ರಸ್ತೆಯಲ್ಲಿ ಈಡುಗಾಯಿ ಒಡೆದು ರೈತರ ಆಕ್ರೋಶ
ತೆಂಗುಬೆಳೆಯನ್ನೇ ಪ್ರಧಾನ ಕೃಷಿಯನ್ನಾಗಿಸಿಕೊಂಡು ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿರುವ ರೈತಾಪಿ ವರ್ಗ ಇಂದು ತೆಂಗಿಗೆ ಮಾರುಕಟ್ಟೆ ಬೆಲೆಯಿಲ್ಲದೇ ಸಂಕಷ್ಟದಲ್ಲಿ ಜೀವನ ತಳ್ಳುವಂತಾಗಿದೆ. ಅಂತರ್ಜಲ ಕುಸಿತ, ನುಸಿರೋಗ, ವಿದ್ಯುತ್ ಸಮಸ್ಯೆಗಳ ನಡುವೆ ತೆಂಗು ಬೆಳೆದ ನೇಗಿಲಯೋಗಿ ಬೇರೆ ರಾಜ್ಯಗಳಿಗೆ ತೆಂಗು ರಫ್ತು ಮಾಡಲು ತೆರಿಗೆ ವಿಧಿಸಿ ರೈತರ ಮೇಲೆ ಹೊರೆಹೊರಿಸುತ್ತಿದ್ದಾರೆ. ರೈತಪರ ಸರ್ಕಾರ ಎಂದು ಹೇಳಿಕೊಳ್ಳುವ ಬಿಜೆಪಿ ಸರ್ಕಾರ ತೆಂಗುಬೆಳೆಗಾರರಿಗೆ ಬೆಂಬಲಬೆಲೆ ನೀಡದಿದ್ದರೆ ವಿಧಾನಸೌಧದ ಮೆಟ್ಟಿಲುಗಳ ಮೇಲೆ ತೆಂಗಿನಕಾಯಿ ಈಡುಗಾಯಿ ಒಡೆಯುವುದರ ಮೂಲಕ ಪ್ರತಿಭಟಿಸಲಾಗುವುದೆಂದು ಹೋರಾಟ ಸಮಿತಿ ಎಚ್ಚರಿಸಿದೆ.
ಬೆಳಿಗ್ಗೆಯೇ ಚನ್ನಪಟ್ಟಣದ ಬೆಂಗಳೂರು ಮೈಸೂರು ಹೆದ್ದಾರಿಯ ನಡುರಸ್ತೆಯಲ್ಲೇ ತೆಂಗಿನಕಾಯಿ ಈಡುಗಾಯಿ ಒಡೆಯುತ್ತಿರುವುದನ್ನ ನೋಡಿ ಯಾವುದೇ ಹರಕೆ ತೀರಿಸುತ್ತಿದ್ದಾರೆ ಅಥವಾ ಯಾರನ್ನೋ ಮೆಚ್ಚಿಸುವುದಕ್ಕೂ ಈಡುಗಾಯಿ ಸೇವೆ ಮಾಡ್ತಿದಾರೆ ಎಂದು ಜನ ಮಾತಾಡಿಕೊಳ್ಳುತ್ತಿದ್ದರು. ಆದರೆ ಈಡುಗಾಯಿ ಸೇವೆ ಯಾವುದೇ ಹರಕೆ ತೀರಿಸಲು ಅಲ್ಲವೆಂದು ಹತ್ತಿರಕ್ಕೆ ಹೋದ ನಂತರ ಜನತೆ ಗೊತ್ತಾಗಿದ್ದು.
