ಈ ಮೇಕೆಯನ್ನಾದರೂ ನೋಡಿ ಬುದ್ಧಿ ಕಲೀರೋ!

ತಾಲೂಕಿನ ಅಕ್ಕೂರು ಹೊಸಹಳ್ಳಿ ಎಚ್.ಕೆ. ವೀರಣ್ಣಗೌಡ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಡುವಾಗ ಮೇಕೆಯೊಂದು ವಿದ್ಯಾರ್ಥಿಗಳ ಪಕ್ಕದಲ್ಲಿ ನಿಂತು ಪ್ರತಿದಿನ ರಾಷ್ಟ್ರಗೀತೆಗೆ ಗೌರವ ಸಲ್ಲಿಸುತ್ತದೆ.
ಆಶ್ಚರ್ಯವಾದರು ಇದು ಸತ್ಯ! ಗ್ರಾಮದಲ್ಲಿ ಕಬ್ಬಾಳಮ್ಮ ದೇವಿಗೆ ಹರಿಕೆ ಬಿಟ್ಟಿರುವ ಮೇಕೆ ನಿತ್ಯ ಕೈಯಲ್ಲಿ ವಾಚು ಕಟ್ಟಿದವರಂತೆ ನಿಗದಿತ ಪ್ರಾರ್ಥನಾ ಸಮಯಕ್ಕೆ ಹಾಜರ್! ಸಾಲಾಗಿ ನಿಂತ ವಿದ್ಯಾರ್ಥಿಗಳ ಬಳಿ ನಿಂತು ರಾಷ್ಟ್ರಗೀತೆ ಮುಗಿಯುವವರಗೆ ಕದಲದೆ, ಪಾರ್ಥನೆ ಮುಗಿದು 'ಜೈ ಹಿಂದ್' ಎಂದು ಹೇಳಿದ ನಂತರ ಮೇಯಲು ತೆರಳುತ್ತದೆ.
ಇದರ ಜತೆಗೆ ಇನ್ನೇರಡು ಮೇಕೆಗಳಿವೆ. ಅವು ಇದರ ಜತೆಗೆ ಬರುತ್ತವೆಯಾದರೂ ಪ್ರಾರ್ಥನೆಗೆ ನಿಲ್ಲುವುದಿಲ್ಲ. ವಾರದ 6 ದಿನ ನಿತ್ಯ ಗಂಟೆ ಬಾರಿಸಿ ನಾಡಗೀತೆ ಮತ್ತು ರಾಷ್ಟ್ರಗೀತೆ ಹಾಡುವ ಸಮಯಕ್ಕೆ ಹಾಜರಾಗುವ ಮೇಕೆ ಶನಿವಾರ 8 ಗಂಟೆಯ ಪ್ರಾರ್ಥನಾ ಸಮಯಕ್ಕೆ ಹಾಜರಾಗುತ್ತದೆ. ಭಾನುವಾರ ಮತ್ತು ಶಾಲಾ ರಜಾ ದಿನಗಳಲ್ಲಿ ಶಾಲಾ ಆವರಣದತ್ತ ಸುಳಿಯದಿರುವುದು ಇನ್ನೊಂದು ಅಚ್ಚರಿ.
ಅಕ್ಕೂರು ಗ್ರಾಮದ ಬೋರೇಶ್ವರ ದೇವಸ್ಥಾನದ ಬಳಿ ವಾಸ್ತವ್ಯ ಹೂಡುವ ಈ ಮೇಕೆಗಳು, ಮುಂಜಾನೆಯಿಂದ ಗ್ರಾಮದಲ್ಲಿ ಪಥಸಂಚಲನ ನಡೆಸಿ, ಸಿಕ್ಕಿದ್ದನ್ನು ತಿಂದು ವಿದ್ಯಾರ್ಥಿಗಳು ಶಾಲೆ ಕಡೆಗೆ ಹೋಗುವುದನ್ನು ಕಂಡು ಇವು ಕೂಡ ಶಾಲಾ ಆವರಣಕ್ಕೆ ಹಾಜರಾಗುತ್ತವೆ. ಶಾಲಾ ಬೆಲ್ ಬಾರಿಸಿದ ನಂತರ ಒಂದು ಮೇಕೆ ವಿದ್ಯಾರ್ಥಿಳ ಪಕ್ಕದಲ್ಲಿ ಪಾರ್ಥನೆಗೆ ನಿಲ್ಲುತ್ತದೆ.
ಪ್ರಾರ್ಥನೆ ಸಮಯದಲ್ಲಿ ವಿದ್ಯಾರ್ಥಿಗಳು ಅಡ್ಡಾದಿಡ್ಡಿ ನೋಡುವುದನ್ನು ಕಂಡ ಶಾಲೆಯ ಶಿಕ್ಷಕರು ಮೇಕೆ ನೋಡಿ ಬುದ್ದಿ ಕಲೀರೋ ಎಂದು ಗದರಿ, ಮೇಕೆಗಿರುವ ಶಿಸ್ತು ನಿಮಗಿಲ್ಲ ಎಂದು ಮೂದಲಿಸುತ್ತಾರೆ. ಜತೆಗೆ ಈ ಮೇಕೆಯದ್ದೂ ಕಳೆದ ಒಂದು ವರ್ಷದಿಂದಲೂ ಶೇ.ನೂರರಷ್ಟು ಹಾಜರಾತಿ ಇದೆ ಎನ್ನುತ್ತಾರೆ ಇಲ್ಲಿನ ಶಿಕ್ಷಕರು.
ಔತಣಕ್ಕೆ ಬಲಿಪಶು? : ಈ ರಾಷ್ಟ್ರಗೀತೆ ಪ್ರೇಮಿ ಮೇಕೆ ಮುಂದಿನ ದಿನಗಳಲ್ಲಿ ತಮ್ಮ ಸಹಪಾಠಿ ಮೇಕೆಗಳ ಜತೆ ಕಬ್ಬಾಳಮ್ಮ ದೇವಿಗೆ ಹರಕೆ ರೂಪದಲ್ಲಿ ಬಲಿಪಶುವಾಗಲಿರುವುದು ಮಾತ್ರ ದುರಂತ. ಇಂಥ ಅಪರೂಪದ ಮೇಕೆಯನ್ನು ವಿದ್ಯಾರ್ಥಿಗಳೇ ಹೋರಾಟ ಮಾಡಿ ಕಾಪಾಡಬೇಕು. ಇಲ್ಲದಿದ್ದರೆ, ಯಾರಾದರೂ ಪ್ರಜ್ಞಾವಂತರು ಈ ಮೇಕೆಯನ್ನು ಕಾಪಾಡಿ ಪುಣ್ಯ ಕಟ್ಟಿಕೊಳ್ಳಲಿ.












Click it and Unblock the Notifications