ಆತ್ಮಹತ್ಯೆಗೆ ಯತ್ನಿಸಿದ ಕಾರ್ಮಿಕ ಸುರೇಶ್ಕುಮಾರ್

ಸಾವಿನ ಮನೆಯಿಂದ ಪಾರಾದ ಈ ಕಾರ್ಮಿಕನ ಹೆಸರು ಆರ್.ಸುರೇಶ್ಕುಮಾರ್. ಇದೀಗ ಈತ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತ್ಮಹತ್ಯೆಗೆ ಶರಣಾಗುವ ಮುನ್ನ ಈತ ಜಿಲ್ಲಾ ರಕ್ಷಣಾಧಿಕಾರಿಗಳೂ ಸೇರಿದಂತೆ ಮುಖ್ಯಮಂತ್ರಿಗಳಿಗೂ ಪತ್ರವೊಂದನ್ನು ಬರೆದಿಟ್ಟಿದ್ದಾನೆ. ನ್ಯಾಯಾಲಯದ ಆದೇಶಗಳನ್ನು ಧಿಕ್ಕರಿಸಿದ ಎಂಪಿಎಂ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ, ತನ್ನ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾನೆ.
ಹಿನ್ನೆಲೆ: ಈಗ ಆತ್ಮಹತ್ಯೆಗೆ ಯತ್ನಿಸಿದ ಸುರೇಶ್ಕುಮಾರ್ ಸೇರಿದಂತೆ 24 ಕಾರ್ಮಿಕರನ್ನು ಎಂಪಿಎಂ ಆಡಳಿತ ವರ್ಗ ವಿನಾಃ ಕಾರಣ 7-2-2000ದಂದು ಸೇವೆಯಿಂದ ವಜಾಗೊಳಿಸಿತ್ತು. ಆಡಳಿತ ವರ್ಗದ ಈ ಕ್ರಮವನ್ನು ಪ್ರಶ್ನಿಸಿ ಮಂಗಳೂರು ಕಾರ್ಮಿಕರ ನ್ಯಾಯಾಲಯದಲ್ಲಿ ಇವರು ಮೇಲ್ಮನವಿ ಸಲ್ಲಿಸಿದ್ದರು.
ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯ ಎಂಪಿಎಂ ಆಡಳಿತ ವರ್ಗ ಜಾರಿಗೊಳಿಸಿದ್ದ ಎಲ್ಲಾ ವಜಾ ಆದೇಶಗಳನ್ನು ರದ್ದುಗೊಳಿಸಿ ಸೇವಾ ಸೌಲಭ್ಯವನ್ನು ನೀಡಿ, ಪುನಃ ಕೆಲಸಕ್ಕೆ ಸೇರಿಸಿಕೊಳ್ಳುವಂತೆ 6-1-2007ರಂದು ತೀರ್ಪು ನೀಡಿತ್ತು.
ಈ ತೀರ್ಪಿಗೆ ಎಂಪಿಎಂ ಆಡಳಿತ ಮಂಡಳಿ ಒಪ್ಪಿರಲಿಲ್ಲ. ನ್ಯಾಯಾಲಯದ ಆದೇಶವನ್ನು ಪರಿಗಣಿಸಲಿಲ್ಲ. ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿ ತಡೆ ತಂದರು. ಉಚ್ಚ ನ್ಯಾಯಾಲಯ ಕೂಡ ಈ ಪ್ರಕರಣವನ್ನು ಪರಿಶೀಲಿಸಿ ಪುನಃ ಮಂಗಳೂರು ಕಾರ್ಮಿಕ ನ್ಯಾಯಾಲಯಕ್ಕೆ ಕಡತವನ್ನು ವಾಪಾಸ್ ಕಳುಹಿಸಿತು. ಕಾರ್ಮಿಕ ನ್ಯಾಯಾಲಯ ಪುನಃ ಆಡಳಿತ ಮಂಡಳಿಗೆ ಕೆಲಸಕ್ಕೆ ತೆಗೆದುಕೊಳ್ಳುವಂತೆ ಮತ್ತು ತಡೆ ಹಿಡಿದ ವೇತನವನ್ನು ನೀಡುವಂತೆ ಆದೇಶ ನೀಡಿತು. ಆದರೆ ಈ ಆದೇಶವನ್ನೂ ಕೂಡ ಎಂಪಿಎಂ ಆಡಳಿತ ಮಂಡಳಿ ತಿರಸ್ಕರಿಸಿತು. 23-10-2007ರಿಂದ ನೀಡುತ್ತಿದ್ದ ವೇತನವನ್ನೂ ಕೂಡ ಸ್ಥಗಿತಗೊಳಿಸಿ ನನ್ನನ್ನು ನನ್ನ ಕುಟುಂಬವನ್ನೂ ಬೀದಿಗೆ ತಂದಿತು ಎಂದು ಆತ್ಮಹತ್ಯೆಗೆ ಯತ್ನಿಸಿದ ಕಾರ್ಮಿಕ ಆರೋಪಿಸಿದ್ದಾರೆ.
ನ್ಯಾಯಾಲಯವು ತಮ್ಮನ್ನು ಸಂಪೂರ್ಣ ನಿರ್ದೋಷಿಯೆಂದು ತೀರ್ಪು ನೀಡಿದ್ದರೂ ಕೂಡ ಎಂಪಿಎಂ ಆಡಳಿತ ಮಂಡಳಿ ಪುನಃ ಕೆಲಸಕ್ಕೆ ಸೇರಿಸಿಕೊಳ್ಳದೇ ಕಿರುಕುಳ ನೀಡುತ್ತಿದೆ. ನನ್ನ ಹೆಂಡತಿ ಮತ್ತು ಮಕ್ಕಳು ಇದರಿಂದ ಬೀದಿಗೆ ಬಂದಿದ್ದಾರೆ. ಸಾವು ಬಿಟ್ಟು ನನಗೇನು ಬೇರೆ ಕಾಣುತ್ತಿಲ್ಲ. ಅಧಿಕಾರಿಗಳ ದೌರ್ಜನ್ಯಕ್ಕೆ ಸಿಲುಕಿ ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿ ಸಾಕಷ್ಟು ಸಾಲ ಮಾಡಿಕೊಂಡಿರುವ ನಾನು ಬೇರೆ ದಾರಿ ಕಾಣದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.











Click it and Unblock the Notifications