ರೆಡ್ಡಿ ಯಾವ ಸೀಮೆ ಮಿನಿಸ್ಟರ್ರಿ, ಸಿದ್ದು ಕಿಡಿಕಿಡಿ

ಪಟ್ಟಣದಲ್ಲಿ ಕಾಂಗ್ರೆಸ್ ಪ್ರತಿಭಟನಾ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸುವೆ ಎಂಬ ಜನಾರ್ದನರೆಡ್ಡಿ ಅವರ ಹೇಳಿಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇವನು ಯಾವ ಊರಿನ ದೊಣ್ಣೆ ನಾಯಕ. ನನ್ನನ್ನು ರಾಜಕೀಯವಾಗಿ ಮುಗಿಸುವೆ ಎಂದು ಹೇಳಲು ಇವನಿಗೆ ಎಷ್ಟು ಧೈರ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನನ್ನ ರಾಜಕೀಯ ಜೀವನದಲ್ಲಿ ಇಂತಹ ಅನೇಕ ಜನರನ್ನು ನೋಡಿರುವೆ. ಎಂತೆಂಥವರನ್ನೂ ಎದುರು ಹಾಕಿಕೊಂಡು ದಕ್ಕಿಸಿಕೊಂಡಿರುವ ಗಣಿ ಕಳ್ಳರಿಗೆ ಹೆದರುತ್ತೇನೆಯೇ ? ನಾನು ಹೆದರುವುದು ರಾಜ್ಯದ ಆರು ಕೋಟಿ ಜನರಿಗೆ ಮಾತ್ರ. ಅವರು ಮನಸ್ಸು ಮಾಡಿದರೆ ಮಾತ್ರ, ನನ್ನನ್ನು ರಾಜಕೀಯವಾಗಿ ಮುಗಿಸಲು ಸಾಧ್ಯ. ರೆಡ್ಡಿಗಳಿಗೆ ಹೆರರಲು ನಾನೇನು ಯಡಿಯೂರಪ್ಪನೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಪ್ರಜಾಪ್ರಭುತ್ವದ ಬಗ್ಗೆ ಪರಿಜ್ಞಾನವಿಲ್ಲದ ಜನಾರ್ಧನರೆಡ್ಡಿ ಅಂತವರು ಹೇಳುವ ಹೇಳಿಕೆಗೆ ನಾನು ಹೆಚ್ಚು ಉತ್ತರಿಸುವ ಅಗತ್ಯವಿಲ್ಲ. ಮೂರ್ಖರು ಮಾತನಾಡಿದರೆ ಈ ಸಿದ್ದು ತಲೆಕೆಡಿಸಿಕೊಳ್ಳುವುದಿಲ್ಲ. ಲೂಟಿ ಮಾಡಲೆಂದೇ ರಾಜಕೀಯಕ್ಕೆ ಬಂದವರು ಇವರುಗಳು, ರಾಜಕೀಯದಲ್ಲಿ ಸಭ್ಯತೆ ಎನ್ನುವುದು ಇವರಿಗೆ ಏನಾದರೂ ಗೊತ್ತಾ? ನಮ್ಮ ರಾಜಕೀಯ ಬೆಳವಣಿಗೆಗಳಿಗೆ ಜನರೇ ಮಾಲೀಕರು ಎನ್ನುವ ಕನಿಷ್ಟ ಸೌಜನ್ಯ ಇವರಿಗಿಲ್ಲ. ಮುಂದಿನ ಜನ್ಮವಿದ್ದರೆ ಇವರನ್ನು ಯಾವ ಜಾತಿಯಲ್ಲಿ ಹುಟ್ಟಬೇಕೆಂದು ಕೇಳಿಕೊಂಡು ಹುಟ್ಟುತ್ತೇನೆ ಎಂದು ಸಿದ್ದು ರೆಡ್ಡಿಯನ್ನು ತರಾಟೆಗೆ ತೆಗೆದುಕೊಂಡರು.
2003ರಲ್ಲಿ ಲೂನ ಓಡಿಸಿಕೊಂಡಿದ್ದ ಈ ರೆಡ್ಡಿ ಆ ಮೇಲೆ ಚಾಲ್ತಿಗೆ ಬಂದವರು. ಆಂಧ್ರದಲ್ಲಿ ಗಣಿಗಾರಿಕೆಗೆ ಅನುಮತಿ ಪಡೆದುಕೊಂಡು ನಮ್ಮ ರಾಜ್ಯದ ಅರಣ್ಯ ಸಂಪತ್ತುಗಳನ್ನು ಲೂಟಿ ಮಾಡುತ್ತಿದ್ದಾರೆ. ಇಂಥ ಲೂಟಿಕೋರರ ರಕ್ಷಣೆಗೆ ನಮ್ಮ ಮುಖ್ಯಮಂತ್ರಿಗಳು ಅಧಿಕಾರಕ್ಕೆ ಹೆದರಿಕೊಂಡು ನಿಂತಿದ್ದಾರೆಂದು ಸಿದ್ದು ಕಿಡಿಕಾರಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications