ಗಾಳಿ ಆಂಜನೇಯ ದೇಗುಲಕ್ಕೆ ನುಗ್ಗಿದ ಚರಂಡಿ ನೀರು
ಶುಕ್ರವಾರ ರಾತ್ರಿ ಸುರಿದ ಬಿಡು ಬೀಸಾದ ಮಳೆಗೆ ಗಾಳಿ ಆಂಜನೇಯ ದೇವಾಲಯಕ್ಕೆ ಚರಂಡಿ ನೀರು ನುಗ್ಗಿರುವುದು ಭಕ್ತರನ್ನು ಭಯ ಭೀತಗೊಳಿಸಿದೆ. ಆಲಯದ ಪಕ್ಕದಲ್ಲೇ ಇರುವ ದೊಡ್ಡ ಮೋರಿಯ (ವೃಷಭಾವತಿ ನದಿ ) ಹೊಲಸು ನೀರು ನುಗ್ಗಿ ಮಂದಿರವನ್ನ್ನು ಮಲಿನ ಮಾಡಿದೆ.
ಮೈಸೂರು ರಸ್ತೆಯಲ್ಲಿ ಎಂಥಹ ಮಳೆ ಬಿದ್ದರೂ ಗಾಳಿ ಆಂಜನೇಯ ದೇಗುಲಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಆದರೆ ಮಲ್ಲೇಶ್ವರ, ಬಸವನಗುಡಿಯಲ್ಲಿ ಮಳೆ ಒಂದು ಹದಹೆಚ್ಚಿಗೆ ಬಿತ್ತೆಂದರೆ ಸಾಕು ಗಾಳಿ ಆಂಜನೇಯ ದೇಗುವಕ್ಕೆ ನೀರು ನುಗ್ಗುತ್ತದೆ. ಬಸವನಗುಡಿ ಮತ್ತು ಮಲ್ಲೇಶ್ವರದ ಕಡೆಯಿಂದ ಬರುವ 2 ಕಾಲುವೆಗಳ ನೀರು ಸಂಗಮವಾಗುವುದು ಈ ದೇವಾಲಯದ ಬಳಿ.
ಎರಡು ಕಾಲುವೆಗಳು ಕೂಡುವ ಸ್ಥಳಕ್ಕಿಂತಲೂ ಆಂಜನೇಯ ದೇಗುಲ ತಳಮಟ್ಟದಲ್ಲಿದೆ. ಹಾಗಾಗಿ ನೀರು ನೇರವಾಗಿ ದೇವಾಲಯಕ್ಕೆ ನುಗ್ಗುತ್ತದೆ. ದೇವಲಾಯಕ್ಕೆ ನಿಷಿದ್ಧ ಎಂದು ಪರಿಗಣಿಸಿರುವ ವಸ್ತುಗಳೆಲ್ಲಾ ಮಳೆ ನೀರಿನ ಜೊತೆ ಕೊಚ್ಚಿಕೊಂಡು ಬಂದಿವೆ. ಅತ್ಯಂತ ಪುರಾತನ ದೇವಾಲಯಗಳಲ್ಲಿ ಒಂದಾದ ಗಾಳಿ ಆಂಜನೇಯ ದೇಗುಲಕ್ಕೆ ನೀರು ನುಗ್ಗುತ್ತಿರುವುದು ಇದೇ ಮೊದಲಲ್ಲ. ಪ್ರತಿ ವರ್ಷವೂ ಹೀಗೇ ಆಗುತ್ತಿದೆ. ಆದರೆ ಅಧಿಕಾರಿಗಳು ಮಾತ್ರ ಜಾಣ ಕುರುಡರಾಗಿದ್ದಾರೆ.