ಬಿಜೆಪಿಗೆ ಹೊಸಮುಖಗಳು ಬೇಕು ಆರೆಸ್ಸೆಸ್ ತಾಕೀತು
ರಾಜಕೀಯದಲ್ಲಿದ್ದವರಿಗೆ ವಯಸ್ಸಾಗುವುದೇ ಇಲ್ಲ , ವಯಸ್ಸಾದಷ್ಟೂ ಅಧಿಕಾರದ ಪ್ರಮಾಣ ಅವರಿಗೆ ಹೆಚ್ಚು ಲಭ್ಯವಾಗುತ್ತದೆ ಎಂಬ ದೇಶ ನಮ್ಮದು. ಇನ್ನು ರಾಜಕಾರಣಿಗಳಿಗೂ ನಿವೃತ್ತಿ ವಯಸ್ಸು ಎನ್ನುವುದಿರಬೇಕು ಎಂಬ ಮಾತು ಆಗಾಗ ಮಾಧ್ಯಮಗಳಲ್ಲಿ ಕೇಳಿಬಂದರೂ ಆ ವಾದಕ್ಕೆ ಸಂವಿಧಾನದ ಬೆಂಬಲವಿಲ್ಲ. ಯಾವುದೇ ಕಾನೂನು ಕಟ್ಟಳೆಗಳಿಲ್ಲ. 70-80 ವರ್ಷ ದಾಟಿದವರು ತಮ್ಮಷ್ಟಕ್ಕೆ ತಾವೇ ನಿವೃತ್ತಿ ಪಡೆಯಬಹುದು. ಆದರೆ ಅಧಿಕಾರದಲ್ಲಿ ಸಾಯುವವರೆಗೂ ಎಂಬ ತೀರ್ಮಾನವನ್ನು ಕೆಲವರು ಕೈಗೊಂಡಿರುವುದರಿಂದ ಯುವಕರು ಮತ್ತು ಹಿರಿಯರ ನಡುವೆ ತಿಕ್ಕಾಟ ಉದ್ಭವಾಗುವುದು ಸಹಜ.
ಈ ವಿದ್ಯಮಾನ ಎಲ್ಲ ಪಕ್ಷಗಳಿಗೆ ಅನ್ವಯಿಸುವುದಾದರೂ ಸದ್ಯಕ್ಕೆ ಭಾಜಪದಲ್ಲಿ ಭುಗಿಲೆದ್ದಿರುವುದು ಸರ್ವವೇದ್ಯ. ಹಾಗೆ ನೋಡಿದರೆ ಭಾಜಪದಲ್ಲಿ ಹಿರಿಯರನ್ನು ಕೆಳಗಿಳಿಸಿ ಯುವ ಮುಂದಾಳುಗಳಿಗೆ ನಾಯಕತ್ವ ಕೊಡಬೇಕು ಎಂಬ ನೀತಿನಿಯಮವೇನೂ ಇಲ್ಲ. ಅಡ್ವಾಣಿಯವರು ಕಂದಹಾರ್ ಕಣಿವೆಯಲ್ಲಿ ಎಡವಿಬಿದ್ದರೆಂಬ ಆಪಾದನೆ, 2009ರ ಲೋಕಸಭಾ ಚುನಾವಣೆಗಳಲ್ಲಿ ಭಾರೀ ಹಿನ್ನಡೆಯಾದದ್ದಕ್ಕೆ ಅಡ್ವಾಣಿ, ರಾಜನಾಥ್ ಮುಂತಾದ ನಾಯಕರು ಹೊಣೆಹೊರಬೇಕು ಎಂಬ ಒತ್ತಡ ಬಂದದ್ದರಿಂದ ವಯಸ್ಸು, ಹಿರಿಯ ಕಿರಿಯ ಎಂಬ ಕಾರಣಗಳು ಇವತ್ತು ಎದ್ದು ಕಾಣುತ್ತಿವೆ.
ಅಂದಹಾಗೆ, ಭಾರತೀಯ ಜನತಾ ಪಕ್ಷದಲ್ಲಿ ಯಾರ್ಯಾರಿಗೆ ಎಷ್ಟೆಷ್ಟು ವಯಸ್ಸಾಯಿತು? ಗಮನಿಸೋಣ. ಅಡ್ವಾನಿಯವರಿಗೆ 83, ರಾಜನಾಥ ಸಿಂಗ್ ಅವರಿಗೆ 58, ಸುಷ್ಮ ಸ್ವರಾಜ್ ಅವರಿಗೆ 57, ಅರುಣ್ ಜೇಟ್ಲಿಗೆ 52, ಅನಂತ್ ಕುಮಾರ್ ಅವರಿಗೆ 50, ವೆಂಕಯ್ಯ ನಾಯ್ಡುಗೆ 60, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಚೌಹಾಣ್, ನರೇಂದ್ರ ಮೋದಿಗೆ 59, ನಮ್ಮವರೇ ಆದ ಯಡಿಯೂರಪ್ಪ ಅವರಿಗೆ 63. ಸರಾಸರಿ 60 ಎಂದು ಇಟ್ಟುಕೊಳ್ಳಬಹುದು.
ಒಟ್ಟಿನಲ್ಲಿ ಬಿಜೆಪಿಯಲ್ಲಿ ಹೊಸ ನೀರು ಹರಿಯುವ ಸಾಧ್ಯತೆಯೆಂತೂ ಸ್ಪಷ್ಟವಾಗಿದೆ. ಆದರೆ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿನುಭವಿಸಿ ಭಾರಿ ಪೆಟ್ಟುನ್ನಂತೂ ತಿಂದು ಚಿತ್ರಾನ್ನಾವಾಗಿದೆ. ಏಟು ತಿಂದು ಗ್ಯಾರೇಜ್ ಕಂಡಿರುವ ಬಿಜೆಪಿ ರಿಪೇರಿ ಮಾಡುವ ಕೆಲಸ ಹೊಸಬರು ಮಾಡಬೇಕಾಗಿದೆ. ಆದರೆ, ಸದ್ಯಕ್ಕೆ ಪಕ್ಷದ ಸಾರಥಿ ಆಗುವ ಮಂದಿಯಲ್ಲಿ ಪಕ್ಷ ಸಂಘಟಿಸುವ ಮತ್ತೆ ಅಧಿಕಾರಕ್ಕೆ ತರುವಂಥ ಸಾಮರ್ಥ್ಯವಿದೆಯೇ ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ. ದೇಶ ಕಂಡ ಹಿರಿಯ ರಾಜಕೀಯ ಮುತ್ಸದ್ಧಿ ಲಾಲ್ ಕೃಷ್ಣ ಅಡ್ವಾಣಿ ಐದು ದಶಕಗಳ ಪ್ರಚಂಡ ರಾಜಕಾರಣ ಮಾಡಿದವರು.
ಬಿಜೆಪಿ ಎಂಬ ಚಿಕ್ಕ ಪಕ್ಷವನ್ನು ಆಲದ ಮರದಂತಿರುವ ಕಾಂಗ್ರೆಸ್ ಗೆ ಸರಿಸಮಾನಾಗಿ ಬೆಳೆಸಿದರು. ಇಂತಹ ಧೀಮಂತ ನಾಯಕನ ರಾಜಕೀಯದ ಜೀವನ ದುರಂತದಲ್ಲಿ ಅಂತ್ಯ ಕಂಡಿದ್ದು ಖೇದಕರ ಸಂಗತಿ. ಭಾರತದ ರಾಜಕೀಯ ಅಂದಾಕ್ಷಣ ನೆಹರು, ಇಂದಿರಾಗಾಂಧಿ, ವಾಜಪೇಯಿ, ಅಡ್ವಾಣಿ ಎಂಬ ಕೀರ್ತಿಗೆ ಪಾತ್ರರಾಗಿದ್ದ ಅವರು ಕೊನೆಗಾಲದಲ್ಲಿ ಪಕ್ಷದ ನಡೆಸಿಕೊಂಡ ರೀತಿ ಸಂಕಟ ಬರುವಂತಿದೆ. ಹೀಗೆ ತಮ್ಮದೆ ಸಹದ್ಯೋಗಿಗಳಿಂದ ಅವಮಾನಕ್ಕೀಡಾಗಿ ಹುದ್ದೆ ತ್ಯಜಿಸುತ್ತಿರುವುದು ಅವರ ರಾಜಕೀಯ ಶತ್ರುಗಳಲ್ಲಿ ಕೂಡಾ ಅಯ್ಯೋ ಛೇ ಹೀಗಾಗಬಾರದಿತ್ತು ಮನಸ್ಸೊಳಗೆ ಅಂದುಕೊಂಡಿರಲಿಕ್ಕೂ ಸಾಕು.
(ದಟ್ಸ್ ಕನ್ನಡ ವಾರ್ತೆ)