Get Updates
Get notified of breaking news, exclusive insights, and must-see stories!

ನಾರಾಯಣ ಗೋಸ್ವಾಮಿ ಮಹಾರಾಜರಿಂದ ಆಶೀರ್ವಚನ

Narayana Goswamy Maharaj, ISKCON
ಶ್ರೀಕೃಷ್ಣನ ಅಪರಾವತಾರವೆಂದೇ ಪೂಜಿಸಲ್ಪಡುವ ಶ್ರೀ ಶ್ರೀ ಚೈತನ್ಯಮಹಾಪ್ರಭುಗಳ ಪರಂಪರೆಯ ಗೌಡಿಯ ಮಠದ ಬಹುಮುಖ್ಯ ಗುರುಗಳಾದ ಪೂಜ್ಯ ಶ್ರೀಲ ಭಕ್ತಿವೇದಾಂತ ನಾರಾಯಣ ಗೋಸ್ವಾಮಿ ಮಹಾರಾಜರು ಇದೇ ಸೆಪ್ಟಂಬರ್ 13 ಭಾನುವಾರ, ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಭಕ್ತಾದಿಗಳೆಲ್ಲರಿಗೂ ಆಶೀರ್ವಚನ ನೀಡಲಿದ್ದಾರೆ. ಈ ಸುಸಂದರ್ಭದಲ್ಲಿ ಅವರನ್ನು ಕನ್ನಡಿಗರಿಗೆ ಪರಿಚಯಿಸಲು ತುಂಬ ಸಂತೋಷವಾಗುತ್ತಿದೆ.

ಪೂಜ್ಯ ಶ್ರೀ ಶ್ರೀಮದ್ ಭಕ್ತಿವೇದಾಂತ ನಾರಾಯಣ ಗೋಸ್ವಾಮಿ ಮಹಾರಾಜರು, ಶ್ರೀ ಶ್ರೀಮದ್ ಭಕ್ತಿಪ್ರಜ್ಞಾನ ಕೇಶವ ಗೋಸ್ವಾಮಿ ಮಹಾರಾಜರ ಶಿಷ್ಯರು. ಶ್ರೀ ಭಕ್ತಿಪ್ರಜ್ಞಾನ ಕೇಶವ ಗೋಸ್ವಾಮಿ ಮಹಾರಾಜರು, ಶ್ರೀ ಶ್ರೀಮದ್ ಭಕ್ತಿಸಿದ್ಧಾಂತ ಸರಸ್ವತಿ ಪ್ರಭುಪಾದರ ಪ್ರಮುಖ ಶಿಷ್ಯರಲ್ಲಿ ಒಬ್ಬರು. ಶ್ರೀಲ ನಾರಾಯಣ ಮಹಾರಾಜರು ಗಂಗಾನದಿ ತೀರದಲ್ಲಿರುವ ಬಿಹಾರದ ಒಂದು ಪುಟ್ಟಹಳ್ಳಿಯಾದ ತಿವಾರಿಪುರದಲ್ಲಿ ಮೌನಿ ಅಮಾವಸ್ಯೆಯ ದಿನವಾದ ಫೆಬ್ರವರಿ 16, 1921ರಂದು ಜನಿಸಿದರು. ಬಾಲ್ಯದಿಂದಲೂ ಇವರು ಅಧ್ಯಾತ್ಮದೆಡೆಗೆ ಆಕರ್ಷಿತರಾಗಿ ಶ್ರೀ ಕೃಷ್ಣನ ನಾಮಸ್ಮರಣೆ ಮಾಡುತ್ತಿದ್ದರು. ಪೂರ್ವಾಶ್ರಮದಲ್ಲಿ ಇವರು ನಾರಾಯಣ ತಿವಾರಿಯೆಂಬ ಹೆಸರಿನಿಂದ ಪೋಲಿಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು.

