ಏರ್ ಗನ್ ನಿಂದ ಸಿಡಿದ ಗುಂಡಿಗೆ ಬಾಲಕ ಬಲಿ
ಮೈಸೂರು, ಸೆ. 23 : ಏರ್ ಗನ್ ನಿಂದ ಸಿಡಿದ ಗುಂಡಿಗೆ 8 ವರ್ಷದ ಬಾಲಕನೊಬ್ಬ ಮೃತನಾಗಿರುವ ಘಟನೆ ಮೈಸೂರು ತಾಲೂಕಿನ ದೊಡ್ಡಕತೂರ್ ಗ್ರಾಮದಲ್ಲಿ ಜರುಗಿದೆ.
ಅಜಿತ್ ಎಂಬ ಬಾಲಕ ಸಾವಿಗೀಡಾಗಿರುವ ದುರ್ದೈವಿ. ಏರ್ ಗನ್ ಬಳಸಿ ಬಾಲಕನ ಹತ್ಯೆಗೆ ಕಾರಣನಾಗಿರುವ ಇದೇ ಗ್ರಾಮದ 18 ವರ್ಷದ ಜಬೀರ್ ತಲೆಮರೆಸಿಕೊಂಡಿದ್ದಾನೆ.
ರಮಜಾನ್ ಹಬ್ಬದ ಸಂದರ್ಭದಲ್ಲಿ ಮುಸ್ಲಿಂ ಜನಾಂಗದವರು ಹಣವನ್ನು ಬಡಬಗ್ಗರಿಗೆ, ಮಕ್ಕಳಿಗೆ ಕೊಡುವುದು ವಾಡಿಕೆ. ಅಜಿತ್ ತನ್ನ ಇಬ್ಬರು ಗೆಳೆಯರೊಂದಿಗೆ ಹಣ ಸಂಗ್ರಹಿಸಲು ಮನೆಮನೆಗೆ ತೆರಳಿದ್ದಾನೆ. ಜಬೀರ್ ಇರುವ ಮನೆಗೆ ಅಜಿತ್ ಹೋದಾಗ, ಪ್ಲಾಸ್ಟಿಕ್ ಏರ್ ಗನ್ ನಿಂದ ಜಬೀರ್ ಶೂಟ್ ಮಾಡಿದ್ದಾನೆ. ಅಜಿತ್ ಕುತ್ತಿಗೆಗೆ ಇದರಿಂದ ತೀವ್ರವಾದ ಗಾಯವಾಗಿದೆ.
ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಅಜಿತ್ ನನ್ನು ಕೂಡಲೆ ಕೆಆರ್ ಆಸ್ಪತ್ರೆಗೆ ಸಾಗಿಸಲಾಗಿದೆ. ಅಲ್ಲಿಂದ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಜೆಎಸ್ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅಜಿತ್ ಕೊನೆಯುಸಿರೆಳೆದಿದ್ದಾನೆ. ಜಬೀರ್ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
(ಏಜೆನ್ಸೀಸ್)












Click it and Unblock the Notifications