ಶಿವಮೊಗ್ಗದಲ್ಲಿ ಭಾರೀ ಮೊತ್ತದ ಅಕ್ರಮ ಸ್ಪಿರಿಟ್ ವಶ
ಶಿವಮೊಗ್ಗ, ಆ. 6 : ಮಧ್ಯಪ್ರದೇಶದ ಇಂದೋರ್ನಿಂದ ಮದ್ಯಸಾರ ತುಂಬಿದ ಕ್ಯಾನ್ಗಳನ್ನು ಅಕ್ರಮವಾಗಿ ಶಿವಮೊಗ್ಗಕ್ಕೆ ಸಾಗಿಸುತ್ತಿದ್ದ ಭಾರೀ ವಾಹನವೊಂದನ್ನು ಶಿವಮೊಗ್ಗ ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧ ವಿಭಾಗದ ವಿಶೇಷ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಎಸ್.ಕೆ.ಪ್ರಹ್ಲಾದ್ ನೇತೃತ್ವದ ತಂಡ ಸಾಹಸ ಮೆರೆದು ಬಲೆಗೆ ಬೀಳಿಸಿಕೊಂಡಿದೆ. ಮೂವರನ್ನು ಬಂಧಿಸಲಾಗಿದ್ದು, 24 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯಸಾರ ಹಾಗೂ ಕಾರ್ಗೋಕಂಟೈನರ್ ವಾಹನವೊಂದನ್ನು ವಶಪಡಿಸಿಕೊಳ್ಳಲಾಗಿದೆ.
ಇಲಾಖೆಯ ಐಜಿಪಿ ಮತ್ತು ಎಸ್ಪಿಯವರ ಆದೇಶದ ಮೇರೆಗೆ ಎಸ್.ಕೆ.ಪ್ರಹ್ಲಾದ್ ಅವರ ತಂಡ ಹೊಂಚು ಹಾಕಿ, ಹೊಳೆಹೊನ್ನೂರು ಕಡೆಯಿಂದ ಶಿವಮೊಗ್ಗದತ್ತ ಬರುತ್ತಿದ್ದ ಕಾರ್ಗೋಕಂಟೈನರ್ ವಾಹನವನ್ನು ಶಿವಮೊಗ್ಗ ರೈಲ್ವೇ ಗೇಟ್ ಸಮೀಪ ನಿಲ್ಲಿಸಿ ಸುತ್ತುವರೆಯಿತು. ಮೂವರು ಆರೋಪಿಗಳಾದ ಇಂದೋರಿನ ವಾಸಿಗಳಾದ ಚಾಲಕ ರಾಮ್ ಆಸರೆ ಪಾಂಡೆ, ಕ್ಲೀನರ್ ಸೆಲ್ವಿನ್ ಹಾಗೂ ಶಿವಮೊಗ್ಗ ಸವಾರ್ಲೈನ್ ರಸ್ತೆಯ ವಾಸಿ ಶಿವಾನಂದನನ್ನು ಬಂಧಿಸಲಾಯಿತು.
ವಾಹನವನ್ನು ಪರಿಶೀಲಿಸಿದಾಗ 35 ಲೀಟರ್ ಸಾಮರ್ಥ್ಯದ ಒಟ್ಟು 172 ಬಿಳಿ ಕ್ಯಾನ್ಗಳು ದೊರೆತವು. 172 ಕ್ಯಾನ್ಗಳಲ್ಲಿದ್ದ ಒಟ್ಟು 6020 ಲೀಟರ್ ಸ್ಪಿರಿಟ್ ವಶಪಡಿಸಿಕೊಳ್ಳಲಾಯಿತು. ಎಸ್.ಕೆ.ಪ್ರಹ್ಲಾದ್ರವರ ತಂಡದೊಂದಿಗೆ ಚಿತ್ರದುರ್ಗದ ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧ ದಳದ ವಿಶೇಷ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಎಸ್.ಕೆ.ಪ್ರಹ್ಲಾದ್ರವರ ಈ ಸಾಹಸವನ್ನು ಇಲಾಖೆಯ ಹಿರಿಯ ಅಧಿಕಾರಿಗಳು ಪ್ರಶಂಸಿಸಿದ್ದಾರೆ.












Click it and Unblock the Notifications