ಕಾಮನ್ ವೆಲ್ತ್ ಕ್ರೀಡಾಕೂಟಕ್ಕೂ ಕಾರ್ಮಿಕರ ಕೊರತೆ
ದೆಹಲಿ ನಗರ ಸರ್ಕಾರದ ಮುಖ್ಯ ಕಾರ್ಯದರ್ಶಿ ರಾಕೇಶ್ ಮೆಹ್ತಾ ಪ್ರಕಾರ ಕ್ರೀಡಾಕೂಟಕ್ಕೆ ಕಾರ್ಮಿಕರ ಕೊರತೆ ಶೇ.20ರಷ್ಟಿದೆ. ಅಲ್ಲದೆ ಉತ್ತಮ ಮುಂಗಾರಿನ ಕಾರಣದಿಂದ ದೆಹಲಿಗೆ ವಲಸೆ ಬಂದಿದ್ದ ಕಾರ್ಮಿಕರು ತಮ್ಮ ಹಳ್ಳಿಗಳಿಗೆ ಕೃಷಿ ಕೆಲಸಕ್ಕೆ ಮರಳುತ್ತಿದ್ದಾರೆ.
ರಾಜಧಾನಿ ವಲಯದಲ್ಲಿ ಕಳೆದ 18 ತಿಂಗಳಿನಲ್ಲಿ ಕಾರ್ಮಿಕರ ವೇತನ ಶೇ40 ರಿಂದ 60 ರಷ್ಟು ಹೆಚ್ಚಾಗಿದೆ. ದೆಹಲಿ ಮೂಲದ ರಿಯಲ್ ಎಸ್ಟೇಟ್ ಕಂಪೆನಿ ಸರೆ ಇಂಡಿಯಾದ ಮುಖ್ಯ ನಿರ್ವಹಣಾ ಅಧಿಕಾರಿ ವಿನೀತ್ ರೆಲಿ ಪ್ರಕಾರ ಹಣದುಬ್ಬರ ಹಾಗೂ ಆಹಾರ ಪದಾರ್ಥಗಳ ಬೆಲೆ ಹೆಚ್ಚಿರುವುದರಿಂದ ಕಾರ್ಮಿಕರ ವೇತನ ಹೆಚ್ಚಾಗಿದೆ.
ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಯೋಜನೆಯಿಂದಲೂ ಕಾರ್ಮಿರ ಕೊರತೆ ಹೆಚ್ಚಿದೆ ಎಂದೂ ಅವರು ಹೇಳಿದರು. ಕೌಶಲ್ಯವುಳ್ಳ ಮತ್ತು ಕೌಶಲ್ಯ ರಹಿತ ಕಾರ್ಮಿಕರಷ್ಟೇ ಅಲ್ಲದೆ ಉನ್ನತ ಮಟ್ಟದ ಹುದ್ದೆಗಳಲ್ಲಿರುವ ಅಧಿಕಾರಿಗಳೂ ಉತ್ತಮ ಅವಕಾಶದ ಹಿನ್ನೆಲೆಯಲ್ಲಿ ಟೆಲಿಕಮ್ಯುನಿಕೇಷನ್ಸ್, ಶೀಘ್ರ ಮಾರಾಟ ಗ್ರಾಹಕ ಉತ್ಪನ್ನರಂಗಕ್ಕೆ ವಲಸೆ ಹೋಗುತ್ತಿದ್ದಾರೆ
ಉದ್ಯಮಿಗಳ ಪ್ರಕಾರ ರಿಯಲ್ ಎಸ್ಟೇಟ್ ಉದ್ಯಮಕ್ಕೇ ಕಾರ್ಮಿಕರನ್ನು ತರಬೇತಿ ನೀಡುವ ಶಿಕ್ಷಣ ಸಂಸ್ಥೆಗಳು ಇಲ್ಲದ್ದರಿಂದ ನಿರ್ಮಾಣ ರಂಗವೂ ಕಾರ್ಮಿಕರ ತೀವ್ರ ಕೊರತೆ ಎದುರಿಸುತ್ತಿದೆ. ಈಗ ಕಾರ್ಮಿಕರ ಸರಬರಾಜು ಮತ್ತು ಬೇಡಿಕೆ ಶೇ.40:50 ರ ಅನುಪಾತದಲ್ಲಿದೆ.
ರಾಜಧಾನಿಯ ಹೊರಗೆ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣ ಹಾಗೂ ಇತರ ಬೃಹತ್ ಯೋಜನೆಗಳಿಗೆ ಕೌಶಲ್ಯವುಳ್ಳ ಕಾರ್ಮಿಕರ ಅವಶ್ಯಕತೆ ಇದ್ದು ಗುತ್ತಿಗೆದಾರರು ದೆಹಲಿಯಿಂದ ಅಲ್ಲಿಗೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದಾರೆ.
ರಹೇಜಾ ಡೆವಲಪರ್ಸ್ ನ ವ್ಯವಸ್ಥಾಪಕ ನಿರ್ದೇಶಕ ನವೀನ್ ರಹೇಜಾ ಪ್ರಕಾರ ಕೆಲಸಗಾರರನ್ನು ಉಳಿಸಿಕೊಳ್ಳಲು ಉದ್ಯಮಿಗಳು ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ಆಹಾರ ಹಾಗೂ ಮಕ್ಕಳಿಗೆ ಬಾಲವಾಡಿ ಸೌಕರ್ಯ ಒದಗಿಸಲು ಮುಂದಾಗಬೇಕಿದೆ.