Get Updates
Get notified of breaking news, exclusive insights, and must-see stories!

ನೀರಿಲ್ಲ, ಕರೆಂಟಿಲ್ಲ, ಮತ್ತೇನಿಲ್ಲ

Water crises in Bangalore
ಬೆಂಗಳೂರು, ಮೇ. 7 : ಮುಂಗಾರು ಆರಂಭವಾಗಲು ಇನ್ನು ಒಂದು ತಿಂಗಳು ಇರುವ ಮುನ್ನವೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಿದ್ಯುತ್ ಮತ್ತು ನೀರಿಗಾಗಿ ಹಾಹಾಕಾರ ಶುರುವಾಗಿದೆ. ಬಿಬಿಎಂಪಿ ಚುನಾವಣೆ ನಂತರ ನೀರು ಸಮಸ್ಯೆ ಮತ್ತು ವಿದ್ಯುತ್ ನ ಆಭಾವ ನೀಗಬಹುದು ಎಂದುಕೊಂಡಿದ್ದವರಿಗೆ ಭ್ರಮನಿರಶನವಾಗಿದೆ. ಮೇಯರ್ ಖುರ್ಚಿ ಅಲಂಕರಿಸಿದ ಎಸ್ಕೆ ನಟರಾಜ್ ಅವರ ಭರವಸೆ ಹುಸಿಗೊಂಡಿದೆ. ಇಡೀ ಬೆಂಗಳೂರಿಗರು ಇದೀಗ ಆಕಾಶದತ್ತ ಮುಖಮಾಡಿ ಕುಳಿತಿರುವುದಂತೂ ಸುಳ್ಳಲ್ಲ.

ರಾಜ್ಯದಲ್ಲಿ ವಿದ್ಯುತ್ ಅಭಾವ ಪ್ರತಿವರ್ಷವೂ ಇರುತ್ತದೆ. ಆದರೆ, ಆ ಬಾರಿಯಂತೂ ಜನರ ಜೀವವನ್ನು ಹಿಂಡುವಷ್ಟು ಸಮಸ್ಯೆ ಉಲ್ಬಣಿಸಿದೆ. 198 ವಾರ್ಡ್ ಗಳಿರುವ ಬಿಬಿಎಂಪಿಗೆ ನೀರು ಪೂರೈಕೆ ಮತ್ತು ನಿರಂತರ ವಿದ್ಯುತ್ ನೀಡುವುದು ಪಾಲಿಕೆಗೆ ದೊಡ್ಡ ಸವಾಲಾಗಿದೆ ಪರಿಣಮಿಸಿದೆ. ಇಂಧನ ಸಚಿವರೂ ಆಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅಲ್ಲಿಂದ ವಿದ್ಯುತ್ ಖರೀದಿಸುವೆ, ಇಲ್ಲಿಂದ ವಿದ್ಯುತ್ ತರುವೆ ಎಂಬ ಬೊಗಳೆ ಬಿಡುವುದನ್ನು ಬಿಟ್ಟು ಯಾವುದನ್ನೂ ನೀಟಾಗಿ ಮಾಡಿಲ್ಲ. ಬಿಬಿಎಂಪಿ ಚುನಾವಣೆಯ ನಂತರವಂತೂ ಸರಕಾರದ ಕಿವಿ ಮತ್ತಷ್ಟು ಕಿವುಡಾಗಿವೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 198 ವಾರ್ಡ್ ಗಳಾದ ನಂತರವಂತೂ ಮೂಲಭೂತ ಸೌಕರ್ಯಗಳ ಸಮಸ್ಯೆ ಹೇಳತೀರದಾಗಿದೆ. ರೊಕ್ಕ ಇದ್ದವರು ನೀರನ್ನು ಖರೀದಸುತ್ತಾರೆ. ಆದರೆ, ಬಡ ಬಗ್ಗರ ಪಾಡೇನು. ಈ ಬಗ್ಗೆ ಸರಕಾರ ಕಿಂಚತ್ತೂ ಚಿಂತಿಸುತ್ತಿಲ್ಲ. ಇತ್ತೀಚೆಗೆ ಆಯ್ಕೆಯಾಗಿರುವ ಕೌನ್ಸಿಲರ್ ಗಳು ಕೂಡಾ ಆಶ್ವಾಸನೆ ನೀಡಲು ನಿಸ್ಸಮರಾಗಿದ್ದಾರೆ. ನಾಳೆಗೆ ನೀರಿನ ಸಮಸ್ಯೆ ಬಗೆಹರಿಸುವೆ ಎಂದವರು ನಾಪತ್ತೆಯಾಗಿದ್ದಾರೆ. ಬಿಜೆಪಿಗೆ ಮತ ಹಾಕಿರುವ ಜನತೆ ತೆಲೆ ಚಚ್ಚಿಕೊಳ್ಳುವುದೊಂದೇ ಬಾಕಿ ಉಳಿದಿದೆ. ವಿದ್ಯುತ್ ಸಮಸ್ಯೆಯಂತೂ ಯಾರಿಗೂ ಹೇಳುವುದು ಬೇಡ. ನೀರಿನ ಸಮಸ್ಯೆಯನ್ನು ಹೇಗಾದರೂ ಅರಗಿಸಿಕೊಳ್ಳಬಹುದು. ಆದರೆ ಕರೆಂಟ್ ಗಾಗಿ ಏನು ಮಾಡಬೇಕು. ಕರೆಂಟೇನು 500-1000 ರುಪಾಯಿ ಕೊಟ್ಟರೆ ಮಾರ್ಕೆಟ್ ನಲ್ಲಿ ಸಿಗುವಂತ ವಸ್ತುನಾ ?

