ಭಯ ಬಿತ್ತುವ ಟಿವಿ ಜ್ಯೋತಿಷಿಗಳು : ಹೆಗ್ಗಡೆ
ವಾಸ್ತು ಶಾಸ್ತ್ರಜ್ಞ ನಿರಂಜನ ಬಾಬು ಅವರ ವಾಸ್ತು ಕೃತಿ ಬಿಡುಗಡೆ ಮತ್ತು ಖ್ಯಾತ ಜ್ಯೋತಿಷಿ ದಿವಂಗತ ಬಿ ವಿ ರಾಮನ್ ಅವರ 98ನೇ ಜನ್ಮದಿನದ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ಜನರಲ್ಲಿರುವ ಗೊಂದಲ, ಭಯವನ್ನು ಹೋಗಲಾಡಿಸಲು ಇರುವುದೇ ಜ್ಯೋತಿಷ್ಯ. ಆದರೆ, ನವಜ್ಯೋತಿಷ್ಯಗಳು ಮೂಲ ಆಶಯಕ್ಕೆ ಧಕ್ಕೆ ತಂದು ಗೊಂದಲ ಮತ್ತು ಭಯವನ್ನು ಹುಟ್ಟುಹಾಕುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಜ್ಯೋತಿಷ್ಯ ಎನ್ನುವುದು ಪಂಡಿತರಿಗೆ ಮೀಸಲಾದುದು ಎನ್ನುವ ವಾತಾವರಣ ನಿರ್ಮಾಣವಾಗಿದೆ. ಆದರೆ, ವಾಸ್ತವದಲ್ಲಿ ಜ್ಯೋತಿಷ್ಯ, ವಿದ್ವಾಂಸರ ಅಸ್ತಿ ಅಲ್ಲ. ಅದು ಶ್ರೀಸಾಮಾನ್ಯನ ಸ್ವತ್ತು. ನಮ್ಮ ವಾಸ್ತು ಶಿಲ್ಪಿಗಳು, ಕುಶಲಕರ್ಮಿಗಳು, ವಿಶ್ವಕರ್ಮದ ಕೆಲಸ ಮಾಡುವವರು, ಮೇಸ್ತ್ರೀಗಳು ಜ್ಯೋತಿಷ್ಯವನ್ನು ತುಂಬಾ ಚೆನ್ನಾಗಿ ಬಲ್ಲವರಾಗಿದ್ದಾರೆ ಎಂದು ಅವರು ಹೇಳಿದರು.
ಜ್ಯೋತಿಷ್ಯ ಎನ್ನುವುದು ನಂಬಿಕೆ ಅಲ್ಲ ಅಥವಾ ಅಂದಾಜು ಮಾಡುವಂಥದ್ದೂ ಅಲ್ಲ ಎನ್ನುವುದನ್ನು ಖ್ಯಾತ ಜ್ಯೋತಿಷಿ ದಿವಂಗತ ಬಿ ವಿ ರಾಮನ್ ಅವರು ಬಹಳ ಹಿಂದೆಯೇ ತೋರಿಸಿಕೊಟ್ಟಿದ್ದಾರೆ. ಜ್ಯೋತಿಷ್ಯ ಶಾಸ್ತ್ರವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಿದ ಕೀರ್ತಿ ರಾಮನ್ ಅವರಿಗೆ ಸಲ್ಲಬೇಕು ಎಂದು ಹೆಗ್ಗಡೆ ಮೆಚ್ಚುಗೆ ವ್ಯಕ್ತಪಡಿಸಿದರು.