ತೇಕಡಿಯಲ್ಲಿ ದೋಣಿ ದುರಂತ : 37 ಬಲಿ ?

ಪ್ರವಾಸಿಗರಿಂದ ತುಂಬಿದ್ದ ಈ ನತದೃಷ್ಟ ದೋಣಿಯಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ದೆಹಲಿ ಮತ್ತಿತರ ಕಡೆಗಳಿಂದ ರಜಾ ದಿನಗಳನ್ನು ಕಳೆಯಲು ಬಂದಿದ್ದವರು ಮತ್ತು ಕೆಲ ವಿದೇಶಿಯರು ಸೇರಿದಂತೆ 74 ಮಂದಿ ಪ್ರಯಾಣಿಸುತ್ತಿದ್ದರು. ಇದುವರೆಗೆ 40 ಜನರನ್ನು ರಕ್ಷಿಸಲಾಗಿದ್ದು, ಇನ್ನೂ 20 ಮಂದಿ ನಾಪತ್ತೆಯಾಗಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಖ್ಯವಾಗಿ ಐದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಟಿಕೆಟ್ ನೀಡುವ ಪದ್ಧತಿ ಇಲ್ಲದಿರುವುದರಿಂದ ದೋಣಿಯಲ್ಲಿ ಎಷ್ಟು ಪುಟ್ಟ ಮಕ್ಕಳು ಇದ್ದರು ಎಂಬ ಖಚಿತ ಮಾಹಿತಿ ಲಭ್ಯವಾಗಿಲ್ಲ.
ದಟ್ಟ ಅರಣ್ಯದ ನಡುವೆ ಇರುವ ಘಟನಾ ಸ್ಥಳ, ದೋಣಿ ತಲುಪಬೇಕಿದ್ದ ಸ್ಥಳದಿಂದ ಐದು ಕಿ.ಮೀ. ದೂರದಲ್ಲಿದೆ. ಇಂತಹ ದುರ್ಗಮ ಸ್ಥಳದಲ್ಲಿ ಕತ್ತಲು, ಮಳೆಯನ್ನೂ ಲೆಕ್ಕಿಸದೆ ಪರಿಹಾರ ಕಾರ್ಯಕ್ಕೆ ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿ 40 ಪ್ರವಾಸಿಗರನ್ನು ರಕ್ಷಿಸಲು ಸಫಲರಾಗಿದ್ದಾರೆ. ದುರಂತ ನಡೆದ 30 ನಿಮಿಷಗಳ ಬಳಿಕವಷ್ಟೇ ಪೊಲೀಸರು ಮತ್ತು ಇತರ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದರು. ಸಾವಿನ ಸಂಖ್ಯೆ ಹೆಚ್ಚಲು ಇದೂ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ಅಭಿಪ್ರಾಯಪಟ್ಟಿದ್ದಾರೆ.
ಸಂತ್ರಸ್ತರ ಕಡೆಯವರಿಗಾಗಿ ಕೇರಳ ಸರ್ಕಾರ ನಿಯಂತ್ರಣ ಕೊಠಡಿಯನ್ನು ತೆರೆದಿದೆ. ಸಂಬಂಧಪಟ್ಟವರು ದೂರವಾಣಿ ಸಂಖ್ಯೆ 0471- 2331403/ 2333198/0486-9222620/ 9222111/ 94460 52361 ಸಂಪರ್ಕಿಸಬಹುದು. ದೋಣಿ ದುರಂತದಲ್ಲಿ ಮೃತಪಟ್ಟಿರುವ ಕರ್ನಾಟಕದ ಪ್ರವಾಸಿಗರ ಕುರಿತು ಮಾಹಿತಿಗಾಗಿ ಸಂಪರ್ಕಿಸ ಬಹುದಾದ ಕಂಟ್ರೋಲ್ ರೂಂ ಸಂಖ್ಯೆ: 22942111 /22942777 /2221177 .
(ಏಜನ್ಸೀಸ್)












Click it and Unblock the Notifications