ತಡಿಯಂಡಮೋಲ್ ನಲ್ಲಿ ಹುಲಿ, ಚಾರಣಿಗರಿಗೆ ಎಚ್ಚರಿಕೆ
ವಾರಾಂತ್ಯ ಬಂದರೆ ಈ ಪ್ರದೇಶದಲ್ಲಿ ಪ್ರವಾಸಿಗರು ಟ್ರೆಕ್ಕಿಂಗ್ ಕೈಗೊಳ್ಳುವುದು ಅತಿ ಸಾಮಾನ್ಯ. ಆದರೆ, ತಡಿಯಂಡಮೋಲ್ ಗುಡ್ಡದ ಮೇಲೆ ಚಾರಣ ಮಾಡಿ ರಾತ್ರಿ ತಂಗುವುದು ಅತಿ ಅಪಾಯಕಾರಿ ಎಂದು ಅರಣ್ಯಾಧಿಕಾರಿ ಶಶಿ ಅಭಿಪ್ರಾಯಪಟ್ಟಿದ್ದಾರೆ.
ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಪಾರ್ವತಿ ಮತ್ತು ಅರಣ್ಯ ರಕ್ಷಕ ತಮ್ಮಯ್ಯ ಎಂಬುವವರು ತಡಿಯಂಡಮೋಲ್ ಬಳಿಯ ತುಂಬೆಕೊಚ್ಚೆಯಲ್ಲಿ ಎರಡು ಹುಲಿ ನೋಡಿದ್ದುದಾಗಿ ಹೇಳಿರುವುದಾಗಿ ಶಶಿ ಹೇಳಿದ್ದಾರೆ.
ಈ ಪ್ರದೇಶದ ಅರಣ್ಯದಲ್ಲಿ ಹೆಚ್ಚುತ್ತಿರುವ ಚಾರಣಿಗರ ಪ್ರವೇಶದಿಂದಾಗಿ ಹುಲಿಗಳು ಅರಣ್ಯ ತೊರೆದು ಆಹಾರಕ್ಕಾಗಿ ಸುತ್ತಲಿನ ಗ್ರಾಮಗಳನ್ನು ಪ್ರವೇಶಿಸುತ್ತಿವೆ. ಈ ಹುಲಿಗಳ ಹಸಿವಿಗೆ ಜಾನುವಾರುಗಳು ಬಲಿಯಾಗುತ್ತಿವೆ ಎಂದು ಗ್ರಾಮಸ್ಥರು ದೂರಿದ್ದಾರೆ. ಇವು ಮನುಷ್ಯರ ಮೇಲೂ ದಾಳಿ ಮಾಡಬಹುದು ಎಂಬುದು ಅರಣ್ಯಾಧಿಕಾರಿಯ ಅನಿಸಿಕೆ.
ಆದರೆ, ತಡಿಯಂಡಮೋಲ್ ಸುತ್ತಲಿನ ಪ್ರದೇಶದಲ್ಲಿ ರೆಸಾರ್ಟ್, ಹೋಂಸ್ಟೇಗಳನ್ನು ನಡೆಸುತ್ತಿರುವ ವ್ಯಾಪಾರಿಗಳ ಅಭಿಪ್ರಾಯವೇ ವಿಭಿನ್ನ. ಹುಲಿಗಳು ಈ ಪ್ರದೇಶದಲ್ಲಿ ಮೊದಲಿನಿಂದಲೂ ಇವೆ. ಅವುಗಳಿಗೆ ಅಪಾಯ ಮಾಡದಿದ್ದರೆ ಅವು ಕೂಡ ಯಾರ ಮೇಲೂ ದಾಳಿ ಮಾಡುವುದಿಲ್ಲ ಎಂದು ಹೇಳುತ್ತಾರೆ.