ರೆಡ್ಡಿಗಳು ಕಳ್ಳ ವ್ಯಾಪಾರಿಗಳು : ಸಿದ್ಧರಾಮಯ್ಯ

ತುಮಕೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದರೆ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಅಕ್ರಮ ಗಣಿಗಾರಿಕೆಯಲ್ಲಿ ರೆಡ್ಡಿ ಸಹೋದದರು ಮತ್ತು ಶ್ರೀರಾಮುಲು ಜೈಲಿಗೆ ಹೋಗುವುದು ಗ್ಯಾರಂಟಿ ಎಂದರು. ಕಾಂಗ್ರೆಸ್ಸಿಗರು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದರೆ ಅಂತಹವರ ವಿರುದ್ಧ ಸೇರಿ 2000 ಇಸ್ವಿಯಿಂದ ಇಲ್ಲಿಯವರೆಗೆ ಸಿಬಿಐ ತನಿಖೆಗೆ ವಹಿಸಿ. ತನಿಖೆಯಲ್ಲಿ ತಪ್ಪಿತಸ್ಥರು ಎಂದು ಸಾಬೀತಾದರೆ ನೇಣುಗಂಬಕ್ಕೇರಿಸಿ ಎಂದು ಸಿದ್ದು ತೀವ್ರ ವಾಗ್ದಾಳಿ ನಡೆಸಿದರು.
ಅಕ್ರಮ ಗಣಿಗಾರಿಕೆಯನ್ನು ಲೋಕಾಯುಕ್ತ ತನಿಖೆಗೆ ವಹಿಸಲಾಗಿದೆ ಎಂದು ಹೇಳುತ್ತಿರುವ ಯಡಿಯೂರಪ್ಪ, ಡಿಸೆಂಬರ್ 25, 2008ರಲ್ಲಿ ಲೋಕಾಯುಕ್ತರು ಕೊಟ್ಟ ವರದಿ ಬಗ್ಗೆ ಯಾವ ಕ್ರಮ ಕೈಗೊಂಡಿದ್ದಾರೆ. ಆದರೆ, ಲೋಕಾಯುಕ್ತರ ಹೇಳುವಂತೆ ಅಕ್ರಮ ಗಣಿಗಾರಿಕೆ ತನಿಖೆಗೆ ಸಿಬಿಐ ಸಹಾಯಬೇಕು ಎಂದು ಹೇಳಿದ್ದಾರೆ. ಆದರೂ ಯಡಿಯೂರಪ್ಪ ಹಠಮಾರಿತನ ಪ್ರದರ್ಶನ ಮಾಡುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.
ಅದಿರು ಸಾಗಣೆ ಪರ್ಮಿಟ್ ನಿಷೇಧ, ಬಂದರುಗಳಿಂದ ಅದಿರು ರಫ್ತು ನಿಷೇಧ ಅದು ಸೆಕೆಂಡರಿ, ಆದರೆ, ಮೊದಲು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎನ್ನುವುದು ಪಾದಯಾತ್ರೆಯ ಏಕೈಕ ಉದ್ದೇಶ ಎಂದು ಸಿದ್ದು ಪ್ರತಿಪಾದಿಸಿದರು. ಬೇಲೇಕೇರಿ ಲೋಕಾಯುಕ್ತ ವಶಪಡಿಸಿಕೊಂಡಿದ್ದ 1.5 ಲಕ್ಷ ಟನ್ ಕಬ್ಬಿಣ ಅದಿರು ಎಲ್ಲಿ ಮಾಯವಾಯಿತು. 250 ಕೋಟಿ ರುಪಾಯಿ ಮೌಲ್ಯದ ಅದಿರು ಕದ್ದವರು ಯಾರು ಎನ್ನುವುದನ್ನು ಯಡಿಯೂರಪ್ಪ ಜನತೆಗೆ ಉತ್ತರಿಸಬೇಕು ಎಂದು ಸಿದ್ದು ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ತಾಕತ್ತಿದ್ದರೆ ಮುಖ್ಯಮಂತ್ರಿ, ಸಚಿವರು ಮತ್ತು ಶಾಸಕರನ್ನೂ ಲೋಕಾಯುಕ್ತ ವ್ಯಾಪ್ತಿಗೆ ಸೇರಿಸಿ ಎಂದು ಆಗ್ರಹಿಸಿದ ಸಿದ್ದು, ಕುಮಾರಸ್ವಾಮಿ ಲಂಚ ಹಗರಣವನ್ನು ಸಿಬಿಐಗೆ ವಹಿಸಿ ಎಂದು ಒತ್ತಾಯಿಸಿದ್ದ ರೆಡ್ಡಿ, ಅಕ್ರಮ ಗಣಿಗಾರಿಕೆಗೆ ಏಕೆ ಬೇಡಿ ಅನ್ನುತ್ತಿದ್ದಾರೆ. ಅವರಿಗೆ ಗೊತ್ತಿದೆ, ಸಿಬಿಐ ತನಿಖೆಗೆ ವಹಿಸಿದರೆ ಪರ್ಮನೆಂಟಾಗಿ ಪರಪ್ಪನ ಅಗ್ರಹಾರದ ಪಾಲಾಗುತ್ತೇವೆ ಎಂದು ಲೇವಡಿ ಮಾಡಿದರು.












Click it and Unblock the Notifications