ಕೇಂದ್ರ ಸರಕಾರ ರಾಜ್ಯಕ್ಕೆ ನೀಡಬೇಕಿರುವ ವಿದ್ಯುತ್ ನ್ನು ನೀಡುತ್ತಿಲ್ಲ ಎನ್ನುವುದು ಸರಕಾರದ ಪ್ರಶ್ನೆಯಾದರೆ, ವಿದ್ಯುತ್ ಸಮಸ್ಯೆ ನೀಗಿಸಲು ಸರಕಾರ ಕೈಗೊಂಡಿರುವ ಕ್ರಮಗಳಾದರೂ ಏನು ಎನ್ನುವುದು ಪ್ರತಿಪಕ್ಷಗಳ ವಾದ. ಇಂತಹ ರಾಜಕಾರಣಿಗಳ ಮದ್ಯೆ ಬಡಬಾಯಿ ಶ್ರೀಸಾಮಾನ್ಯನ ಸ್ಥಿತಿ ಮಾತ್ರ ದೇವರಿಗೆ ಪ್ರೀತಿಯನ್ನುವಂತಾಗಿದೆ. ಉಳ್ಳವರು ಹೇಗಾದರೂ ಬದುಕಬಹುದು. ಆದರೆ, ಮಧ್ಯಮ, ಕೆಳಮಧ್ಯಮ ಹಾಗೂ ಸ್ಲಂ ನಿವಾಸಿಗಳು ಬದುಕುವುದಾದರೂ ಹೇಗೆ ?

