೆಪಿಯ ಭಿನ್ನಮತ ತಣ್ಣಗಾಗಿದೆ ಎನ್ನುತ್ತಿರುವಾಗಲೇ ಹೀಗಾಗಿರುವುದು ನಾಯಕರಿಗೆ ಆಘಾತ ತಂದಿದೆ.
ಶೃಂಗೇರಿ ಶಾಸಕ ಜೀವರಾಜ್ ಮುಖ್ಯ ಸಚೇತಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅಸಮಾಧಾನ ಹೊರ ಹಾಕಿದರು. ಅಲ್ಲದೆ, ಅತೃಪ್ತರ ಹೊಸ ಗುಂಪು ಹುಟ್ಟಿಕೊಂಡು ಪಕ್ಷದ ನಾಯಕರಿಗೆ ಎಚ್ಚರಿಕೆ ಸಂದೇಶ ರವಾನಿಸಿದರು. ಕೃಷ್ಣಯ್ಯಶೆಟ್ಟಿ, ಚಂದ್ರಕಾಂತ ಬೆಲ್ಲದ, ಎಂ.ಪಿ. ಕುಮಾರಸ್ವಾಮಿ, ಚಂದ್ರಪ್ಪ, ಅಪ್ಪಚ್ಚು ರಂಜನ್, ಅಭಯ್ ಪಾಟೀಲ್, ಜೆ.ನರಸಿಂಹಸ್ವಾಮಿ ಮತ್ತಿತರರು ಮಂತ್ರಿಸ್ಥಾನ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ.












Click it and Unblock the Notifications