ಒಮ್ಮೆ ಗೌಡೀಯ ಮಠದ ಶಿಷ್ಯರು ಇವರ ಸ್ಥಳಕ್ಕೆ ಬಂದು ಶ್ರೀ ಚೈತನ್ಯ ಮಹಾಪ್ರಭುಗಳ ಸಿದ್ಧಾಂತವನ್ನು ಪ್ರವಚನ ಮಾಡಿದರು. ಅವರ ಪ್ರವಚನಗಳನ್ನು ಕೇಳಿ ಶ್ರೀ ಕೃಷ್ಣನೆಡೆಗೆ ಇವರ ಮನಸ್ಸು ಸಂಪೂರ್ಣ ಆಕರ್ಷಿತವಾಯಿತು. ಲೌಕಿಕ ಜೀವನದಲ್ಲಿ ಆಸಕ್ತಿ ಕಳೆದುಕೊಂಡು ಕೆಲಸ, ಕುಟುಂಬ, ಆಸ್ತಿ ಎಲ್ಲವನ್ನೂ ತ್ಯಜಿಸಿ ಬಂಗಾಳದ ನವದ್ವೀಪ ಧಾಮದಲ್ಲಿರುವ ಶ್ರೀಲ ಭಕ್ತಿಪ್ರಜ್ಞಾನ ಕೇಶವ ಗೋಸ್ವಾಮಿ ಮಹಾರಾಜರಲ್ಲಿಗೆ ಬಂದು ಅವರ ಪಾದಗಳಿಗೆ ಶರಣಾದರು. ಶ್ರೀ ಕೇಶವ ಮಹಾರಾಜರು ಇವರಲ್ಲಿನ ಶುದ್ಧ ಕೃಷ್ಣಪ್ರೇಮವನ್ನು ಕಂಡು ಇವರಿಗೆ ಹರಿನಾಮವನ್ನು ಹಾಗೂ ಸಂನ್ಯಾಸ ದೀಕ್ಷೆಯನ್ನು ನೀಡಿದರು.

ಶ್ರೀಲ ನಾರಾಯಣ ಮಹಾರಾಜರು ತಮ್ಮ ಗುರುಗಳ ಆಶಯದಂತೆ ಶ್ರೀಲ ಭಕ್ತಿವಿನೋದ ಠಾಕೂರರು ಬಂಗಾಳಿಯಲ್ಲಿ ಬರೆದ ಜೈವ ಧರ್ಮ ಎಂಬ ಪುಸ್ತಕವನ್ನು ಹಿಂದಿಗೆ ಅನುವಾದ ಮಾಡಿದ್ದಾರೆ. ಇದು ಈಗ ಕನ್ನಡದಲ್ಲೂ ಪ್ರಕಟವಾಗುತ್ತಿದೆ. ಈ ಪುಸ್ತಕವು ವೇದೋಪನಿಷತ್ತು, ಶ್ರೀಮದ್ಭಾಗವತ ಪುರಾಣ, ಮಹಾಭಾರತ, ರಾಮಾಯಣ ಗ್ರಂಥಗಳ ಸಾರವನ್ನು ಒಳಗೊಂಡಿದೆ. ಶ್ರೀಲ ಗುರುದೇವರು ಹೀಗೇ ಇನ್ನೂ ಅನೇಕ ಅಧ್ಯಾತ್ಮಿಕ ಗ್ರಂಥಗಳನ್ನು ಬಂಗಾಳಿಯಿಂದ ಹಿಂದಿಗೆ ಹಾಗೂ ಆಂಗ್ಲ ಭಾಷೆಗೆ ಅನುವಾದಿಸಿದ್ದಾರೆ. ಇವರು ಶ್ರೀಲ ವಿಶ್ವನಾಥ ಚಕ್ರವರ್ಥಿ ಠಾಕೂರರ ಭಗವದ್ಗೀತಾ ಉಪನ್ಯಾಸದ ಆಧಾರದ ಮೇಲೆ ಭಗವದ್ಗೀತೆಯ ಮೇಲೆ ಒಂದು ಸಾವಿರ ಪುಟಗಳನ್ನೂ ಮೀರಿದ ಗ್ರಂಥವನ್ನು ರಚಿಸಿದ್ದಾರೆ.

