ಸಿಎಂ ಆಗಿರುವವರೆಗೆ ಡಿಸಿಎಂ ಹುದ್ದೆ ಇಲ್ಲ : ಯಡಿಯೂರಪ್ಪ
ಪ್ರವಾಸೋಧ್ಯಮ ಸಚಿವ ಜನಾರ್ದನರೆಡ್ಡಿ ಅವರು ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಸಿಎಂ ಮೇಲೆ ಒತ್ತಡ ಹಾಕಿದ್ದಾರೆ ಎಂಬ ವದಂತಿಗೆ ಪ್ರತಿಕ್ರಿಯಿಸಿದ ಅವರು, ಅಂತಹ ಯಾವ ಚರ್ಚೆ ನಡೆದಿಲ್ಲ ಎಂದರು. ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಮಾಡದಿರುವುದು ನನ್ನ ಅಭಿಪ್ರಾಯವಷ್ಟೇ ಅಲ್ಲ ಪಕ್ಷದ ಹೈಕಮಾಂಡ್ ಕೂಡಾ ಇದೇ ನಿಲುವನ್ನು ಹೊಂದಿದೆ. ಹೀಗಾಗಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅ. 18 ರಂದು ಸಂಪುಟ ಸಭೆ ಕರೆಯಲಾಗಿದ್ದು, ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.
ಕಾಂಗ್ರೆಸ್, ಜೆಡಿಎಸ್ ಕುತಂತ್ರದಿಂದ ಅತಂತ್ರವಾಗಿದ್ದ ಸರಕಾರವನ್ನು ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಬಳ್ಳಾರಿ ರೆಡ್ಡಿಗಳು ಇದೀಗ ಹೊಸ ಬೇಡಿಕೆಯನ್ನು ಇಟ್ಟಿದ್ದಾರೆ. ಮುಂದಿನ ಎರಡೂವರೆ ವರ್ಷಗಳ ಕಾಲ ಸರಕಾರ ನಿರಾಂತರವಾಗಿ ನಡೆಯಲು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸಿ, ಶ್ರೀರಾಮುಲ ಅವರನ್ನು ಡಿಸಿಎಂ ಮಾಡಬೇಕು ಎಂದು ಜನಾರ್ದನರೆಡ್ಡಿ ತೀವ್ರ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ. ವರ್ತೂರು ಪ್ರಕಾಶ ಅವರನ್ನು ಪಕ್ಷಕ್ಕೆ ಕರೆತರುವಲ್ಲಿ ಜನಾರ್ದನ ರೆಡ್ಡಿ ಪಾತ್ರ ಪ್ರಮುಖ ಎನ್ನುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.