ಮಡಗಾಂವ್ ಸ್ಫೋಟ : ಹಿಂದೂ ಸಂಘಟನೆ ಕೈವಾಡ
ಪಣಜಿ, ಅ. 21 : ಮಡಗಾಂವ್ ಸ್ಫೋಟದಲ್ಲಿ ಬಲಪಂಥೀಯ ಹಿಂದೂ ಸಂಘಟನೆಯಾದ ಸನಾತನ ಸಂಸ್ಥೆಯ ಕೈವಾಡವಿರುವ ಬಗ್ಗೆ ತಿಳಿದು ಬಂದಿದ್ದು, ಸಂಸ್ಥೆ ವಿದೇಶ ಸಂಪರ್ಕ ಹೊಂದಿರುವ ಬಗ್ಗೆ ಗೋವಾದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸ್ಫೋಟದಲ್ಲಿ ಇಬ್ಬರು ಸನಾತನ ಸಂಸ್ಥೆಯ ಸದಸ್ಯರು ಬಲಿಯಾಗಿದ್ದರು.
ಕೆಲ ವಿದೇಶಿಯರು ರಾಮನಾಥಿಯಲ್ಲಿನ ಆಶ್ರಮವನ್ನು ಸದಾ ಸಂದರ್ಶಿಸುತ್ತಿದ್ದರು. ಅವರು ಪೊಲೀಸರಿಗೆ ತಮ್ಮ ಪರಿಚಯ ಪತ್ರಗಳನ್ನು ಕೂಡ ಸಲ್ಲಿಸುತ್ತಿರಲಿಲ್ಲ ಎಂದು ರಾಜ್ಯ ಗೃಹ ಸಚಿವ ರವಿ ನಾಯ್ಕ ಹೇಳಿದ್ದಾರೆ. ಅನೇಕ ವಿದೇಶಿಯರು ಆ ಸ್ಥಳವನ್ನು ಸಂದರ್ಶಿಸುತ್ತಿದ್ದಾರೆಂದು ನಾವು ಪತ್ತೆ ಮಾಡಿದ್ದೇವೆ. ಅವರು ಅಲ್ಲಿಗೆ ಯಾಕೆ ಬರುತ್ತಿದ್ದರೆಂದು ನಾವು ತಿಳಿಯಬೇಕಿದೆ. ಪೊಲೀಸರು ಆ ವ್ಯಕ್ತಿಗಳ ವಿವರ ತಿಳಿಯಲು ಯತ್ನಿಸುತ್ತಿದ್ದಾರೆ. ಆದರೆ, ಆಶ್ರಮದ ಬಳಿ ಅವರ ಬಗ್ಗೆ ಯಾವುದೇ ದಾಖಲೆಗಳಿಲ್ಲ ಎಂದು ನಾಯ್ಕ್ ಸ್ಪಷ್ಟಪಡಿಸಿದರು.
ಸಾರಿಗೆ ಸಚಿವ ರಾಮಕೃಷ್ಣ ಅಲಿಯಾಸ್ ಸುದೀನ್ ಧವಳೀಕರ್ ಪತ್ನಿ ಹಿಂದೂ ಸಂಘಟನೆ ಜೊತೆಯೊಂದಿಗಿನ ಸಂಪರ್ಕ ಕುರಿತು ಪೊಲೀಸರು ತನಿಖೆ ನಡೆಸಲಿದ್ದಾರೆ. ಅಲ್ಲದೆ ಸನಾತನ ಸಂಘಟನೆ ಮೇಲೆ ನಿಷೇಧ ಕುರಿತು ಪರಿಶೀಲನೆ ನಡೆಸಲಾಗಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ. ಕಳೆದ ವರ್ಷ ನಡೆದ ಮಾಲೇಗಾಂವ್ ಸ್ಫೋಟದಲ್ಲಿ ಸಾಧ್ವಿ ಪ್ರಗ್ಯಾಸಿಂಗ್ ಅವರನ್ನು ಮೋಕಾ ಕಾಯ್ದೆಯಡಿ ಬಂಧಿಸಲಾಗಿತ್ತು. ಆನಂತರ ನಿರಪರಾಧಿಯೆಂದು ಅವರಿಗೆ ಕ್ಲಿನ್ ಚಿಟ್ ನೀಡಲಾಗಿದೆ. ದೀಪಾವಳಿ ಹಬ್ಬದ ಮುನ್ನಾ ದಿನ ಶುಕ್ರವಾರ ರಾತ್ರಿ 9.30ರ ಸುಮಾರಿಗೆ ಮಡಗಾಂವ್ ಸ್ಫೋಟ ಸಂಭವಿಸಿತು.
(ಏಜನ್ಸೀಸ್)