ರವಿಶಂಕರ್ ಗುರೂಜಿ ಆಶ್ರಮಕ್ಕೆ ಬೆದರಿಕೆ
ಬೆಂಗಳೂರು, ಜೂ.30: ನಗರದ ಕನಕಪುರ ರಸ್ತೆಯಲ್ಲಿರುವ ಶ್ರೀ ಶ್ರೀ ರವಿಶಂಕರ್ ಅವರ ಆರ್ಟ್ ಆಫ್ ಲಿವಿಂಗ್ ಆಶ್ರಮದ ಸಿಬ್ಬಂದಿಗೆ ಅನಾಮಿಕ ವ್ಯಕ್ತಿಗಳಿಂದ ಬೆದರಿಕೆ ಕರೆ ಬಂದಿದ್ದು, 42 ಕೋಟಿ ರು. ಹಣ ನೀಡುವಂತೆ ಒತ್ತಾಯಿಸಿದ್ದಾರೆ.
ನಮ್ಮ ಬಳಿ ಆಶ್ರಮದ ವಿರುದ್ಧ ಅಪಪ್ರಚಾರ ಮಾಡಬೇಕಾದ ಎಲ್ಲಾ ಸಾಮಗ್ರಿಗಳಿವೆ. ಒಂದುವೇಳೆ ಹಣ ಕೊಡದಿದ್ದರೆ ಆಶ್ರಮದ ವಿರುದ್ಧ ಅಪಪ್ರಚಾರ ಮಾಡುವುದಾಗಿ ಬೆದರಿಸಲಾಗಿದೆ. ಆಶ್ರಮದಲ್ಲಿ ನೆಲೆಸಿರುವ ಕೆಲ ಭಕ್ತರು ಹಾಗೂ ನಾಲ್ಕು ಜನ ಶಿಕ್ಷಕಿಯರ ಮೊಬೈಲ್ ಗೆ ಮೂರ್ನಾಲ್ಕು ದಿನಗಳಿಂದ ಈ ರೀತಿ ಬೆದರಿಕೆ ಕರೆ ಬರುತ್ತಿವೆ. ಈ ಸಂಬಂಧ ಮಂಗಳವಾರ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಕರೆ ಮಾಡಿದವರು ಕನ್ನಡ ಹಾಗೂ ಇಂಗ್ಲಿಷ್ ನಲ್ಲಿ ಮಾತನಾಡುತ್ತಿದ್ದರಲ್ಲದೇ ಪ್ರತಿನಿತ್ಯ ಬೇರೆ ಬೇರೆ ಸಂಖ್ಯೆಗಳಿಂದ ಕರೆಮಾಡುತ್ತಿದ್ದರು. ಎಲ್ಲಾ ಸಂಖ್ಯೆಗಳು ಭಾರತದ ಮೊಬೈಲ್ ಸಂಖ್ಯೆಗಳಾಗಿದ್ದು, ಎಲ್ಲಾ ದೂರವಾಣಿ ಸಂಖ್ಯೆ, ಸಮಯ ಹಾಗೂ ಘಟನೆಯ ಸಂಪೂರ್ಣ ವಿವರಗಳನ್ನು ಪೊಲೀಸ್ ಮಹಾ ನಿರ್ದೇಶಕ ಅಜಯ್ ಕುಮಾರ್ ಸಿಂಗ್ ಹಾಗೂ ವಲಯ ಐಜಿಪಿ ಕಮಲ್ ಪಂತ್ ಅವರಿಗೂ ನೀಡಲಾಗಿದೆ ಆಶ್ರಮನಿವಾಸಿ ಗಿರಿನ್ ಹೇಳಿದರು.