ಹುತಾತ್ಮ ಸೈನಿಕರ ನೆನಪಿಗೆ ಬೆಂಗಳೂರಿನಲ್ಲಿ ಉದ್ಯಾನವನ
ರಾಷ್ಟ್ರಕ್ಕಾಗಿ ಪ್ರಾಣತೆತ್ತ ಪ್ರತಿಯೊಬ್ಬ ಸೈನಿಕನನ್ನು ನೆನೆಯಬೇಕಾಗಿರುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಅನೇಕ ದೇಶಗಳು ರಾಷ್ಟ್ರಕ್ಕಾಗಿ ದೇಹತ್ಯಾಗ ಮಾಡಿದ ಹುತಾತ್ಮರನ್ನು ನೆನೆಯುತ್ತವೆ. ಭಾರತದಲ್ಲಿ ಪ್ರಥಮವಾಗಿ ಸೈನಿಕರಿಗಾಗಿ ಮೆಮೋರಿಯಲ್ ಪಾರ್ಕ್ ನಿರ್ಮಿಸುವ ಮಹತ್ ಕಾರ್ಯಕ್ಕೆ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಕೈಹಾಕಿದ್ದಾರೆ. ಇದಕ್ಕಾಗಿ ಕರ್ನಾಟಕ ಸರಕಾರ ಕೂಡ ಕೈಜೋಡಿಸಿದೆ.
ರಾಜಭವನ ರಸ್ತೆಯಲ್ಲಿರುವ ಇಂದಿರಾ ಗಾಂಧಿ ಫೌಂಡೇಶನ್ ಪಕ್ಕದ ಖಾಲಿ ನಿವೇಶನದಲ್ಲಿ ಹುತಾತ್ಮ ಸೈನಿಕರ ಸ್ಮಾರಕ ನಿರ್ಮಾಣವಾಗಲಿದೆ. ಮಡಿದ ಸೈನಿಕರ ಸಾಹಸ, ತ್ಯಾಗ, ದೇಶಭಕ್ತಿಯನ್ನು ಇಂದಿನ ಪೀಳಿಗೆಯ ಜನತೆ ಹೃದಯದಲ್ಲಿ ತುಂಬಿಕೊಳ್ಳಬೇಕೆಂಬುದು ಈ ಕಾರ್ಯದ ಮೂಲ ಉದ್ದೇಶ. ಹೆಚ್ಚು ಜನ ಸ್ಮಾರಕಕ್ಕೆ ಭೇಟಿ ನೀಡಲಿ ಎಂಬ ಉದ್ದೇಶದಿಂದ ನಗರದ ಮಧ್ಯಭಾಗದಲ್ಲಿ ನಿರ್ಮಾಣವಾಗುತ್ತಿದೆ. ಉದ್ಯಾನವನದ ಮಧ್ಯದಲ್ಲಿ ನಮ್ಮ ಸೈನಿಕರ ಧೈರ್ಯ, ಸಾಹಸ, ಬದ್ಧತೆಯನ್ನು ಬಿಂಬಿಸುವ ಏಕಶಿಲೆಯಲ್ಲಿ ಕೆತ್ತಲಾದ 'ವೀರಗಲ್ಲು' ಆಕರ್ಷಣೆಯ ಕೇಂದ್ರಬಿಂದುವಾಗಲಿದೆ.
ಹಸುರಿನ ಮಂತ್ರ : ಸ್ಮಾರಕ ನಿರ್ಮಾಣದ ಹೆಸರಿನಲ್ಲಿ ಗಿಡಗಳನ್ನು ಕತ್ತರಿಸಲಾಗುತ್ತಿದೆ ಎಂದು ಪರಿಸರವಾದಿಗಳು ಹುಯಿಲನ್ನು ಎಬ್ಬಿಸಿದ್ದರು. ರಾಜೀವ್ ಚಂದ್ರಶೇಖರ್ ಅವರು ಇದಕ್ಕೆ ಸ್ಪಷ್ಟೀಕರಣ ನೀಡಿದ್ದು, ಕೇವಲ ನಾಲ್ಕು ನೀಲಗಿರಿ ಮರಗಳನ್ನು ಮಾತ್ರ ಸ್ಮಾರಕ ನಿರ್ಮಾಣ ಸ್ಥಳದಲ್ಲಿ ಕತ್ತರಿಸಲಾಗುತ್ತಿದ್ದು, ಬದಲಿಗೆ 30ಕ್ಕೂ ಹೆಚ್ಚಿನ ಮರಗಳನ್ನು ನೆಡಲಾಗುತ್ತಿದೆ ಎಂದಿದ್ದಾರೆ.
ರಸ್ತೆ ಅಗಲೀಕರಣ, ಬಡಾವಣೆಗಳ ನಿರ್ಮಾಣ, ಮೇಲ್ಸೇತುವೆ ನಿರ್ಮಾಣ ಮುಂತಾದ ಅಭಿವೃದ್ಧಿ ಕೆಲಸಗಳ ನೆಪದಿಂದ ನಗರದಲ್ಲಿರುವ ಅತಿ ಹಳೆಯ ಬೃಹತ್ ಮರಗಳು ಧರೆಗೆ ಉರುಳುತ್ತಿವೆ. ಉಸಿರುಗಟ್ಟಿಸುವ ವಾಹನಗಳ ತ್ಯಾಜ್ಯದಿಂದ ಜನರಿಗೆ ಸ್ವಚ್ಛ ಹವೆ ಲಭಿಸುತ್ತಿಲ್ಲ. ಇಂಥ ಸಂದರ್ಭದಲ್ಲಿ ಹಚ್ಚಹಸುರಿನಿಂದ ಕಂಗೊಳಿಸುವ ಮೆಮೋರಿಯಲ್ ಉದ್ಯಾನವನವನ್ನು ನಿರ್ಮಿಸುವ ಇಂಗಿತವನ್ನು ರಾಜೀವ್ ಚಂದ್ರಶೇಖರ್ ವ್ಯಕ್ತಪಡಿಸಿದ್ದಾರೆ.