ಕುಲಾಂತರಿ ಬದನೆ ಆತ್ಮಹತ್ಯೆಗೆ ಮಾರ್ಗ: ಪಿ ಸಾಯಿನಾಥ್
ಬೆಂಗಳೂರಿನಲ್ಲಿ ಮೇಫ್ಲವರ್ ಮೀಡಿಯಾ ಹೌಸ್ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪತ್ರಕರ್ತರು ಹಾಗೂ ಮಾಧ್ಯಮ ಉಪನ್ಯಾಸಕರನ್ನು ಉದ್ಧೇಶಿಸಿ ಮಾತನಾಡಿದ ಅವರು ಬಿ ಟಿ ತಂತ್ರಜ್ಞಾನವನ್ನು ಅಳವಡಿಸಲು ಸರ್ಕಾರ ತೋರಿಸುತ್ತಿರುವ ಉತ್ಸಾಹ ಭಾರತದಲ್ಲಿ ಇರುವ ಎಲ್ಲಾ ಬದನೆ ತಳಿಗಳಿಗೆ ಸಂಚಕಾರ ಒಡ್ಡಲಿದ್ದು ದೇಶದ ಆಹಾರ ಭದ್ರತೆಯಲ್ಲಿ ಏರುಪೇರು ಉಂಟು ಮಾಡಲಿದೆ ಎಂದರು.
ಕುಲಾಂತರಿ ಬದನೆಗೆ ಅವಕಾಶ ಮಾಡಿಕೊಟ್ಟಲ್ಲಿ ರೈತರು ತಮಗೆ ಬೇಕಾದ ಬೆಳೆಯನ್ನು ಬೆಳೆಯುವ ಸ್ವಾತಂತ್ರ್ಯವನ್ನೇ ಕಿತ್ತುಕೊಂಡಂತೆ ಆಗುತ್ತದೆ. ಈಗಾಗಲೇ ಬಿ ಟಿ ಹತ್ತಿ ಬೆಳೆ ಈ ತಂತ್ರಜ್ಞಾನ ನಮ್ಮ ದೇಶಕ್ಕೆ ಆತ್ಮಹತ್ಯೆಯ ಮಾರ್ಗ ಎಂಬುದನ್ನು ತೋರಿಸಿಕೊಟ್ಟಿದೆ. ಒಂದೆಡೆ ಹತ್ತಿಯ ತಳಿಗಳನ್ನು ನಾಶ ಮಾಡಿದ್ದೂ ಅಲ್ಲದೆ ಉಚಿತವಾಗಿ ಸಿಗುತ್ತಿದ್ದ ಹತ್ತಿ ಬೀಜಕ್ಕೆ 1600 ರೂ ಕೊಟ್ಟು ಕೊಳ್ಳುವ ಸ್ಥಿತಿಗೆ ತಂದಿಟ್ಟಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.
ಕುಲಾಂತರಿ ತಂತ್ರಜ್ಞಾನ ರೋಗ ಬಾಧೆಗಳಿಂದ ಬೆಳೆಯನ್ನು ರಕ್ಷಿಸುತ್ತದೆ ಎಂಬುದು ಶುದ್ಧ ಸುಳ್ಳು. ಅದು ಒಂದು ರೋಗವನ್ನು ಹತ್ತಿಕ್ಕಬಹುದು ಆದರೆ ಅದೇ ಸಮಯದಲ್ಲಿ ಇನ್ನೂ ಹಲವಾರು ರೋಗ ತಲೆ ಎತ್ತುವಂತೆ ಮಾಡುತ್ತದೆ. ಇದು ಈಗಾಗಲೇ ಬಿ ಟಿ ಹತ್ತಿಯ ಉದಾಹರಣೆಯಲ್ಲಿ ಸಾಬೀತಾಗಿದೆ ಎಂದರು.
ಬಿ ಟಿ ತಂತ್ರಜ್ಞಾನ ಪರ ಇರುವವರು ದೇಶದ ದಿಕ್ಕು ತಪ್ಪಿಸುವ ವರದಿಗಳನ್ನು ಮುಂದಿಡುತ್ತಿದ್ದಾರೆ. ಕುಲಾಂತರಿ ಪರ ಇರುವ ವರದಿಗಳು ಬರುವಂತೆ ದೊಡ್ಡ ಕಂಪನಿಗಳು ಆಸಕ್ತಿ ವಹಿಸಿವೆ. ಕುಲಾಂತರಿ ಬದನೆ ಸಾಕಷ್ಟು ನೀರನ್ನು ಬೇಡಲಿದ್ದು ನಮ್ಮ ಭಾರತಕ್ಕೆ ಒಗ್ಗುವ ಬೆಳೆಯೇ ಅಲ್ಲ ಎಂದರು. ದೇಶದಲ್ಲಿ ಬದನೆ ಫಸಲು ಸಮೃದ್ಧವಾಗಿದ್ದು ಕುಲಾಂತರಿ ಬದನೆ ತರುವ ಅಗತ್ಯವೇನಿದೆ ಎಂದು ಅವರು ಪ್ರಶ್ನಿಸಿದರು.
ವಿಜಯ ಕರ್ನಾಟಕದ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಕರ್ನಾಟಕ ಫೋಟೋ ನ್ಯೂಸ್ ಮುಖ್ಯಸ್ಥ ಸಗ್ಗೆರೆ ರಾಮಸ್ವಾಮಿ, ಮೇಫ್ಲವರ್ ಮೀಡಿಯಾ ಹೌಸ್ ನ ಮುಖ್ಯಸ್ಥ ಜಿ ಎನ್ ಮೋಹನ್, ಅಭಿವೃದ್ಧಿ ಪತ್ರಕರ್ತೆ ಸಿ ಜಿ ಮಂಜುಳಾ, ಪತ್ರಿಕೋದ್ಯಮ ವಿಭಾಗದ ಪ್ರೊ. ಎನ್ ಎಸ್ ಅಶೋಕ್ ಕುಮಾರ್, ಬಿ ಕೆ ರವಿ ಮುಂತಾದವರು ಸಂವಾದ ನಡೆಸಿದರು.