ರಾಜ್ಯಕ್ಕೆ ಸಾವಿರ ಕೋಟಿ ರು. ನೆರೆ ಪರಿಹಾರ

ರಾಯಚೂರು ಜಿಲ್ಲಾ ಕೇಂದ್ರದಲ್ಲಿ ಪ್ರಧಾನಿ ನೇತೃತ್ವದಲ್ಲಿ ನಡೆದ ಪರಿಶೀಲನಾ ಸಭೆಯ ಬಳಿಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಪ್ರಧಾನಿ ಮಾತನಾಡುತ್ತಿದ್ದರು. ಪ್ರಧಾನ ಮಂತ್ರಿಗಳ ರಾಷ್ಟ್ರೀಯ ವಿಪತ್ತು ನಿಧಿಯಲ್ಲಿ ಮೃತರ ಕುಟುಂಬಗಳಿಗೆ ತಲಾ ರು.1ಲಕ್ಷ ಪರಿಹಾರ ನೀಡುವುದಾಗಿಯೂ ಘೋಷಿಸಿದರು.
ಆರ್ಥಿಕ ನೆರವೊಂದೇ ಪರಿಹಾರವಲ್ಲ. ನೆರೆ ಸಮಸ್ಯೆಯನ್ನು ಪರಿಹರಿಸಲು ರಾಜ್ಯದೊಂದಿಗೆ ಕೇಂದ್ರ ಸರಕಾರ ಸದಾ ಬೆಂಬಲಕ್ಕಿರುತ್ತದೆ.ನೆರೆ ಪರಿಸ್ಥಿತಿ ಅಧ್ಯಯನಕ್ಕೆ ರಾಜ್ಯಕ್ಕೆ ಶೀಘ್ರವೇ ಕೇಂದ್ರ ತಂಡವನ್ನು ಕಳುಹಿಸಲಿದ್ದೇವೆ. ಅಧ್ಯಯನದ ಬಳಿಕ ಮತ್ತಷ್ಟು ನೆರವು ನೀಡುವ ಭರವಸೆಯನ್ನು ನೀಡಿದರು.
ರಾಜ್ಯದಲ್ಲಿ ನೆರೆ, ಬರ ಒಮ್ಮೆಲೆ ತಲೆದೋರಿದೆ. ಎರಡನ್ನೂ ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸಲಿದೆ. ಅಧಿಕಾರಿಗಳ ತಂಡ ಸಮರೋಪಾದಿಯಲ್ಲಿ ಕೆಲಸ ಕಾರ್ಯಗಳನ್ನು ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು. ರಾಜ್ಯಕ್ಕೆ ಸಕಲ ನೆರವು ನೀಡುವುದಾಗಿ ಘೋಷಿಸಿದರು.
ರೈತರ ಬೆಳೆ ಹಾನಿಗೂ ನೆರವು ನೀಡುವ ಬಗ್ಗೆ ಚಿಂತನೆ ನಡೆಸಿದ್ದೇವೆ. ರೈತರ ಸಾಲಮನ್ನಾ ಬಗ್ಗೆ ಆರ್ ಬಿಐ ನೊಂದಿಗೆ ಚರ್ಚಿಸಿದ ಬಳಿಕ ತೀರ್ಮಾನ ಕೈಗೊಳ್ಳುವುದಾಗಿ ಪ್ರಧಾನಿ ಮನಮೋಹನ್ ಸಿಂಗ್ ತಿಳಿಸಿದರು. ಇದೇ ಸಂದರ್ಭದಲ್ಲಿ ನೆರೆ ಹಾವಳಿಯ 20 ನಿಮಿಷಗಳ ವಿಡಿಯೋ ಚಿತ್ರೀಕರಣ ಹಾಗೂ ಛಾಯಾಚಿತ್ರಗಳನ್ನು ಪ್ರಧಾನಿಗಳಿಗೆ ತೋರಿಸಲಾಯಿತು.
ಪ್ರಧಾನಿಗೆ ಯಡಿಯೂರಪ್ಪ ಅಭಿನಂದನೆ
ರಾಜ್ಯಕ್ಕೆ ರು.1 ಸಾವಿರ ಕೋಟಿ ನೆರೆ ಪರಿಹಾರ ಘೋಷಿಸಿದ್ದಕ್ಕೆ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿನಂದನೆಗಳನ್ನು ತಿಳಿಸಿದರು. ರಾಜ್ಯಕ್ಕೆ ಇನ್ನೂ ರು.2 ಸಾವಿರ ಕೋಟಿಗಳ ಅವಶ್ಯಕತೆ ಇದೆ. ಅ.12ರಂದು ಉನ್ನತ ಮಟ್ಟದ ಸಭೆ ನಡೆಸುತ್ತೇವೆ. ಅ.14ರಂದು ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡುವುದಾಗಿ ತಿಳಿಸಿದರು.
ಮೊದಲು ನೆರೆಹಾವಳಿಗೆ ತುತ್ತಾದ 219 ಗ್ರಾಮಗಳ ಸ್ಥಳಾಂತರಕ್ಕೆ ಆದ್ಯತೆ ನೀಡಲಾಗುತ್ತದೆ. ಈ ಗ್ರಾಮಗಳನ್ನು ಮಾದರಿ ಗ್ರಾಮಗಳಾಗಿ ನಿರ್ಮಿಸುತ್ತೇವೆ.ಇದಕ್ಕಾಗಿ ರು.70 ಕೋಟಿ ಖರ್ಚು ಮಾಡುತ್ತಿದ್ದೇವೆ. ನಂತರ ಮೂಲ ಸೌಕರ್ಯಗಳ ಕಡೆಗೆ ಗಮನ ನೀಡಲಿದ್ದೇವೆ ಎಂದು ಯಡಿಯೂರಪ್ಪ ವಿವರ ನೀಡಿದರು.
ಪ್ರಧಾನಿಗಳಿಗೆ ರಾಜ್ಯದ ನೆರೆ ಪರಿಸ್ಥಿತಿಯನ್ನು ಸಮರ್ಪಕವಾಗಿ ಮನವರಿಕೆ ಮಾಡಿಕೊಟ್ಟ ಕೆಪಿಸಿಸಿ ಅಧ್ಯಕ್ಷ ಆರ್ ವಿ ದೇಶಪಾಂಡೆ, ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಯಡಿಯೂರಪ್ಪ ಅಭಿನಂದನೆಗಳನ್ನು ತಿಳಿಸಿದರು. ಕೇಂದ್ರ ಸಚಿವರಾದ ಎಸ್ ಎಂ ಕೃಷ್ಣ, ವೀರಪ್ಪ ಮೊಯಿಲಿ ಸೇರಿದಂತೆ ರಾಜ್ಯ ಗೃಹ ಸಚಿವ ವಿ ಎಸ್ ಆಚಾರ್ಯ, ಶೋಭಾ ಕರಂದ್ಲಾಜೆ, ಕರುಣಾಕರ ರೆಡ್ಡಿ ಉಪಸ್ಥಿತರಿದ್ದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications