ಚಿತ್ತಾಪುರದಲ್ಲಿ ಸಿಡಿದೆದ್ದ ನಾಗಾವಿ ಯಲ್ಮಮ್ಮ ಭಕ್ತರು
ಗುಲಬರ್ಗಾ, ಆ. 30 : ಚಿತ್ತಾಪುರದಲ್ಲಿ ಗುಲಬರ್ಗಾ ಜಿಲ್ಲಾಧಿಕಾರಿ ಡಿಸಿ ಸತ್ಯಮೂರ್ತಿ ಮೇಲ್ವಿಚಾರಣೆಯಲ್ಲಿ ನಾಗಾವಿ ಯಲ್ಲಮ್ಮ ದೇವಸ್ಥಾನದಲ್ಲಿ ಅಹೋರಾತ್ರಿ ಹೋಮ ನಡೆದಿರುವುದು ಸ್ಥಳೀಯರ ಕಣ್ಣು ಕೆಂಪಾಗುವಂತೆ ಮಾಡಿದೆ.
ಚಿತ್ತಾಪುರ ಕ್ಷೇತ್ರದಲ್ಲಿ ಹೊಸದಾಗಿ ಆಯ್ಕೆಯಾಗಿರುವ ವಿಧಾನಸಭಾ ಸದಸ್ಯ ವಾಲ್ಮಿಕಿ ನಾಯಕ್ ಮತ್ತಿತರ ಗಣ್ಯರ ಸಮ್ಮುಖದಲ್ಲಿ ಪೂಜೆ, ಹೋಮ ನಡೆದಿರುವುದು ಜನರ ಧಾರ್ಮಿಕ ಮನೋಭಾವನ್ನು ಕೆರಳಿಸಿದೆ. ಯಲ್ಮಮ್ಮ ದೇವರನ್ನು ಬದಲಾಯಿಸಲು ಕೆಲವರು ಹುನ್ನಾರ ನಡೆಸಿದ್ದಾರೆ, ಜನರ ಭಾವನೆಗಳಿಗೆ ಘಾಸಿ ಉಂಟು ಮಾಡಿದ್ದಾರೆ ಎಂದು ಭಕ್ತಾದಿಗಳು ಭಾನುವಾರ ಪ್ರತಿಭಟನೆ ನಡೆಸಿದರು.
ಭಕ್ತರ ಭಾವನೆಯನ್ನು ಕೆರಳಿಸಿದ ಜಿಲ್ಲಾಧಿಕಾರಿ ಡಿಸಿ ಸತ್ಯಮೂರ್ತಿ ಅವರ ವಿರುದ್ಧ ಕೂಡಲೆ ಕ್ರಮ ಕೈಗೊಳ್ಳಬೇಕು ಮತ್ತು ದೇವಸ್ಥಾನದಲ್ಲಿ ಯಾವುದೇ ಬದಲಾವಣೆ ಸಂಭವಿಸದಂತೆ ಸರಕಾರ ಕಾರ್ಯತತ್ಪರವಾಗಬೇಕು ಎಂದು ಪ್ರತಿಭಟನಾಕಾರರು ಬೇಡಿಕೆಯನ್ನಿಟ್ಟಿದ್ದಾರೆ.
ತಲತಲಾಂತರದಿಂದ ಲಿಂಗಾಯತ ಕೋಮಿನವರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತ ಬಂದಿದ್ದಾರೆ. ಸಂಜೆ 6 ಗಂಟೆಯ ನಂತರ ದೇವಸ್ಥಾನದಲ್ಲಿ ಪೂಜೆ ನಡೆಯುವುದಿಲ್ಲ. ಆದರೆ, ಶನಿವಾರ ಸಂಜೆ ಆರು ಗಂಟೆಯ ನಂತರ 11 ಜನ ಅರ್ಚಕರು ಸೇರಿದಂತೆ ಕೆಲ ಪುಢಾರಿಗಳು ದೇವಸ್ಥಾನ ಪ್ರವೇಶಿಸಿ ಹೋಮ ನಡೆಸಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ದೇವಸ್ಥಾನಕ್ಕೆ ಧಾವಿಸಿದ ಭಕ್ತರು ಹೋಮದಲ್ಲಿ ತೊಡಗಿದ್ದ ಅರ್ಚಕರಿಗೆ ಧರ್ಮದೇಟು ನೀಡಿದ್ದಾರೆ.
ಚಿತ್ತಾಪುರ ಬಂದ್ ಗೆ ಕರೆ : ಯಲ್ಲಮ್ಮ ದೇವರನ್ನು ಬದಲಾಯಿಸುಲು ನಡೆಸಿದ ಹುನ್ನಾರವನ್ನು ವಿರೋಧಿಸಿ ಪ್ರತಿಭಟನಾಕಾರರು ಸೋಮವಾರ ಚಿತ್ತಾಪುರ ಬಂದ್ ಗೆ ಕರೆ ನೀಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)