ಬೆಂಗಳೂರಿಗೆ ದಿನವೊಂದಕ್ಕೆ 1,300 ಎಂಎಲ್ ಡಿ(million litres per day) ನೀರಿನ ಅಗತ್ಯವಿದೆ. ಆದರೆ, ಸದ್ಯ ನಗರಕ್ಕೆ ಸರಬರಾಜು ಆಗುತ್ತಿರುವ ನೀರಿನ ಪ್ರಮಾಣ ಕೇವಲ 900 ಎಂಎಲ್ ಡಿ ಹೀಗಾಗಿ ನೀರಿನ ಸಮಸ್ಯೆ ಉಂಟಾಗಿದೆ ಎನ್ನುವುದು ಬೆಂಗಳೂರು ನೀರು ಸರಬರಾಜು ಮಂಡಳಿ ಸಮರ್ಥನೆಯಾಗಿದೆ. ಕಾವೇರಿ ನದಿಯಿಂದ 885 ಎಂಎಲ್ ಡಿ ಸಿಗುತ್ತಿದ್ದರೆ, ತಿಪ್ಪಗೊಂಡನಹಳ್ಳಿ ಕೆರೆಯಿಂದ 60 ಎಂಎಲ್ ಡಿ ನೀರು ದೊರೆಯುತ್ತಿದೆ. ಉಳಿದಂತೆ ಬೆಂಗಳೂರಿನಾದ್ಯಂತ ಸುಮಾರು 7,000 ಬೋರ್ ವೆಲ್ ಗಳನ್ನು ತೋಡಲಾಗಿದೆ. ಇಷ್ಟಾದರೂ ನೀರಿನ ಸಮಸ್ಯೆ ಬಗೆಹರಿಸುಕೊಳ್ಳಲು ಸಾಧ್ಯವಾಗಿಲ್ಲ ಎಂದು ಮಂಡಳಿ ಅಧಿಕಾರಿಗಳ ಅಳಲಾಗಿದೆ.

ಮಳೆಯ ಕೊರತೆಯಿಂದ ಭೂಮಿಯಲ್ಲಿನ ನೀರಿನ ಪ್ರಮಾಣ ಕುಸಿಯತೊಡಗಿದೆ. ಮತ್ತಷ್ಟು ಬೋರ್ ವೆಲ್ ಗಳನ್ನು ಹಾಕಿಸಿದರೂ ನೀರು ಬೀಳುವ ಸಾಧ್ಯತೆ ಕಡಿಮೆ. ಮುಂಗಾರು ಮಳೆಗೆ ಇನ್ನೂ ಒಂದು ತಿಂಗಳು ಕಾಯಬೇಕಾಗಿರುವುದರಿಂದ ಮತ್ತಷ್ಟು ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿಗೆ 140 ಮಿಲಿಯನ್ ಯೂನಿಟ್ ವಿದ್ಯುತ್ ಬೇಕು. ಆದರೆ, ಸದ್ಯಕ್ಕೆ ಸರಬರಾಜು ಆಗುತ್ತಿರುವ ವಿದ್ಯುತ್ ಕೇವಲ 115 ಮಿಲಿಯನ್ ಯೂನಿಟ್ ವಿದ್ಯುತ್ ಹೀಗಾಗಿ ಲೋಡ್ ಶೆಡ್ಡಿಂಗ್, ಅನಿಯಮಿತ ವಿದ್ಯುತ್ ಕಡಿತ ಮಾಡಬೇಕಾಗಿದೆ. ಮುಂಗಾರು ಬೇಗ ಶುರುವಾದರೆ ಮಾತ್ರ ಈ ಎಲ್ಲ ಸಮಸ್ಯೆಗಳು ಪರಿಹಾರ ಸಿಗಬಹುದು ಎನ್ನುವುದು ಕೆಪಿಟಿಸಿಎಲ್ ಅಭಿಪ್ರಾಯ. ಒಂದೇ ಮಾತಿನಲ್ಲಿ ಹೇಳುವುದಾದರೆ ಸರಕಾರದ ಕೈಚೆಲ್ಲಿ ಕುಳಿತಿದೆ. ಮಳೆಗಾಗಿ ಜನಸಾಮಾನ್ಯರು ದೇವರಲ್ಲಿ ಮೊರೆ ಹೋಗುವುದು ಉಚಿತ. ಯಡಿಯೂರಪ್ಪನನ್ನ ನಂಬಿದ್ರೆ ಕತೇ ಮುಗಿದಂಗೆ...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+