ಚಿತ್ರಕ್ಕೆ ವಿಷ್ಣುವರ್ಧನ ಹೆಸರಿಡುವುದು ತಪ್ಪೇ?
ವಿಷ್ಣುವರ್ಧನ್ ಹೆಸರನ್ನು ತಮ್ಮ ಚಿತ್ರಕ್ಕೆ ದ್ವಾರಕೀಶ್ ಇಡಬಾರದು ಎಂದು ಭಾರತಿ ವಿಷ್ಣುವರ್ಧನ್ ಖಡಾಖಂಡಿತವಾಗಿ ಹೇಳಿದ್ದಾರೆ. ವಿಷ್ಣುವರ್ಧನ್ ಸಮಸ್ತ ಕನ್ನಡಿಗರ ಆಸ್ತಿ. ನಾನಲ್ಲದೆ ಬೇರೆ ಯಾರಿಗೂ ಆತನ ಹೆಸರಿಟ್ಟು ಚಿತ್ರ ನಿರ್ಮಿಸಲು ಅವಕಾಶ ನೀಡುವುದಿಲ್ಲ ಎಂದು ಭಾರತಿ ವಿಷ್ಣುವರ್ಧನ್ ಪಟ್ಟುಹಿಡಿದ್ದಾರೆ.
ದ್ವಾರಕೀಶ್ ಮತ್ತು ವಿಷ್ಣುವರ್ಧನ್ ನಡುವೆ ಎಂತಹ ಸಂಬಂಧವಿತ್ತು ಎನ್ನುವುದು ಇಡೀ ಕರ್ನಾಟಕಕ್ಕೆ ಗೊತ್ತಿದೆ. ವಿಷ್ಣುವರ್ಧನ್ ಮೇಲಿನ ಪ್ರೀತಿಗಾಗಲಿ, ಅಭಿಮಾನಕ್ಕಾಗಲಿ, ಸ್ನೇಹಕ್ಕಾಗಲಿ ದ್ವಾರಕೀಶ್ ಚಿತ್ರ ನಿರ್ಮಾಣ ಮಾಡುತ್ತಿಲ್ಲ. ವಿಷ್ಣುವರ್ಧನ್ ಚಿತ್ರ ನಿರ್ಮಾಣ ಮಾಡುವುದರಲ್ಲಿ ಸ್ವಹಿತಾಸಕ್ತಿ ಇದೆ. ಹಣ ಮಾಡುವುದೇ ದ್ವಾರಕೀಶ್ ಅವರ ಏಕೈಕ ಉದ್ದೇಶವಾಗಿದೆ ಎಂದು ಭಾರತಿ ವಿಷ್ಣುವರ್ಧನ್ ಆರೋಪಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ದ್ವಾರಕೀಶ್, ವಿಷ್ಣು ಮೇಲೆ ನನಗೆಷ್ಟು ಅಭಿಮಾನ ಇತ್ತೆಂದು ಇಡೀ ಕರ್ನಾಟಕ್ಕೇ ಗೊತ್ತಿದೆ. ನಮ್ಮಿಬ್ಬರ ಮಧ್ಯೆ ವೈಮನಸ್ಯ ಇದ್ದಿರಬಹುದು, ಜಗಳಾಡಿದ್ದೇವೆ, ಬೈದಾಡಿಕೊಂಡಿದ್ದೇವೆ. ಆದರೆ ಆತನನ್ನು ನನ್ನಿಂದ ಮರೆಯಲು ಆಗುವುದಿಲ್ಲ. ಆತನ ಗೌರವಕ್ಕೆ ಚ್ಯುತಿ ತರುವಂಥ ಕೆಲಸ ಮಾಡುವುದಿಲ್ಲ. ವಿಷ್ಣುವರ್ಧನ್ ಹೆಸರಿನಲ್ಲಿ ಚಿತ್ರ ಮಾಡೇ ತೀರುತ್ತೇನೆ. ಯಾರೇ ಅಡ್ಡಿಪಡಿಸಿದರೂ ಚಿತ್ರ ನಿರ್ಮಾಣ ಸ್ಥಗಿತಗೊಳಿಸುವುದಿಲ್ಲ. ಅಷ್ಟಕ್ಕೂ ಮೀರಿ ಚಿತ್ರ ನಿರ್ಮಾಣಕ್ಕೆ ತೊಂದರೆ ನೀಡಿದರೆ ಕಾನೂನು ಹೋರಾಟಕ್ಕೆ ನಿಲ್ಲುವೆ ಎಂದು ದ್ವಾರಕೀಶ್ ಹಠ ಹಿಡಿದು ಕುಳಿತಿದ್ದಾರೆ.
ದ್ವಾರಕೀಶ್ ನಿರ್ಮಾಣದ ಚಿತ್ರಕ್ಕೆ ವಿಷ್ಣುವರ್ಧನ್ ಹೆಸರು ನೀಡಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿರಾಕರಿಸಿದೆ. ಯಾವುದೇ ಗಣ್ಯ ವ್ಯಕ್ತಿಗಳ ಹೆಸರನ್ನು ಚಿತ್ರಕ್ಕೆ ಇಡಬಾರದು. ಹಾಗೇನಾದರೂ ಇಟ್ಟರೆ ಅವರು ಮಂಡಳಿ ಕಾನೂನನ್ನು ಉಲ್ಲಂಘಿಸಿದಂತಾಗುತ್ತದೆ ಮಂಡಳಿ ಅಧ್ಯಕ್ಷ ಬಸಂತ್ ಕುಮಾರ್ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.
ಕನ್ನಡ ಚಿತ್ರರಂಗ ಸಂಪೂರ್ಣ ನೆಲಕಚ್ಚಿದೆ. 100 ಸಿನಿಮಾದಲ್ಲಿ 2 ಸಿನಿಮಾಗಳು ಎವರೇಜ್ ಗೆಲುವು ಕಾಣುತ್ತಿವೆ. ಉಳಿದ 98 ಚಿತ್ರಗಳು ಕಸದ ಬುಟ್ಟಿಗೆ ಸೇರುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಚಿತ್ರ ಗೆಲುವಿಗಾಗಿ ನಿರ್ಮಾಪಕ ಚಿಂತನೆ ನಡೆಸುವುದು ಸಹಜ. ಆದರೆ, ದ್ವಾರಕೀಶ್ ಅವರ ವಿಷ್ಣುವರ್ಧನ್ ಚಿತ್ರ ಅನಗತ್ಯವಾಗಿ ಸಾಕಷ್ಟು ವಿವಾದಕ್ಕೆ ಈಡು ಮಾಡಿದೆ.
ಕನ್ನಡ ಚಿತ್ರವೊಂದಕ್ಕೆ ವಿಷ್ಣುವರ್ಧನ್ ಅಂತ ಹೆಸರಿಟ್ಟಿರುವುದು ತಪ್ಪೆ? ನೀವೇ ಹೇಳಿ.