ರಾಹುಲ್ ಗಾಂಧಿ ಪಿಎಂ ಆಗ್ಬೇಕು : ಎಸ್ ಎಂ ಕೃಷ್ಣ
ಟಿವಿ 9 ವಾಹಿನಿಯ ಚಕ್ರವ್ಯೂಹ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಮಾತನಾಡುತ್ತಿದ್ದರು. ದೇಶದಲ್ಲಿ 107 ಕೋಟಿ ಜನಸಂಖ್ಯೆಯಿದೆ. ಅದರಲ್ಲಿ ಸುಮಾರು 60 ಕೋಟಿ ಮಂದಿ ಯುವಕರಿದ್ದು. ಅವರೆಲ್ಲರ ಆಸೆ ರಾಹುಲ್ ಗಾಂಧಿ ಈ ದೇಶದ ಪ್ರಧಾನಮಂತ್ರಿಯಾಗಬೇಕು ಎಂಬುದಾಗಿದೆ. ನನ್ನ ವೈಯಕ್ತಿಕ ಅಭಿಪ್ರಾಯ ಕೂಡಾ ಅದೇ ಆಗಿದ್ದು, ಪ್ರಧಾನಮಂತ್ರಿ ಸ್ಥಾನವನ್ನು ಯಾವಾಗ ಅಲಂಕರಿಸಬೇಕು ಎಂಬುದನ್ನು ರಾಹುಲ್ ಗಾಂಧಿ ನಿರ್ಧರಿಸಬೇಕಿದೆ ಎಂದು ಹೇಳಿದರು.
ರಾಹುಲ್ ಗಾಂಧಿ ಅವರಿಂದ ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಎರಡನೇ ಬಾರಿಗೆ ಅಧಿಕಾರ ಚುಕ್ಕಾಣಿ ಹಿಡಿಯುವಂತಾಯಿತು. ಚುನಾವಣೆ ನಂತರವೂ ಅವರು ಮಾಡುತ್ತಿರುವ ಕೆಲಸ. ಗ್ರಾಮ ವಾಸ್ತವ್ಯಗಳು ಅತ್ಯಂತ ಶ್ಲಾಘನೀಯ. ಇದೇ ಕಾರಣಕ್ಕೆ ರಾಹುಲ್ ಗಾಂಧಿ ಯುವಕರ ಗಮನ ಸೆಳೆದಿದ್ದಾರೆ.
ಕೇಂದ್ರ ವಿದೇಶಾಂಗ ಖಾತೆ ಸಚಿವನಾಗುವೆ ಎಂದು ಕನಸು ಕಂಡಿರಲಿಲ್ಲ. ಇದೊಂದು ಆಕಸ್ಮಿಕ. ಇಂತಹ ಹಲವಾರು ಆಕಸ್ಮಿಕಗಳು ನನ್ನ ಜೀವನದಲ್ಲಿ ನಡೆದಿವೆ. ರಾಜ್ಯಪಾಲನಾಗಿದ್ದು ಕೂಡಾ ಅನಿರೀಕ್ಷಿತವೇ. ನಾನು ಎಂದಿಗೂ ಅಧಿಕಾರದ ಕನಸನ್ನು ಕಂಡವನಲ್ಲ. ಕಾಂಗ್ರೆಸ್ ಪಕ್ಷ ನೀಡಿದ ಎಲ್ಲ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಸಿರುವೆ, ನಿಭಾಯಿಸುತ್ತಿರುವೆ ಎಂದು ಕೃಷ್ಣ ಸ್ಪಷ್ಟಪಡಿಸಿದರು.
(ದಟ್ಸ್ ಕನ್ನಡ ವಾರ್ತೆ)