ಭಲೇ ಸ್ತ್ರೀಶಕ್ತಿ : ಲೋಕಾಯುಕ್ತರ ಬಲೆಗೆ ಲಂಚಕೋರ

ತಾಲೂಕಿನ ಮೋಳೆ ಗ್ರಾಮದ ಸ್ತ್ರೀ ಶಕ್ತಿ ಸ್ವಸಹಾಯ ಸಂಘದ ಪ್ರತಿನಿಧಿಯಾಗಿರುವ ಕೆಂಪಮ್ಮ ಎಂಬುವರಿಗೆ 5 ಲಕ್ಷ ರು. ಸಾಲಕ್ಕೆ ಸಿಗುವ 1.25 ಲಕ್ಷ ರು. ಸಬ್ಸಿಡಿ ಕೊಡಿಸಲು ಮಂಜುನಾಥ್ ಹಾಗೂ ಅವರ ಸಹಾಯಕ ಆನಂದ್ ಕೆಂಪಮ್ಮ ಅವರಿಂದ 12,500 ರೂ. ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ.
ಘಟನೆಯ ವಿವರ : ಕೆಂಪಮ್ಮ ನೀಡಿರುವ ವಿವರಣೆಯಂತೆ ತಮ್ಮ ಸ್ವಸಹಾಯ ಸಂಘದ ಗುಂಪು ಚಟುವಟಿಕೆಗಾಗಿ ಬ್ಯಾಂಕ್ನಲ್ಲಿ ಸಾಲಕ್ಕಾಗಿ ಅರ್ಜಿ ಹಾಕಿದ್ದರು. ಬ್ಯಾಂಕ್ನಿಂದ 5 ಲಕ್ಷ ರು. ಸಿಗುವುದಲ್ಲದೆ, ಜಿ.ಪಂ. ವತಿಯಿಂದ ಆ ಸಾಲಕ್ಕೆ 1.25 ಲಕ್ಷರೂ. ಸಬ್ಸಿಡಿ ದೊರೆಯುತ್ತಿತ್ತು. ಈ ಸಬ್ಸಿಡಿ ಪಡೆಯಲು ಕೈಗಾರಿಕಾ ತರಬೇತಿ ಕೇಂದ್ರದ ವಿಸ್ತರಣಾಧಿಕಾರಿಯ ಅಂಕಿತ ಬೀಳಬೇಕಿತ್ತು. ಇದಕ್ಕಾಗಿ ಕೆಂಪಮ್ಮ ಕೈಗಾರಿಕಾ ವಿಸ್ತರಣಾಧಿಕಾರಿ ಮಂಜುನಾಥ್ ಅವರನ್ನು ಕೇಳಿದಾಗ ಸಬ್ಸಿಡಿ ಹಣದಲ್ಲಿ ತಮಗೂ ಪಾಲು ನೀಡಲು ಒತ್ತಾಯ ಹೇರಿದರು. 15 ಸಾವಿರ ರೂ. ಲಂಚ ನೀಡುವುದಾದರೆ ಸಬ್ಸಿಡಿ ಹಣ ಕೊಡಿಸುವುದಾಗಿ ತಿಳಿಸಿದ್ದರು. ಆದರೆ ಕೆಂಪಮ್ಮ ತಾವು ಬಡವರು, ಅಷ್ಟೊಂದು ಹಣ ನೀಡಲು ಸಾಧ್ಯವಾಗುವುದಿಲ್ಲ. ದಯಮಾಡಿ ಕರುಣೆ ತೋರುವಂತೆ ಕೇಳಿಕೊಂಡಿದ್ದರಾದರೂ ಇದಕ್ಕೆ ಸೊಪ್ಪು ಹಾಕದ ಮಂಜುನಾಥ್, ಲಂಚದ ಹಣದಲ್ಲಿ ಸ್ವಲ್ಪ ಕಡಿಮೆ ಮಾಡಿ, 12,500 ರೂ. ನೀಡುವಂತೆ ತಾಕೀತು ಮಾಡಿದ್ದರು.
ಕೆಂಪಮ್ಮ ಈ ಬಗ್ಗೆ ಲೋಕಾಯುಕ್ತರಿಗೆ ಲಿಖಿತ ದೂರು ಸಲ್ಲಿಸಿದ್ದರಿಂದ ಪಟ್ಟಣಕ್ಕೆ ಆಗಮಿಸಿದ್ದ ಲೋಕಾಯುಕ್ತರು ಮಂಜುನಾಥ್ಗೆ ಬಲೆಬೀಸಿದ್ದರಿಂದ ಮಂಜುನಾಥ್ ಹಾಗೂ ಸಹಾಯಕ ಆನಂದ್ ಮೂಲಕ ಲಂಚ ಸ್ವೀಕರಿಸುವಾಗ ಮಾಲು ಸಮೇತ ಸಿಕ್ಕಿಬಿದ್ದಿದ್ದಾರೆ. ಲೋಕಾಯುಕ್ತ ಎಸ್.ಪಿ. ಕೆ.ಎಸ್.ಮೋಹನ್, ಡಿವೈಎಸ್ಪಿ ಮಂಜಪ್ಪ ಮತ್ತು ತಂಡ ಕಾರ್ಯಾಚರಣೆ ನಡೆಸಿ, ಇಬ್ಬರು ಮಿಕಗಳನ್ನು ಬಲೆಗೆ ಬೀಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಎಸ್.ಪಿ. ಮೋಹನ್, ಹಣ ಕೇಳಿರುವುದಕ್ಕೆ ಮೊಬೈಲ್ನಲ್ಲಿ ಧ್ವನಿಮುದ್ರಣವಿದ್ದು, ಈ ಬಗ್ಗೆ ಪರಿಶೀಲನೆ ನಡೆಸಿ, ಆರೋಪಿಗಳಿಬ್ಬರನ್ನು ದಸ್ತಗಿರಿ ಮಾಡುವುದಾಗಿ ತಿಳಿಸಿದರು.












Click it and Unblock the Notifications