ಭಾವಿ ಶಿಕ್ಷಕರಿಗೆ ಪೊಲೀಸರ ಧರ್ಮದೇಟು!
ಸುಮಾರು ನೂರಕ್ಕೂ ಹೆಚ್ಚು ಮಂದಿಯನ್ನು ಹಿಡಿಯ ಹೊರಟ್ಟಿದ್ದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ ಅನೇಕ ವಿದ್ಯಾರ್ಥಿಗಳು ಡೆಸ್ಕ್ ಅಡಿ, ಮಂಚದಡಿ ಬಚ್ಚಿಟ್ಟುಕೊಂಡು, ತೆವಳಿಕೊಂಡು , ಗೋಡೆ ಹಾರಿ ಪರಾರಿಯಾಗಿದ್ದಾರೆ.
ಭಾವಿ ಶಿಕ್ಷಕರ ಮೇಲೆ ಏನಂಥಾ ಆರೋಪ?ಮಕ್ಕಳಿಗೆ ಸರಿ ತಪ್ಪು ಬಗ್ಗೆ ತಿಳಿ ಹೇಳಬೇಕಾದ ಶಿಕ್ಷಕರೇ ಮಾಸ್ ಕಾಪಿಯಲ್ಲಿ ತೊಡಗಿದರೆ, ಅದೂ ರಾತ್ರಿ ವೇಳೆಯಲ್ಲಿ , ಯಾವ ಪೊಲೀಸ್ ಗೆ ತಾನೇ ಉರಿಯುವುದಿಲ್ಲ. ಅಕ್ರಮವಾಗಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದು, 1.07 ಲಕ್ಷ ರು ನಗದು, 19 ಮೊಬೈಲ್, 3 ಬೈಕುಗಳನ್ನು ಜಪ್ತಿ ಮಾಡಿದ್ದಾರೆ.
ಇಂದಿರಾಗಾಂಧಿ ಬಿಎಡ್ ಕಾಲೇಜು ವಿದ್ಯಾರ್ಥಿಗಳು ಜೂ.18 ರಿಂದ 22 ರ ವರೆಗೂ ಇದ್ದ ಪರೀಕ್ಷೆಯನ್ನ್ನೇ ಪುನಃ ನಿನ್ನೆ ರಾತ್ರಿ ಕಾಲೇಜಿನ ಹಾಸ್ಟೆಲ್ ನಲ್ಲಿ ಅಕ್ರಮವಾಗಿ ಬರೆಯುತ್ತಿದ್ದರು. ಡಿವೈಎಸ್ಪಿ ಮಧುರ ವೀಣಾ ಅವರ ನೇತೃತ್ವದ ತಂಡ ದಾಳಿ ಮಾಡಿ 26 ಜನ ನಕಲಿ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.
ಸಾಮೂಹಿಕ ನಕಲು: ಹಾಸ್ಟೆಲ್ ನಲ್ಲಿ ಸುಮಾರು 100 ಮಂದಿ ವಿದ್ಯಾರ್ಥಿಗಳು ಸಾಮೂಹಿಕ ನಕಲು ಮಾಡುತ್ತಿದ್ದರು. ಪುಸ್ತಕ ಇಟ್ಟುಕೊಂಡು ಆರಾಮವಾಗಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳ ಮೇಲೆ ಏಕಾಏಕಿ ದಾಳಿ ಮಾಡಿದ ವೀಣಾ ಅವರ ತಂಡಕ್ಕೆ ಜೂ. 18,19,21ಹಾಗೂ 22 ರ ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳನ್ನು ಕಸಿದುಕೊಂಡು ಥಳಿಸಿದ್ದಾರೆ.
'ವಿದ್ಯ್ಯೆಯೇ ಅಮೃತ' ಎನ್ನುವ ಗುಲಬರ್ಗಾ ವಿಶ್ವವಿದ್ಯಾಲಯದ ಬಿಎಡ್ ಪರೀಕ್ಷೆಯನ್ನು ಅಕ್ರಮವಾಗಿ ಹಾಸ್ಟೆಲ್ ನಲ್ಲಿ ಬರೆಸಲಾಗುತ್ತಿತ್ತು. ಎಲ್ಲಾ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ಪಾಸಾಗಬೇಕು ಎಂಬ ಉದ್ದೇಶ ಹಾಗೂ ಮಾಸ್ ಕಾಪಿ ಪ್ರಕರಣದಲ್ಲಿ ಆಡಳಿತ ಮಂಡಳಿಯ ಕೈವಾಡ ಇರುವುದು ಸ್ಪಷ್ಟ ವಾಗಿದೆ ಎಂದು ರಾಘವೇಂದ್ರ್ ಪೊಲೀಸ್ ಠಾಣಾಧಿಕಾರಿ ಹೇಳಿದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ, ಸಮೂಹಿಕ ನಕಲು ದೊಡ್ಡ ಪಿಡುಗಾಗಿದೆ. ಇದರ ಬಗ್ಗೆ ತೀವ್ರ ತನಿಖೆ ನಡೆಸಲಾಗುವುದು. ತಪ್ಪಿತಸ್ಥರಿಗೆ ಶಿಕ್ಷೆ ಖಚಿತ ಎಂದರು.