ಶ್ರೀಲ ನಾರಾಯಣ ಮಹಾರಾಜರು ವಿಶ್ವಪ್ರಸಿದ್ಧ ಅಂತರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಸ್ಥೆಯ(ಇಸ್ಕಾನ್) ಸ್ಥಾಪಕರಾದ ಶ್ರೀಲ ಏ.ಸಿ.ಭಕ್ತಿವೇದಾಂತ ಸ್ವಾಮಿ ಪ್ರಭುಪಾದರ ಅತ್ಯಂತ ನಿಕಟ ಸ್ನೇಹಿತರಾಗಿದ್ದು ಅವರನ್ನು ತಮ್ಮ ಗುರುಗಳೆಂದು ಭಾವಿಸಿದ್ದರು. ಶ್ರೀಲ ಪ್ರಭುಪಾದರು ಶ್ರೀಲ ನಾರಾಯಣ ಮಹಾರಾಜರನ್ನು ತಮ್ಮ ಹರೇಕೃಷ್ಣ ಚಳವಳಿಯ ಉತ್ತರಾಧಿಕಾರಿಯನ್ನಾಗಿ ಆಯ್ಕೆ ಮಾಡಿದ್ದರು. ತಮ್ಮ ಜೀವನದ ಕೊನೆಯ ದಿನಗಳಲ್ಲಿ ಶ್ರೀಲ ಪ್ರಭುಪಾದರು ನಾರಾಯಣ ಮಹಾರಾಜರೇ, ತಮ್ಮ ದೇಹತ್ಯಾಗದ ನಂತರದ ಸಮಾಧಿ ವಿಧಿಗಳನ್ನು ನೆರವೇರಿಸಬೇಕೆಂದು ಕೋರಿಕೊಂಡರು. ಶ್ರೀಲ ನಾರಾಯಣ ಮಹಾರಾಜರು, ಪ್ರಭುಪಾದರ ಆಶಯದಂತೆ ಪ್ರಭುಪಾದರ ಸಮಾಧಿ ಕಾರ್ಯಗಳನ್ನು ನೆರವೇರಿಸಿದರು.

ಶ್ರೀಲ ನಾರಾಯಣ ಮಹಾರಾಜರು ಅರ್ಧ ಶತಮಾನದಿಂದಲೂ ತಮ್ಮ ಗುರುಗಳ ಆಶಯದಂತೆ ವಿಶ್ವದಾದ್ಯಂತ ಶ್ರೀ ಕೃಷ್ಣ ಭಕ್ತಿಯನ್ನು ಪ್ರಚುರಪಡಿಸುತ್ತಿದ್ದಾರೆ. ದಿವ್ಯ ದಂಪತಿಗಳಾದ ಶ್ರೀ ರಾಧಾ-ಕೃಷ್ಣರ ಹಾಗೂ ಶ್ರೀ ಚೈತನ್ಯ ಮಹಾಪ್ರಭುಗಳ ಸೇವೆಯನ್ನು ಮಾಡುತ್ತ ತಮ್ಮ ಜೀವನವನ್ನು ಶ್ರೀ ಕೃಷ್ಣ ಶುದ್ಧ ಭಕ್ತಿಗೇ ಮೀಸಲಿಟ್ಟಿದ್ದಾರೆ. ಜಾತಿಮತ ಬೇಧವಿಲ್ಲದೆ ಜನಸಾಮಾನ್ಯರು ಶ್ರೀ ಕೃಷ್ಣನಲ್ಲಿ ಶುದ್ಧಭಕ್ತಿಯನ್ನು ಮಾಡಲು ಅನುಕೂಲವಾಗಲೆಂದು www.purebhakti.com ಎಂಬ ಅಂತರ್ಜಾಲ ತಾಣವನ್ನು ಸ್ಥಾಪಿಸಿದ್ದಾರೆ. ಈ ತಾಣದಲ್ಲಿ ಗುರುಗಳ ಭೋದನೆಗಳು ಹಾಗೂ ಪ್ರವಚನಗಳನ್ನು ಓದಬಹುದು.

ಜನಸಾಮಾನ್ಯರು ತಮ್ಮ ದೈಹಿಕ ಹಾಗೂ ಮಾನಸಿಕ ತೊಂದರೆಗಳನ್ನು ನೀಗಿಸಿಕೊಳ್ಳಲು ಕೆಳಗೆ ಕೊಟ್ಟಿರುವ ಶ್ರೀ ಹರೇ ಕೃಷ್ಣ ಮಹಾಮಂತ್ರವನ್ನು ದಿನವೂ ಜಪಿಸಬೇಕೆಂದು ತಿಳಿಸುತ್ತಾರೆ.

ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ II
ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ II

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+