ರೈತರು ಬೆಳೆದ ತೆಂಗಿನ ಕಾಯಿಯನ್ನು ಬೇರೆ ರಾಜ್ಯಗಳಿಗೆ ರಫ್ತು ಮಾಡಲು ಶೇಕಡಾ 2ರಷ್ಟು ತೆರಿಗೆ ವಿಧಿಸುತ್ತಿದ್ದಾರೆ ಮತ್ತು ಬೇರೆ ರಾಜ್ಯಗಳಲ್ಲಿ ಆರ್.ಎಂ.ಸಿ.ತೆರಿಗೆ ಶೇಕಡಾ 1ರಷ್ಟಿದ್ದರೆ ಕರ್ನಾಟಕದಲ್ಲಿ ಶೇಕಡಾ ಒಂದೂವರೆಯಷ್ಟು ನಿಗದಿ ಮಾಡಿ ರೈತರ ಮೇಲೆಹೊರೆ ಹೊರಿಸಿದ್ದಾರೆ. ಆದ್ದರಿಂದ ತೆಂಗುಬೆಳೆಗೆ ಸೂಕ್ತ ಮಾರುಕಟ್ಟೆ ಒದಗಿಸಿ ಸಮರ್ಪಕ ಬೆಂಬಲಬೆಲೆ ನಿಗದಿಪಡಿಸುವಂತೆ ಹಾಗೂ ಹೊರೆಯಾಗಿರುವ ತೆರಿಗೆಯನ್ನ ರದ್ದುಗೊಳಿಸಬೇಕೆಂದು ತೆಂಗುಬೆಳೆಗಾರರ ಹೋರಾಟ ಸಮಿತಿ ಮುಖಂಡ ಎಲ್.ರಮೇಶ್ಗೌಡ ಆಗ್ರಹಿಸಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದು 63 ವರ್ಷಗಳಾದರು ರೈತರು ಬೆಳೆದ ಬೆಳೆಗಳಿಗೆ ಸೂಕ್ತಮಾರುಕಟ್ಟೆಯಲ್ಲಿ ಒದಗಿಸಲು ಸಾಧ್ಯವಾಗದ ಸರ್ಕಾರ ನೀತಿಯನ್ನ ಹೋರಾಟಸಮಿತಿಯ ಸದಸ್ಯರುಗಳು ಖಂಡಿಸಿದರು. ಸದಾ ಸಂಕಷ್ಟದಲ್ಲೇ ಬದುಕು ತಳ್ಳುತ್ತಿರುವ ರೈತರಸಮಸ್ಯೆಗಳಿಗೆ ರೈತಪರ ಸರ್ಕಾರ ಎನಿಸಿಕೊಂಡ ಸರ್ಕಾರಗಳು ಸಮಸ್ಯೆಗಳನ್ನ ಬಗೆಹರಿಸುವ ನಿಟ್ಟಿನಲ್ಲಿ ಸ್ಪಂದಿಸಬೇಕು. ಕೇವಲ ಭರವಸೆಗಳನ್ನ ನೀಡುವುದರ ಬದಲು ರೈತಪರವಾದ ಯೋಜನೆಗಳನ್ನ ಅನುಷ್ಠಾನಕ್ಕೆ ತಂದು ರೈತಬೆಳೆದ ಬೆಳೆಗೆ ಸೂಕ್ತಮಾರುಕಟ್ಟೆಬೆಲೆ ಒದಗಿಸಿ ರೈತರ ಸಮಸ್ಯೆಯನ್ನ ಬಗೆಹರಿಸಬೇಕಾದದ್ದು ಸರ್ಕಾರದ ಕರ್ತವ್ಯವಾಗಿದೆ. ಸಮಸ್ಯೆ ಬಗೆಹರಿಸಬೇಕಾದ ಸರ್ಕಾರ ಜಾಣಕುರುಡತನ ಪ್ರದರ್ಶಿಸುತ್ತಾ ನಿದ್ರಾವಸ್ಥೆಯಲ್ಲಿದೆ. ಆದ್ದರಿಂದ ಅಕ್ಟೋಬರ್ 15ರಂದು ವಿಧಾನಸೌಧದ ಮೆಟ್ಟಿಲುಗಳ ಮೇಲೆ ತೆಂಗಿನಕಾಯಿ ಈಡುಗಾಯಿ ಚಳವಳಿಯನ್ನ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೋರಾಟಸಮಿತಿಯ ಹಿರಿಯರಾದ ಅರಳಾಳುಸಂದ್ರ ಶಿವಪ್ಪ ಎಚ್ಚರಿಸಿದ್ದಾರೆ.