ಸಂಧಾನಕ್ಕೆ ಜಪ್ಪಯ್ಯ ಎನ್ನದ ಜನಾರೆಡ್ಡಿ

ಈ ನಡುವೆ ಆದ ಇನ್ನೊಂದು ಬೆಳವಣಿಗೆಯಲ್ಲಿ ಅನೇಕ ಭಿನ್ನಮತೀಯರ ಕೆಂಗಣ್ಣಿಗೆ ಗುರಿಯಾಗಿರುವ ಶೋಭಾ ಕರಂದ್ಲಾಜೆ ಅವರನ್ನು ಸಂಪುಟದಿಂದ ಬಿಡುವಂತೆ ಸುಷ್ಮಾ ಸ್ವರಾಜ್ ಸೂಚಿಸಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಆದರೆ, ಶೋಭಾ ಕರಂದ್ಲಾಜೆ ಅವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಪಟ್ಟುಹಿಡಿದಿದ್ದರು.
ಪಕ್ಷದ ವರಿಷ್ಠರೊಂದಿಗೆ ಮಾತನಾಡಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜನಾರ್ದನರೆಡ್ಡಿ, ರಾಜ್ಯದ ಹಿತದೃಷ್ಟಿಯಿಂದ ನಾಯಕತ್ವ ಬದಲಾವಣೆ ಅನಿವಾರ್ಯ. ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು. ನಾಯಕತ್ವ ಬದಲಾವಣೆ ಮಾಡಿದರೆ ರಾಜ್ಯದ ಅಭಿವೃದ್ಧಿ ಸಾಧ್ಯ. ಕರ್ನಾಟಕದಲ್ಲಿ ಬಿಜೆಪಿ ಐದು ವರ್ಷ ಆಡಳಿತ ನಡೆಸುವುದಲ್ಲ, 50 ವರ್ಷವೂ ಬಿಜೆಪಿ ಅಧಿಕಾರ ನಡೆಸಬೇಕು ಎನ್ನುವುದು ನಮ್ಮ ಬೇಡಿಕೆ. ಈ ಕಾರಣಕ್ಕೆ ನಾಯಕತ್ವ ಬದಲಾವಣೆ ಮಾಡಬೇಕು ಎಂಬ ಸಂಗತಿಯನ್ನು ಹೈಕಮಾಂಡ್ ಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ರೆಡ್ಡಿ ವಿವರಿಸಿದರು.
ನಂತರ ಸುಷ್ಮಾ ಸ್ವರಾಜ್ ಅವರನ್ನು ಕೂಡಾ ಜನಾರ್ದನರೆಡ್ಡಿ ಭೇಟಿ ಮಾತುಕತೆ ನಡೆಸಿ ಅವರಿಗೂ ರಾಜ್ಯದಲ್ಲಿ ಎಲ್ಲ ವಿವರಗಳನ್ನು ತಿಳಿಸಿದ್ದಾರೆ. ಸುಷ್ಮಾ ಸ್ವರಾಜ್ ಅವರು ನನಗೆ ತಾಯಿ ಸಮಾನ. ಅವರಿಗೂ ಎಲ್ಲ ವಿದ್ಯಮಾನಗಳನ್ನು ತಿಳಿಸಿರುವೆ ಎಂದು ರೆಡ್ಡಿ ಹೇಳಿದರು. ನಂತರ ಬಿಜೆಪಿಯ ಸರ್ವೋಚ್ಚ ನಾಯಕ ಎಲ್ ಕೆ ಅಡ್ವಾಣಿಯೊಂದಿಗೆ ರೆಡ್ಡಿ ಮಾತುಕತೆ ನಡೆಸುತ್ತಿದ್ದಾರೆ.
ಸಚಿವ ಜನಾರ್ದನರೆಡ್ಡಿ ಅವರೊಂದಿಗೆ ಮಾತುಕತೆ ನಡೆಸಲಾಗಿದೆ. ಕರ್ನಾಟಕದಲ್ಲಿ ಸರಕಾರದಲ್ಲಿ ಉಂಟಾಗಿರುವ ಎಲ್ಲ ಸಮಸ್ಯೆಗಳನ್ನು ನಿವಾರಿಸಲು ಶೀಘ್ರದಲ್ಲೇ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಹಿರಿಯ ನಾಯಕ ಅರುಣ್ ಜೇಟ್ಲಿ ಹೇಳಿದರು. ಜೊತೆಗೆ ಕರ್ನಾಟಕದ ಬಂಡಾಯ ಬೆಂಕಿಯಲ್ಲಿ ಅನಂತಕುಮಾರ್ ಅವರ ಕೈವಾಡವಿದೆ ಎನ್ನುವ ಸಂಗತಿಯನ್ನು ಸ್ಪಷ್ಟವಾಗಿ ತಳ್ಳಹಾಕಿದ ಜೇಟ್ಲಿ, ಅನಂತಕುಮಾರ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಮತ್ತು ರಾಷ್ಟ್ರೀಯ ನಾಯಕರು. ಮಾಧ್ಯಮದಲ್ಲಿ ಪ್ರಕಟವಾಗಿರುವ ಸಂಗತಿಯಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿದರು.
(ಏಜನ್ಸೀಸ್)












Click it and Unblock the Notifications