ಸಿಎಂ ನಿರ್ಲಕ್ಷ್ಯದಿಂದಲೇ ಅಕ್ರಮ ಗಣಿಗಾರಿಕೆ : ಟಪಾಲ್
ಜಿಲ್ಲೆಯ ಗಣಿಗಾರಿಕೆ ಕುರಿತು ಸಮಗ್ರ ಮಾಹಿತಿಯ ವರದಿಯನ್ನು ಕಾಲಕಾಲಕ್ಕೆ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದೇನೆ. ಈ ವರದಿಗಳನ್ನು ಅವರು ಓದಿ ಅರ್ಥ ಮಾಡಿಕೊಂಡಿದ್ದರೆ ಅನಧಿಕೃತ ಗಣಿಗಾರಿಕೆಯನ್ನು ಬಹುತೇಕ ನಿಲ್ಲಿಸಬಹುದಾಗಿತ್ತು. ಅಲ್ಲದೇ, ಈ ವಿವಾದ ಇಂದು ಸರ್ಕಾರಕ್ಕೆ ತಲೆನೋವಾಗುತ್ತಿರಲಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಚಿವ ಜಿ. ಜನಾರ್ದನರೆಡ್ಡಿ ಅವರು ತಮ್ಮ ಓಎಂಸಿ ಮತ್ತು ಎಎಂಸಿ ಕಂಪನಿಗಳ ಗಣಿ ಪ್ರದೇಶದ ನಕ್ಷೆ, ಪರವಾನಿಗೆ ಎಲ್ಲವನ್ನೂ ತಮ್ಮ ಮನಸ್ಸಿಗೆ ಬಂದಂತೆ ತಿದ್ದಿ ಕೋರ್ಟ್ಗಳ ಮೊರೆ ಹೋಗುತ್ತಿದ್ದಾರೆ. ಅಲ್ಲದೇ ಅವರು ಕರ್ನಾಟಕ - ಆಂಧ್ರ ಸರ್ಕಾರಗಳನ್ನು ವಂಚಿಸುತ್ತಾ ಜನರನ್ನು ಗೊಂದಲಕ್ಕೆ ಈಡುಮಾಡುತ್ತಿದ್ದಾರೆ. ಈ ಕುರಿತು ಮಾಧ್ಯಮ ಪ್ರತಿನಿಧಿಗಳನ್ನು ಕೂಡ ತೀವ್ರ ಗೊಂದಲಕ್ಕೆ ಈಡು ಮಾಡಿದ್ದಾರೆ ಎಂದರು.
ನೆರೆಯ ಆಂಧ್ರದಲ್ಲಿ ಗಣಿ ಗುತ್ತಿಗೆಯನ್ನು ಪಡೆದಿರುವ ರೆಡ್ಡಿಗಳು ಗಡಿಯಲ್ಲಿಯ ಕರ್ನಾಟದ ತುಮಟಿ, ವಿಠ್ಠಲಾಪುರ ಹಾಗೂ ಇತರೆ ಗ್ರಾಮಗಳ ವ್ಯಾಪ್ತಿಯ ಗಣಿಗಳಿಗೆ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದಾರೆ. ಆದರೂ, ಕರ್ನಾಟಕದಲ್ಲಿ ತಾವು ಗಣಿಗಾರಿಕೆ ನಡೆಸಿಲ್ಲ. ಜಿಲ್ಲೆಯಲ್ಲಿ ನಮ್ಮ ಗಣಿಗಳೇ ಇಲ್ಲ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ. ಈ ನಿಟ್ಟಿನಲ್ಲಿ ಅಧಿಕಾರಿಗಳು, ತನಿಖಾ ತಂಡಗಳು ವಸ್ತುನಿಷ್ಠ ವರದಿಯನ್ನೇ ನೀಡಿವೆ ಎಂದರು.
1896ರ ನೀಲನಕ್ಷೆಯ ಪ್ರಕಾರ ಕರ್ನಾಟಕ - ಆಂಧ್ರದ ಗಡಿಗಳ ಸರ್ವೇಗೆ ಸುಪ್ರೀಂಕೋರ್ಟ್ ಆದೇಶ ಜಾರಿ ಮಾಡಿದಲ್ಲಿ ಗಡಿ ಸಮಸ್ಯೆ ಇತ್ಯರ್ಥ ಆಗಲಿದೆ. ಆಗ, ಜನತೆಗೆ ಸತ್ಯಾಂಶ ತಿಳಿಯಲಿದೆ. ಈ ಎಲ್ಲಾ ಮಾಹಿತಿಯನ್ನು ನಾನು ಲೋಕಾಯುಕ್ತರಿಗೆ ನೀಡುತ್ತೇನೆ. ಲೋಕಾಯುಕ್ತರು ಜಿಲ್ಲಾಧಿಕಾರಿಗಳನ್ನು ಕೂಡ ತನಿಖೆ ಮಾಡಲಿ. ಈ ನಿಟ್ಟಿನಲ್ಲಿ ತಪ್ಪಿತಸ್ತರನ್ನು ಶಿಕ್ಷಿಸುವಂತಾಗಲಿ ಎಂದರು.