ಮೈಸೂರು: ಹೈಟೆಕ್ ಕ್ರಿಕೆಟ್ ಬುಕ್ಕಿಗಳ ಬಂಧನ
ಮೈಸೂರು, ಅ. 5 : ರಾಷ್ಟ್ರವ್ಯಾಪಿ ಹರಡಿರುವ ಕ್ರಿಕೆಟ್ ಬೆಟ್ಟಿಂಗ್ ಜಲಕ್ಕೆ ಮೈಸೂರು ನಗರ ವೇದಿಕೆಯಾಗಿರುವ ಅಘಾತಕಾರಿ ಅಂಶ ತಡವಾಗಿ ಬೆಳಕಿಗೆ ಬಂದಿದೆ. ನಗರದ ಹುಣಸೂರು ರಸ್ತೆಯಲ್ಲಿರುವ ಮೆನಾರ್ಕ್ ಹೋಟೆಲ್ನಲ್ಲಿ ರೂಮು ಪಡೆದುಕೊಂಡು ವ್ಯವಹಾರ ನಡೆಸುತ್ತಿದ್ದ ಬುಕ್ಕಿಗಳು ವಿಜಯನಗರ ಪೊಲೀಸರು ಹಾಗೂ ಸಿಸಿಬಿ ತಂಡಕ್ಕೆ ಸಿಕ್ಕಿಬಿದ್ದಿದ್ದಾರೆ.
ಬಂಧಿತರಲ್ಲಿ ಸಿದ್ದಾರ್ಥ ಬಡಾವಣೆ, ಗೋಕುಲಂನಗರದವರೆ ಹೆಚ್ಚಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಸುನೀಲ್ ಅಗರ್ವಾಲ್ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಶನಿವಾರ ಸಿಸಿಬಿ ಪೊಲೀಸರಿಗೆ ದೊರೆತ ಮಾಹಿತಿ ಮೇರೆಗೆ ವಿಜಯನಗರ ಠಾಣೆ ಪೊಲೀಸರೊಂದಿಗೆ ಹೋಟೆಲ್ ಮೇಲೆ ದಾಳಿ ನಡೆಸಿ 18 ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಲಕ್ಷಾಂತರ ರೂ. ಬೆಲೆ ಬಾಳುವ ಪದಾರ್ಥಗನ್ನು ವಶಪಡಿಸಿಕೊಳ್ಳಲಾಗಿದೆ.
ಕುನಾಲಾಲ್, ರಾಜೀವ್ಕುಮಾರ್, ಅಮೋಘ್, ಕಿರಣ್, ಸಂಜಯ್, ಸುರೇಶ್, ಜಯರಾಂ, ರಾಜೇಂದ್ರ, ಸಂಪತ್ ಕುಮಾರ್, ಆದಿಲ್, ವಿಶ್ವನಾಥ್, ಶ್ರೀನಿವಾಸ್, ಚಂದನ್, ಕನಾ, ಓಂಪ್ರಕಾಶ್, ಗುರು, ವಿಜೇತ್, ಚಂದ್ರಭಾನು ಎಂಬುವರನ್ನು ಬಂಧಿಸಲಾಗಿದೆ ಎಂದರು.
ಬಂಧಿತರಿಂದ 112 ಮೆಬೈಲ್ಗಳು, 11 ಸ್ಥಿರ ದೂರವಾಣಿ, 7 ಲ್ಯಾಪ್ಟಾಪ್, 4 ಪ್ರಿಂಟರ್ಗಳು, 12 ಟೇಪ್ರೆಕಾರ್ಡರ್ ಗಳು, ದೂರವಾಣಿಗಳಿಂದ ಬರುವ ಕರೆಗಳು ಹಾಗೂ ಧ್ವನಿ ಮುದ್ರಿಸಿಕೊಳ್ಳಲು ಬಳಸುವ 4 ಯಂತ್ರಗಳು, 31 ಸಾವಿರ ರೂ. ನಗದು, 9 ದ್ವಿಚಕ್ರ ವಾಹನ, 1 ಮಾರುತಿ ಕಾರು ವಶಕ್ಕೆ ತೆಗೆದುಕೊಳ್ಳಲಾಗಿದೆ. ಅಲ್ಲದೆ ದಾಳಿ ನಡೆಸುವ ಎರಡು ಗಂಟೆ ಮೊದಲು ಸುಮಾರು 37.50 ಲಕ್ಷ ರೂ.ಗಳ ವಹಿವಾಟು ನಡೆಸಿದ್ದಾರೆ ಎಂದು ವಿವರಿಸಿದರು.
ಬೆಟ್ಟಿಂಗ್ ಜಲದ ಪ್ರಮುಖ ರುವಾರಿ ಮೈಸೂರಿನ ಸಿದ್ಧಾರ್ಥನಗರ ಬಡಾವಣೆಯ ತುಳಸೀರಾಂ ಬಾಗ್ರೆಎಂಬವನಾಗಿದ್ದಾನೆ. ಈತನ ಸಂಪರ್ಕದಲ್ಲಿ ಐದು ತಂಡಗಳು ಕಾರ್ಯಾಚರಣೆ ನಡೆಸುತ್ತಿರುವುದು ಬೆಳಕಿಗೆ ಬಂದಿದ್ದು ಶೀಘ್ರದಲ್ಲೇ ಎಲ್ಲರನ್ನೂ ಬಂಧಿಸಲಾಗುವುದು ಎಂದು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications