ಕಾಶ್ಮೀರಿಗಳಿಗೆ ಬೆಲೆ ಕೊಡದ ಭಾರತ
ಭಾರತದ ವಿದೇಶಾಂಗ ಸಚಿವ ಎಸ್ ಎಂ ಕೃಷ್ಣ ಅವರು ಮೂರು ದಿನಗಳ ಭೇಟಿ ಮುಗಿಸಿ ಇಂದು ಭಾರತಕ್ಕೆ ಪ್ರಯಾಣ ಬೆಳೆಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಶಿ, ಉಭಯ ದೇಶಗಳ ಬಾಂಧವ್ಯ ವೃದ್ಧಿಸಲು ಭಾರತ ಇನ್ನಷ್ಟು ಸಿದ್ಧತೆ ಮಾಡಿಕೊಳ್ಳಬೇಕಿದೆ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಉಭಯ ದೇಶಗಳ ಮಾತುಕತೆ ಬರೀ ಕೆಲ ವಿಷಯಗಳಿಗೆ ಮಾತ್ರ ಸೀಮಿತವಾಗಿರಬಾರದು. ಅದರಾಚೆಗೂ ಅನೇಕ ಸಮಸ್ಯೆಗಳು ಎರಡು ದೇಶಗಳನ್ನು ಕಾಡುತ್ತಿವೆ. ಪಾಕಿಸ್ತಾನ ಮುಖ್ಯವಾಗಿ ಕಾಶ್ಮೀರ ವಿವಾದವನ್ನು ಬಗೆಹರಿಸಲು ಆಸಕ್ತಿ ವಹಿಸುತ್ತದೆ. ಅಲ್ಲಿನ ಜನತೆ ಪಾಕಿಸ್ತಾನವನ್ನು ಅಪಾರವಾಗಿ ಪ್ರೀತಿಸುತ್ತಾರೆ. ಅಲ್ಲಿನ ಜನರ ಭಾವನೆಗಳಿಗೆ ಭಾರತ ಬೆಲೆ ಕೊಡಬೇಕಿದೆ ಎಂದು ಖುರೇಶಿ ಹೇಳಿದರು.
ಸದ್ಯ ಭಾರತ ಮಾತುಕತೆ ನಡೆಸಿದ್ದು ಬರೀ ಭಯೋತ್ಪಾದನೆಗೆ ಸಂಬಂಧಿಸಿದ್ದಾಗಿದೆ. ರಕ್ಷಣೆ ಪ್ರಮುಖ ವಿಚಾರವಾದರೂ ಉಭಯಗಳಲ್ಲಿ ಅನೇಕ ಜ್ವಲಂತ ಸಮಸ್ಯೆಗಳಿವೆ. ಅದರ ಕಡೆಗೆ ಭಾರತ ಏಕೆ ಚಿಂತನೆ ನಡೆಸುತ್ತಿಲ್ಲ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ ಎಂದು ಖುರೇಶಿ ಪ್ರಶ್ನಿಸಿದರು. ಮುಂಬೈ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನದಲ್ಲಿರುವ ಉಗ್ರರನ್ನು ಭಾರತಕ್ಕೆ ಒಪ್ಪಿಸಬೇಕು ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಉಭಯ ದೇಶಗಳ ವಿದೇಶಾಂಗ ಸಚಿವರು ಚರ್ಚೆ ನಡೆಸಿದ್ದಾರೆ.