ನನ್ನ ಸೈಕಲ್ ಗೆ ಬ್ರೇಕ್ ಇರಲಿಲ್ಲ : ಯಡಿಯೂರಪ್ಪ
ಸೈಕಲ್ ಸವಾರಿಯಲ್ಲಿ ನಾನು ಪ್ರವೀಣ. ಆದರೆ ನಾನು ಹೊಡೆಯುತ್ತಿದ್ದ ಸೈಕಲ್ ಗೆ ಬ್ರೇಕೂ ಇರಲಿಲ್ಲ ಸ್ಟಾಂಡು ಇರಲಿಲ್ಲ. ಹಾಗಾಗಿ ನಾನು ಆಯತಪ್ಪಿದೆ. ಸೈಕಲ್ ಹೊಡೆದು ತುಂಬ ದಿನ ಆಯ್ತು ನೋಡಿ, ಅಭ್ಯಾಸ ತಪ್ಪಿ ಹೋಗಿತ್ತು. ಈಶ್ವರಪ್ಪ ಅವರ ಸೈಕಲ್ ಸಹ ಸರಿಯಿರಲಿಲ್ಲ. ಅವರು ಹೇಗೋ ಕಷ್ಟಪಟ್ಟು ನಿಭಾಯಿಸಿದರು ಎಂದು ಹಾಸ್ಯ ಚಟಾಕಿಯನ್ನು ಸಿಡಿಸಿದರು.
ಮಲ್ಲೇಶ್ವರಂ ಮತ್ತು ರಾಜಾಜಿನಗರದ ಶಾಪ್ ಗಳಿಂದ ಈ ಸೈಕಲ್ ಗಳನ್ನು ಬಾಡಿಗೆಗೆ ತರಲಾಗಿತ್ತು ಎಂದು ಬಿಜೆಪಿ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ. ಪ್ರತಿಭಟನೆಗೆ ಕೆಲವು ಬಿಜೆಪಿ ಕಾರ್ಯಕರ್ತರು ಪರಿಚಿತರ ಬಳಿ ಸೈಕಲ್ ತೆಗೆದುಕೊಂಡು ಬಂದಿದ್ದರು. ಯಡಿಯೂರಪ್ಪ ಅವರಿಗೆ ಕೊಡಲಾದ ಸೈಕಲನ್ನು ಸ್ಥಳೀಯ ಶಾಪ್ ನಿಂದ ಬಾಡಿಗೆಗೆ ತರಲಾಗಿತ್ತು ಎನ್ನಲಾಗಿದೆ.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಯಡಿಯೂರಪ್ಪ ಅವರು ಸೈಕಲನ್ನು ಭದ್ರತಾ ಸಿಬ್ಬಂದಿ ಹಿಂದಿನಿಂದ ತಳ್ಳುತ್ತಿದ್ದರು. ಆದರೆ ಪ್ರವಾಸೋದ್ಯಮ ಸಚಿವ ಜನಾರ್ಧನ ರೆಡ್ಡಿ ಸೇರಿದಂತೆ ಹಲವರು ಸೈಕಲನ್ನು ಸ್ವತಃ ಅವರೆ ಎರಡು ಕಿ.ಮೀ ಹೊಡೆದು ಸುಸ್ತು ಹೊಡೆದು ಏದುಸಿರು ಬಿಡುತಿದ್ದರು.