ಕುದುರೆ ವ್ಯಾಪಾರಿಗಳ ಮೇಲೆ ತೆರಿಗೆ ಸವಾರಿ

ರೇಸ್ ಕೋರ್ಸ್ ರಸ್ತೆಯಲ್ಲಿರುವ ಆರೋಗ್ಯ ಸಚಿವ ಶ್ರೀರಾಮುಲು ನಿವಾಸ, ಕಂಪ್ಲಿ ಶಾಸಕ ಸುರೇಶ್ ಬಾಬು ಮತ್ತು ಕೂಡ್ಲಗಿ ಶಾಸಕ ನಾಗೇಂದ್ರ ಅವರ ಮನೆ, ಕಚೇರಿ, ಮೈನಿಂಗ್ ಕಂಪನಿಗಳ ಕಚೇರಿಗಳ ಮೇಲೆ ದಾಳಿ ನಡೆಸಿದ ಐಟಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಸಂಜೆವರೆಗೂ ಕೂಡಾ ದಾಖಲೆಗಳ ಪರಿಶೀಲನೆ ಮುಂದುವರೆದಿತ್ತು.
ಬಳ್ಳಾರಿಯ ಎರಡು ಕಡೆ, ಹೊಸಪೇಟೆಯ ಗಣಿ ಕಂಪನಿಗಳು, ಬೆಂಗಳೂರಿನ ಶಾಸಕರ ಕೊಠಡಿಗಳು ಹಾಗೂ ಬೆಳಗಾವಿ, ಹುಬ್ಬಳ್ಳಿ ಭಾಗ ಸೇರಿದಂತೆ ಒಟ್ಟು 60 ಕಡೆಗೆ ಐಟಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಇತ್ತೀಚೆಗೆ ನಡೆಸಿದ ಆಪರೇಷನ್ ಕಮಲಕ್ಕೆ ಸುರೇಶಬಾಬು ಮತ್ತು ನಾಗೇಂದ್ರ ಅವರ ಕಚೇರಿಯಿಂದ ಹಣ ರವಾನೆಯಾಗಿತ್ತು ಎಂಬ ಗುಪ್ತ ಮಾಹಿತಿ ಪಡೆದ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಅಲ್ಲದೇ, ಪ್ರವಾಸೋಧ್ಯಮ ಸಚಿವ ಜನಾರ್ದನರೆಡ್ಡಿ ಅವರ ವಕೀಲ ರಾಘವಾಚಾರ್ಯಲು ಮತ್ತು ಆಪ್ತ ಸಹಾಯಕ ಅಲೀಖಾನ್ ಅವರ ಮನೆ, ಕಚೇರಿ ಮೇಲೂ ದಾಳಿ ನಡೆಸಿದ್ದಾರೆ. ಆದಾಯ ತೆರಿಗೆ ಅಧಿಕಾರಿಗಳು ರಾಜ್ಯದ ವಿವಿಧ ಕಡೆಗಳಲ್ಲಿ ಸುಮಾರು 100ಕ್ಕೂ ಹೆಚ್ಚು ಅಧಿಕಾರಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದಾರೆ.
ಪ್ರಮುಖವಾಗಿ ಕಂಪ್ಲಿ ಶಾಸಕ ಸುರೇಶಬಾಬು ಅವರ ಬಳ್ಳಾರಿಯ ನಿವಾಸ ಹಾಗೂ ಶಾಸಕರ ಭವನದ ಕೊಠಡಿ ಸಂಖ್ಯೆ 333 ರ ಮೇಲೆ ದಾಳಿ ನಡೆದಿದೆ. ನಾಗೇಂದ್ರ ಒಡೆತನದ ಜಿಜಿ ಮೈನ್ಸ್ ಮತ್ತು ಗೊಗ್ಗ ಸಿದ್ದರಾಮಯ್ಯ ಕಂಪನಿ, ಎಲ್ಐಸಿ ಮ್ಯಾನೇಜರ್ ಸೋಮಶೇಖರ್ ಅವರ ಮನೆ ಮೇಲೂ ದಾಳಿ ನಡೆದಿದೆ. ಸುರೇಶ್ ಕನ್ ಸ್ಟ್ರಕ್ಷನ್ ಜತೆ ಸಹಯೋಗ ಹೊಂದಿದ ಆಕಾರ್ ಅಭಿನವ್ ಎಜೆನ್ಸಿ ಮೇಲೂ ದಾಳಿ ನಡೆದಿದೆ.
ಮನೆಗೆ ನುಗ್ಗುವುದು ಸರಿಯೇ? : ನಾವು ಇಲ್ಲಿಯವರೆಗೂ ಪಾರದರ್ಶಕವಾಗಿಯೇ ನಮ್ಮ ವ್ಯವಹಾರಗಳನ್ನು ನಡೆಸಿಕೊಂಡು ಬಂದಿದ್ದೇವೆ. ಈವೆರೆಗೂ ನಡೆಸಿದ ಎಲ್ಲ ವ್ಯವಹಾರಗಳಿಗೆ ನಾವು ತೆರಿಗೆ ಕಟ್ಟಿದ್ದೇವೆ. ತಪ್ಪಿಲ್ಲದಿದ್ದರೂ ಐಟಿ ಅಧಿಕಾರಿಗಳು ಹೇಳದ ಕೇಳದ ಮನೆಗೆ ನುಗ್ಗುವುದು ಎಷ್ಟು ಸರಿ ಎಂದು ಆರೋಗ್ಯ ಸಚಿವ ಶ್ರೀರಾಮುಲು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜಕೀಯ ಪಿತೂರಿ : ಸರಕಾರ ಬೀಳಿಸುವಲ್ಲಿ ವಿಫಲರಾದ ರಾಜ್ಯ ಕಾಂಗ್ರೆಸ್ ನಾಯಕರು ಐಟಿ ಅಧಿಕಾರಿಗಳ ಮೂಲಕ ದಾಳಿ ನಡೆಸಿದ್ದಾರೆ. ಇದೊಂದು ರಾಜಕೀಯ ದುರುದ್ದೇಶದ ದಾಳಿ ಎಂದು ಬಿಜೆಪಿ ಮುಖಂಡ ಧನಂಜಯ್ ಕುಮಾರ್ ಹೇಳಿದ್ದಾರೆ.












Click it and Unblock the Notifications