ಪ್ರವಾಹ : ಅ.10 ರಂದು ಸರ್ವಪಕ್ಷಗಳ ಸಭೆ
ಬೆಂಗಳೂರು, ಅ.8 : ಉತ್ತರ ಕರ್ನಾಟಕದಲ್ಲಿ ನೆರೆಗೆ ತುತ್ತಾಗಿರುವ ಸಂತ್ರಸ್ಥರ ನೆರವಿಗೆ ಹೆಚ್ಚಿನ ಅನುದಾನ ನೀಡುವಂತೆ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರೊಂದಿಗೆ ನೇರ ಮಾತುಕತೆ ನಡೆಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ. ಇಂದು ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಎರಡನೇ ದಿನ ಪಾದಯಾತ್ರೆಯಲ್ಲಿ 100 ಕೋಟಿ ಹೆಚ್ಚು ನಿಧಿ ಸಂಗ್ರಹವಾಗಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿನ ಸ್ಪಷ್ಟ ಚಿತ್ರಣವನ್ನು ತೆರೆದಿಟ್ಟರೆ ನಮ್ಮ ಮನವಿಗೆ ಸ್ಪಂದಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು. ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ನೆರೆ ಹಾವಳಿಗೆ ತುತ್ತಾಗಿರುವ ಪ್ರದೇಶ ವೀಕ್ಷಣೆಗೆ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅಕ್ಟೋಬರ್ 10 ರಂದು ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಅವರನ್ನು ಭೇಟಿ ಮಾಡಿ ನೇರ ಮಾತುಕತೆ ನಡೆಸುವೆ ಎಂದು ಯಡಿಯೂರಪ್ಪ ವಿವರಿಸಿದರು.
ಪ್ರಧಾನಿ ಭೇಟಿಯಾಗಲು ಹೈದರಾಬಾದ್ ಗೆ ತೆರಳುವುದಾಗಿ ಹೇಳಿದ ಯಡಿಯೂರಪ್ಪ, ರಾಜ್ಯದಲ್ಲಿ ಆಗಿರುವ ನಷ್ಟದ ಪರಿಹಾರ ಕೈಗೊಳ್ಳಲು ಅಗತ್ಯ ಇರುವ ಹಣ ಹಾಗೂ ಕೈಗೊಳ್ಳುವ ಕ್ರಮಗಳ ಕುರಿತು ವಿಸ್ತೃತವಾಗಿ ಚರ್ಚೆ ನಡೆಸಲಾಗುವುದು ಎಂದರು.
ಅಕ್ಟೋಬರ್ 10 ರಂದು ಸರ್ವಪಕ್ಷಗಳ ಸಭೆ
ರಾಜ್ಯದಲ್ಲಿ ಮಳೆ ಮತ್ತು ಪ್ರವಾಹದಿಂದ ಉಂಟಾಗಿರುವ ಹಾನಿ ಕುರಿತು ಅಕ್ಟೋಬರ್ 10 ರಂದು ಸರ್ವಪಕ್ಷಗಳ ಸಭೆ ಕರೆಯಲಾಗಿದೆ. ಈ ಸಭೆಗೆ ರಾಜ್ಯದ ಕೇಂದ್ರ ಸಚಿವರನ್ನು ಆಹ್ವಾನಿಸಲಾಗಿದೆ. ಸಭೆ ನಂತರ ಎರಡು ಮೂರು ದಿನಗಳಲ್ಲಿ ಸರ್ವಪಕ್ಷಗಳ ನಿಯೋಗ ಕರೆದೊಯ್ದು ಹೆಚ್ಚಿನ ಅನುದಾನ ಒದಗಿಸುವಂತೆ ಕೇಂದ್ರಕ್ಕೆ ಮನವಿ ಮಾಡಲಾಗುವುದು ಎಂದು ಯಡಿಯೂರಪ್ಪ ಹೇಳಿದರು.
ನೆರೆ ಹಾನಿ ಅಧ್ಯಯನಕ್ಕೆ ಕೇಂದ್ರದಿಂದ ತಂಡ ಆಗಮಿಸಿ ಅಧ್ಯಯನ ನಡೆಸಿ ಅದು ವರದಿ ನೀಡಿ ನಂತರ ಅನುದಾನ ಬಿಡುಗಡೆ ಮಾಡುವುದಕ್ಕೆ ಕನಿಷ್ಠ ಪಕ್ಷ ಒಂದು ತಿಂಗಳಾದರೂ ಬೇಕಾಗುತ್ತದೆ. ಅಲ್ಲಿಯವರೆಗೆ ಪರಿಹಾರ ಕೈಗೊಳ್ಳದೇ ನೆರವಿಗಾಗಿ ಕಾಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ ತಕ್ಷಣವೇ ಹೆಚ್ಚಿನ ಪರಿಹಾರಕ್ಕೆ ಮನವಿ ಮಾಡಲಾಗುವುದು ಎಂದರು. ಕೇಂದ್ರದಿಂದ ಮೊದಲ ಹಂತದಲ್ಲಿ 156.84 ಕೋಟಿ ಬಂದಿದ್ದರೆ, ಎರಡನೇ ಹಂತದಲ್ಲಿ 52.26 ಕೋಟಿ ರುಪಾಯಿಗಳ ಪರಿಹಾರ ಹಣ ಬಂದಿದೆ.
(ದಟ್ಸ್ ಕನ್ನಡ ವಾರ್ತೆ)