ಮಳೆಹಾನಿ 25 ಕೋಟಿ ರು. ಬಿಡುಗಡೆ : ಸಿಎಂ
ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ದಾಖಲೆ ಪ್ರಮಾಣದ ಮಳೆ ಸುರಿದಿದ್ದು, ಆರು ಮಂದಿ ಬಲಿಯಾಗಿದ್ದಾರೆ. 500 ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ. ಸಾಕಷ್ಟು ಪ್ರಮಾಣದ ಬೆಳೆ ನಾಶಗೊಂಡಿದೆ. ಮಳೆ ಹಾನಿ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ವಿಧಾನಸೌಧದಲ್ಲಿ ಶನಿವಾರ ಉನ್ನತ ಮಟ್ಟದ ಸಭೆ ನಡೆಸಿದರು.
ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿ, ತುರ್ತು ಪರಿಹಾರ ಕಾಮಗಾರಿಗೆ 25 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಹೆಚ್ಚು ಹಾನಿಗೀಡಾಗಿರುವ ಗುಲ್ಬರ್ಗ ಜಿಲ್ಲೆಗೆ 5 ಕೋಟಿ ರೂ. ಒದಗಿಸಲಾಗಿದೆ ಎಂದರು. ಹಾನಿಗೀಡಾದ ಪ್ರದೇಶದಲ್ಲಿ ತುರ್ತು ಪರಿಹಾರ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಮನೆ ಕಳೆದುಕೊಂಡವರಿಗೆ ಆಶ್ರಯ ಯೋಜನೆಯಡಿ ಹೊಸ ಮನೆ ಕಟ್ಟಿಕೊಡಲಾಗುವುದು.
ಬೆಂಗಳೂರಿನಲ್ಲಿ ಶುಕ್ರವಾರ ರಾತ್ರಿ 106 ಮಿಮೀ ದಾಖಲೆ ಪ್ರಮಾಣದ ಮಳೆಯಾಗಿದೆ. 136 ಪ್ರದೇಶಗಳಲ್ಲಿ ನಾಗರಿಕರು ತೊಂದರೆ ಅನುಭವಿಸಿದ್ದಾರೆ. ಎರಡು ತಾಸಿನಲ್ಲಿ ಭಾರಿ ಮಳೆ ಸುರಿದ ಹಿನ್ನೆಲೆಯಲ್ಲಿ ಜನರು ತೊಂದರೆ ಎದುರಿಸಬೇಕಾಯಿತು. ಮೋರಿಗಳಲ್ಲಿ ಮಳೆ ನೀರು ಸರಾಗವಾಗಿ ಹರಿಯುವಂತೆ ಹೂಳೆತ್ತಲಾಗುವುದು.
ಬೆಳ್ಳಂದೂರು ಕೆರೆಯಲ್ಲಿ ಹೂಳು ತುಂಬಿದ್ದು, ಅದನ್ನು ತೆರವುಗೊಳಿಸಿ ಸಮಗ್ರ ಅಭಿವೃದ್ಧಿಪಡಿಸಲು 100 ಕೋಟಿ ರೂ. ವೆಚ್ಚ ಮಾಡಲಾಗುವುದು.ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕಾಮಗಾರಿ ಕೈಗೊಳ್ಳಲಿದೆ ಎಂದು ಹೇಳಿದರು.
ಗಾಳಿ ಆಂಜನೇಯ ದೇವಸ್ಥಾನಕ್ಕೆ ನೀರು ನುಗ್ಗಿ ತೊಂದರೆ ಉಂಟಾಗಿದೆ. ಶಾಶ್ವತ ಪರಿಹಾರವಾಗಿ ಮೋರಿಗೆ ತಡೆಗೋಡೆ ನಿರ್ಮಿಸಲಾಗುವುದು. ರಾಜ ಕಾಲುವೆ ಒತ್ತುವರಿ ಮಳೆ ನೀರು ಹರಿಯಲು ಅಡ್ಡಿಯಾಗಿದೆ. 958 ಭಾಗಗಳಲ್ಲಿ ರಾಜ ಕಾಲುವೆ ಒತ್ತುವರಿ ಮಾಡಲಾಗಿದ್ದು, ಇದರಲ್ಲಿ 355 ಆಸ್ತಿಗಳನ್ನು ತೆರವುಗೊಳಿಸಲಾಗಿದೆ. ಕೆಲವು ಆಸ್ತಿ ಮಾಲೀಕರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ತಕರಾರು ಅರ್ಜಿ ತೆರವಿಗೆ ಪ್ರಯತ್ನ ನಡೆದಿದೆ ಎಂದರು.