ನಿತ್ಯ ಕೊಲ್ಲಬೇಡಿ ಒಮ್ಮೆಗೆ ಗಲ್ಲಿಗೇರಿಸಿ : ಅಫ್ಜಲ್
ಸಂಸತ್ ಮೇಲಿನ ದಾಳಿಗೆ ಸಂಬಂಧಿಸಿದಂತೆ ಕಳೆದ ನಾಲ್ಕು ವರ್ಷಗಳ ಹಿಂದೆಯೇ ಅಫ್ಜಲ್ ಗುರುಗೆ ಗಲ್ಲು ಶಿಕ್ಷೆ ಖಾಯಂ ಆಗಿದೆ. ಜೀವದಾನ ನೀಡಬೇಕೆಂದು ರಾಷ್ಟ್ರಪತಿ ಬಳಿ ಅವನು ಅರ್ಜಿ ಸಲ್ಲಿಸಿದ್ದಾನೆ. ಆ ಅರ್ಜಿಯನ್ನು ರಾಷ್ಟ್ರಪತಿಗಳು ಕೇಂದ್ರ ಸರಕಾರಕ್ಕೆ ತಳ್ಳಿದ್ದಾರೆ. ಕೇಂದ್ರ ಸರಕಾರ ಸಂಬಂಧಪಟ್ಟ ರಾಜ್ಯ ಸರಕಾರಕ್ಕೆ ವರ್ಗಾಯಿಸಿದೆ. ಇದೀಗ ತಾನೇ ದೆಹಲಿ ಸರಕಾರ ಕೇಂದ್ರ ಸರಕಾರಕ್ಕೆ ಉತ್ತರಿಸಿದೆ. ಈ ಎಲ್ಲ ಪ್ರಕ್ರಿಯೆಗಳು ನಡೆಯಲು ನಾಲ್ಕು ವರ್ಷಗಳನ್ನು ತೆಗೆದುಕೊಂಡಿದೆ.
ಅತ್ತ ತಿಹಾರ್ ಜೈಲಿನಲ್ಲಿ ಉಗ್ರ ಅಫ್ಜಲ್ ಗುರು ಗೋಳೂ ಎನ್ನುತ್ತಿದ್ದಾನೆ. ಗಲ್ಲು ಶಿಕ್ಷೆಗಿಂತ ತೀವ್ರವಾದ ಮಾನಸಿಕ ಹಿಂಸೆಯನ್ನು ನಾನು ಜೈಲಿನಲ್ಲಿ ಅನುಭವಿಸುತ್ತಿರುವೆ. ಈ ಹಿಂಸೆಗಿಂತ ಶಿಕ್ಷೆ ಎಷ್ಟೂ ವಾಸಿ ಎಂದು ಸುಪ್ರಿಂಕೋರ್ಟ್ ಮೊರೆ ಹೋಗಿದ್ದಾನೆ. ಕಳೆದ ವಾರ ಅವನ ವಕೀಲ ಎನ್ ಡಿ ಪಾಂಚೋಲಿ ಮೂಲಕ ಅರ್ಜಿ ಸಲ್ಲಿಸಿದ್ದು, ಜೀವದಾನಕ್ಕೆ ಬೇಡಿ ರಾಷ್ಟ್ರಪತಿಗಳಿಗೆ ಸಲ್ಲಿಸಿರುವ ಅರ್ಜಿಯ ಬಗ್ಗೆ ಕೂಡಲೇ ಒಂದು ನಿರ್ಧಾರ ತೆಗೆದುಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾನೆ. ನ್ಯಾಯಾಲಯ ಈ ಬಗ್ಗೆ ಸರಕಾರಕ್ಕೆ ಸೂಚಿಸಬೇಕು ಎಂದು ಗುರು ಒತ್ತಾಯಿಸಿದ್ದಾನೆ ಎಂದು ವಕೀಲ ಪಾಂಚೋಲಿ ಸ್ಪಷ್ಟಪಡಿಸಿದ್ದಾರೆ.
ನಾನು ಗಲ್ಲು ಶಿಕ್ಷೆಗೆ ರೆಡಿಯಾಗಿರುವೆ. ಈ ಬಗ್ಗೆ ನಾನು ಕೇಂದ್ರ ಸರಕಾರಕ್ಕೆ 16 ಸಾರಿ ಪತ್ರ ಬರೆದಿರುವೆ. ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದಿರುವ ಗುರು, ನನ್ನ ಕುಟುಂಬ ಸದಸ್ಯರನ್ನು ಭೇಟಿ ಮಾಡಿಬೇಕೆಂದು ಆಸೆ ಇರುವ ಕಾರಣ ನನ್ನನ್ನು ತಿಹಾರ್ ಜೈಲಿನಿಂದ ಜಮ್ಮು ಜೈಲಿನಲ್ಲಿರಿಸಿ ಎಂದು ಅವನು ಒತ್ತಾಯಿಸಿದ್ದಾನೆ. 2001 ಡಿಸೆಂಬರ್ 13 ರಂದು ಸಂಸತ್ ಮೇಲೆ ದಾಳಿ ನಡೆಸಲಾಗಿತ್ತು. 2002, ಡಿಸೆಂಬರ್ 18ರಂದು ದೆಹಲಿ ಹೈಕೋರ್ಟ್ ಗುರುಗೆ ಗಲ್ಲು ಶಿಕ್ಷೆ ವಿಧಿಸಿತ್ತು. 2006 ಅಕ್ಟೋಬರ್ 20 ರಂದು ಗುರುನನ್ನು ಗಲ್ಲಿಗೇರಿಸಬೇಕಿತ್ತು.