ಮಸಿ ಬಳಿದ ಶ್ರೀನಿವಾಸ್ ಗೆ ಕ್ಷಮೆ, ಮುತಾಲಿಕ್
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶ್ರೀನಿವಾಸ್ ನನ್ನ ಮುಖಕ್ಕೆ ಮಸಿ ಬಳಿದಿರುವುದು ಗೊತ್ತಿರುವ ಸಂಗತಿ. ಆದರೆ, ಈ ವ್ಯಕ್ತ ಸ್ವಇಚ್ಚೆಯಿಂದ ಮಾಡಿರುವ ಕೆಲಸ ಇದಲ್ಲ. ಈ ಕಾರಣಕ್ಕಾಗಿ ಆತನಿಗೆ ಕ್ಷಮಾದಾನ ನೀಡಿರುವುದಾಗಿ ಅವರು ಹೇಳಿದರು. ಮಸಿ ಬಳಿಯಲು ಕಾಂಗ್ರೆಸ್ ಪಕ್ಷ ಮುಖ್ಯ ಕಾರಣ. ಹಿಂದೂ ಧರ್ಮ ರಕ್ಷಣೆಗಾಗಿ ಕೆಲಸ ಮಾಡುತ್ತಿರುವ ಸಂಘಟನೆ ಮೇಲೆ ಕಾಂಗ್ರೆಸ್ ಪಕ್ಷ ದಾಳಿ ನಡೆಸಿದ ಹಿಂದೂಗಳು ಆ ಪಕ್ಷಕ್ಕೆ ತಕ್ಕ ಶಿಕ್ಷೆ ನೀಡುತ್ತಾರೆ ಎಂದು ಮುತಾಲಿಕ್ ಹೇಳಿದರು.
ಪ್ರೇಮಿಗಳ ದಿನದ ಮುನ್ನಾ ದಿನ ಸುವರ್ಣ ನ್ಯೂಸ್ ಚಾನೆಲ್ ಏರ್ಪಡಿಸಿದ್ದ ಪ್ರೇಮಯುದ್ಧ ನೇರ ಪ್ರಸಾರಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಮೋದ್ ಮುತಾಲಿಕ್ ಅವರ ಮೇಲೆ ಶ್ರಿನಿವಾಸ್ ಸೇರಿ ಕೆಲವರು ಏಕಾಏಕಿ ದಾಳಿ ನಡೆಸಿ ಮುಖಕ್ಕೆ ಮಸಿ ಬಳಿದಿದ್ದರು. ಇದು ರಾಜ್ಯಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಘಟನೆ ಖಂಡಿಸಿ ಶ್ರೀರಾಮಸೇನೆ ತೀವ್ರ ಪ್ರತಿಭಟನೆ ನಡೆಸಿತ್ತು. ಯುವಕಾಂಗ್ರೆಸ್ ಕಾರ್ಯಕರ್ತರು ಈ ಕೃತ್ಯ ಎಸಗಿದ್ದರು ಎಂದು ಪೊಲೀಸರು ತಿಳಿಸಿದ್ದರು. ಘಟನೆಗೆ ಪ್ರತಿಕ್ರಿಯೆ ನೀಡಿದ್ದ ಮುತಾಲಿಕ್, ಮಸಿ ಬಳಿದವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು.