ಬರಪೀಡಿತ ರಾಜಸ್ಥಾನಕ್ಕೆ ಹರಿದುಬಂದ ಆಕಾಶಗಂಗೆ
ಭರತಖಂಡದ ಮಹೋನ್ನತ ನದಿಗಳಲ್ಲಿ ಗಂಗಾನದಿಯೂ ಒಂದು. ಗಂಗೆ ಕೇವಲ ನೀರಲ್ಲ, ಪಾವಿತ್ರ್ಯದ ಸಂಕೇತವೂ ಹೌದು ಎನ್ನುವುದು ಹಿಂದೂಗಳ ನಂಬಿಕೆ. ಉತ್ತರಖಂಡದ ಹಿಮಾಲಯದಲ್ಲಿ ಜನಿಸಿ ಪಶ್ಚಿಮ ಬಂಗಾಲದ ಸುಂದರಬನದವರೆವಿಗೂ ಹರಿಯುವ ಗಂಗೆಯ ಪಾತ್ರ ವಿಶಾಲವಾದದ್ದು. ಆದರೆ ಉಷ್ಣವಲಯಕ್ಕೆ ಸೇರಿದ, ಬರಗಾಲಕ್ಕೆ ತುತ್ತಾಗುವ ರಾಜಸ್ತಾನವೆಲ್ಲಿ ಅಥವಾ ಚೀನಾದ ಗಿಯಾಂಗ್ ಮುನಿಸಿಪಾಲಿಟಿ ಎಲ್ಲಿ. ಅಲ್ಲಿಯವರೆಗೆ ಗಂಗೆ ತನ್ನ ಕೈಚಾಚುವುದಿಲ್ಲ. ಆದರೇನಂತೆ, ಸದಾ ನೀರಿಗೆ ಕೊರತೆ ಕಾಣುವ ರಾಜಸ್ಥಾನದಲ್ಲಿ ಈಗ ಗಂಗೆ ಅಂದರೆ ನೀರು ನಲಿದಾಡುತ್ತಿದ್ದಾಳೆ. ನೀರಿನ ಆಭಾವ ದಿನೇದಿನೇ ಕಡಿಮೆ ಆಗುತ್ತಿದೆ. ಇದಕ್ಕೆ ಕಾರಣ, ಆಕಾಶ ಗಂಗಾ!
ಮಳೆ ನೀರನ್ನು ಉಳಿಸಿಕೊಳ್ಳುವ ಮಹದಾಶೆಯ ಯೋಜನೆಯಿದು. ಈ ಪದ್ದತಿಗೆ ಮಳೆ ನೀರು ಕೊಯಿಲು ಎಂದು ಈಗೀಗ ಜನಜನಿತ. ಈ ಯೋಜನೆ ರಾಜಾಸ್ಥಾನದ ಆರು ಹಳ್ಳಿಗಳಲ್ಲಿ ಚಾಲ್ತಿಗೆ ಬಂದಿದೆ. ಯಥಾಪ್ರಕಾರ ಯೋಜನೆಗೆ ಬಂಡವಾಳ ಹರಿದುಬಂದಿರುವುದು ವಿಶ್ವಬ್ಯಾಂಕಿನಿಂದ. ಇತ್ತೀಚಿನ ವರದಿಗಳ ಪ್ರಕಾರ ವಿಶ್ವಬ್ಯಾಂಕ್ ಮತ್ತು ರಾಜಸ್ಥಾನ ಸರಕಾರದ ನಡುವೆ ಏರ್ಪಟ್ಟಿರುವ ಒಡಂಬಡಿಕೆಯ ಪ್ರಕಾರ ಆಕಾಶ ಗಂಗಾ ಯೋಜನೆಯನ್ನು ರಾಜ್ಯದ 70 ಹಳ್ಳಿಗಳಿಗೆ ವಿಸ್ತರಿಸಲಾಗುತ್ತಿದೆ. ಈ ಯೋಜನೆಯಿಂದಾಗಿ 2 ಲಕ್ಷ ಗ್ರಾಮೀಣ ಜನತೆಗೆ ನೀರು ಲಭ್ಯವಾಗುತ್ತದೆ.
ಸ್ವತಂತ್ರ ಭಾರತದ ಅತ್ಯಂತ ಜಟಿಲ ಸಮಸ್ಯೆಯೆಂದರೆ ನೀರು ಲಭ್ಯತೆ ಎನ್ನುತ್ತಾರೆ ಆಕಾಶ ಗಂಗಾ ಯೋಜನೆಯ ಪ್ರೇರಕ ಶಕ್ತಿ ಬಿ.ಪಿ. ಅಗರ್ ವಾಲ್. ಅವರು Sustainable Innovations (SI)ಸಂಸ್ಥೆಯ ಅಧ್ಯಕ್ಷರು. ಈ ಸಂಸ್ಥೆ 2007ರಲ್ಲಿ ಪ್ರಾರಂಭವಾಯಿತು. ಸುರಕ್ಷಿತ ಕುಡಿಯುವ ನೀರನ್ನು ಗ್ರಾಮೀಣ ಪ್ರದೇಶಗಳಿಗೆ ಒದಗಿಸುವುದೇ ಆಕಾಶ ಗಂಗೆಯ ಉದ್ದೇಶ. ಈ ಸಂಸ್ಥೆಯ ಇನ್ನೊಂದು ಯೋಜನೆ Arogya Ghar - whole health clinic. ಈ ಯೋಜನೆ ಕಂಡ ಯಶಸ್ಸು ವಿಶ್ವಬ್ಯಾಂಕಿನ ಪ್ರಶಸ್ತಿಗೆ ಪಾತ್ರವಾಗಿದೆ.
ಆಕಾಶ ಗಂಗಾ ಯೋಜನೆ ಕುರಿತಾದ ಸಮಗ್ರ ಲೇಖನವನ್ನು ಇಂಡಿಯಾ ನಾಲೆಡ್ಜ್ ವಾರ್ ಟನ್ ಸಂಸ್ಥೆ ತನ್ನ ವೆಬ್ ಪುಟಗಳಲ್ಲಿ ದಾಖಲಾಗಿದೆ. ಕರ್ನಾಟಕದಲ್ಲಿ ಮಳೆ ನೀರು ಕೊಯಿಲು, ಗ್ರಾಮೀಣ ಕುಡಿಯುವ ನೀರಿನ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಆಸಕ್ತಿಯಿರುವವರು ಓದಬಹುದು.