ಹಂದಿಜ್ವರಕ್ಕೆ 14 ಮಂದಿ ಬಲಿ
ನವದೆಹಲಿ, ಆ. 12 : ದೇಶದ್ಯಾಂತ ಹಂದಿಜ್ವರ ಉಲ್ಬಣಗೊಂಡಿದ್ದು, ನಾಸಿಕ್ ವೈದ್ಯಾಧಿಕಾರಿಯೊಬ್ಬರು ಈ ಸೋಂಕಿನಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಈ ಮೂಲಕ ಹಂದಿಜ್ವರದಿಂದ ಸತ್ತಿರುವವರ ಸಂಖ್ಯೆ 14ಕ್ಕೆ ಏರಿದೆ. ರಾಜ್ಯದಲ್ಲೂ ಸೋಂಕು ಹಬ್ಬತೊಡಗಿದ್ದು, ಬೆಳಗಾವಿಯಲ್ಲಿ ಮತ್ತಿಬ್ಬರಿಗೆ ಹಂದಿಜ್ವರ ಕಾಣಿಸಿಕೊಂಡಿದೆ. ಈ ಇಬ್ಬರು ಕಳೆದ ವಾರದಿಂದ ಮುಂಬೈನಿಂದ ಬೆಳಗಾವಿಗೆ ಆಗಮಿಸಿದ್ದರು ಎಂದು ತಿಳಿದು ಬಂದಿದೆ.
ಪುಣೆ ನಗರದಲ್ಲಿ ಇದರ ಹಾವಳಿ ತೀವ್ರಗೊಂಡಿದ್ದು, ಮಂಗಳವಾರ ಸಸೂನ್ ಆಸ್ಪತ್ರೆಗೆ ದಾಖಲಾಗಿದ್ದ 29 ವರ್ಷದ ಮಹಿಳೆ ಸಾವನ್ನಪ್ಪಿದ್ದರು. ಅಲ್ಲದೇ ಬುಧವಾರಕೂಡಾ ಇದೇ ಆಸ್ಪತ್ರೆ 35 ವರ್ಷದ ಸಂಜಯ್ ಮಿಸ್ತ್ರಿ ಎಂಬುವವರು ಎಚ್ 1 ಎನ್ ವೈರಾಣುವಿನಿಂದ ಮೃತಪಟ್ಟಿದ್ದರು. ಕೇರಳದಲ್ಲಿ ಕೂಡಾ ಈ ಮಾರಿಗೆ ಮೊದಲ ಬಲಿಯಾಗಿದ್ದು, 35 ವರ್ಷದ ವಿಲ್ಸನ್ ಎಂಬುವವರು ತಿರುವನಂತಪುರಂ ಕೇರಳ ವೈದ್ಯಕೀಯ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಮಂಗಳವಾರ ಒಂದೇ ದಿನ 119 ಮಂದಿಯಲ್ಲಿ ಎಚ್ 1ಎನ್ 1 ಸೋಂಕು ಇರುವುದು ಪತ್ತೆಯಾಗಿದೆ. ಜಮ್ಮು, ಓಸ್ಮಾನಬಾದ್, ನಾಗಪುರ್, ನಾಸಿಕ್, ಮಣಿಪಾಲ್ ನಗರಗಳಲ್ಲಿ ಸೋಂಕಿರುವ ವ್ಯಕ್ತಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಭಾರತದಲ್ಲಿ ಒಟ್ಟು 1079 ಮಂದಿಯಲ್ಲಿ ಹಂದಿಜ್ವರ ಕಾಣಿಸಿಕೊಂಡಿದ್ದು, ಅದರಲ್ಲಿ 589 ಮಂದಿಯ ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
(ಏಜನ್ಸೀಸ್)